ಈ ವರ್ಷದ ಕರ ಸಲ್ಲಿಕೆಯಲ್ಲಿ ಹೊಸತೇನಿದೆ?
Team Udayavani, Jun 25, 2018, 3:03 PM IST
ಈ ಗುರುಗುಂಟಿರಾಯರು ಯಾವತ್ತಿಗೂ ನನ್ನನ್ನು ಶಾಂತಿ ಯಿಂದ ಬದುಕಲು ಬಿಡುವ ಲಕ್ಷಣ ಕಾಣುವುದಿಲ್ಲ. ಯಾವತ್ತೂ ಏನಾದರೊಂದು ಕಿರಿಕಿರಿ ಇದ್ದದ್ದೇ. ಏನಾದರೊಂದು ಸಣ್ಣ ಪಾಯಿಂಟ್ ಹಿಡ್ಕೊಂಡು ಇನ್ನಿಲ್ಲದಂತೆ ಚೊರೆ ಮಾಡುವುದು ಅವರ ಹಳೆಯ ಜಾಯಮಾನ.
ಕಳೆದ ಸೋಮವಾರವೂ ಹಾಗೆಯೇ ಆಯಿತು. ಕಾಕು ಪ್ರಿಂಟ್ ಆಗಿ ಬೆಳಗ್ಗೆ ಅವರ ಮನೆ ತಲುಪಿದ್ದೇ ತಡ; ನನಗೆ ಒಂದು ಫೋನ್ ಕಾಲ…. ಮೊಳೆಯಾರ್ರೆ, ಆದಾಯ ತೆರಿಗೆಯ ಬಗ್ಗೆ ಎಯಿr ಸಿಸಿ, ಸಿಕ್ಸಿ$r ಎಮ್ಮೆಲ್ ಎಂದೆÇÉಾ ವರ್ಷಕ್ಕೆರಡು ಬಾರಿ ಕೊರೆದದ್ದನ್ನೇ ಕೊರೆದು ಉದಯವಾಣಿಯ ಪುಟ ಹಾಳು ಮಾಡುವ ಬದಲು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಏನೇನು ಬದಲಾವಣೆ ಬಂದಿದೆ ಎಂಬುದಾಗಿ ಬರೆದರೆ ಜಾಸ್ತಿ ಸ್ಪಷ್ಟತೆ ಇರುತ್ತದೆ ಅನಿಸುತ್ತದೆ. ಹಾಗಾಗಿ ಮುಂದಿನ ಸೋಮವಾರ ಒಂದು ಎಪಿಸೋಡು ಈ ಬದಲಾವಣೆಗಳ ಬಗ್ಗೆ ಬರೆದು ಕೃತಾರ್ಥರಾಗಬೇಕು ಎಂದು ಅಪ್ಪಣೆ ನೀಡಿದರು.
ಆ ಪ್ರಯುಕ್ತ ಇವತ್ತಿನ ಕಾಕು ಇದೋ ಈ ಕೆಳಗೆ ಬರೆದು ಕೃತಾರ್ಥನಾಗಿದ್ದೇನೆ. ರಾಯರಿಗೆ ಶಾಂತಿ ಮಾಡದೆ ನಮ್ಮ ಗಾಡಿ ಮುಂದೆ ಹೋಗುವಂತೆಯೇ ಇಲ್ಲ.
***
ಕಳೆದ ವರ್ಷ ಘೋಷಣೆಯಾದ ಬಜೆಟ್ 2017ರ ಮುಖ್ಯಾಂಶ ಗಳು ಈ ರೀತಿ ಇದ್ದಿತ್ತು. ಈ ಘೋಷಣೆಯ ಪ್ರಕಾರ ವಿತ್ತ ವರ್ಷ 2017-18 (ಅಸೆಸೆ¾ಂಟ್ ವರ್ಷ 2018-19) ಇರಲಿರುವುದು. ಅರ್ಥಾತ್, ಇದೀಗ ನೀವು ರಿಟರ್ನ್ ಫೈಲಿಂಗ್ ಮಾಡಲು ಹೋಗುವಾಗ ಈ ಕೆಳಗಿನ ಅಂಶಗಳು ಅನ್ವಯವಾಗಲಿವೆ.
1. ಆದಾಯ ತೆರಿಗೆಯಲ್ಲಿ ಕಡಿತ
ಮಧ್ಯಮ ವರ್ಗದ ಜನ ಸಾಮಾನ್ಯರಿಗೆ ಅಲ್ಪ ಪ್ರಮಾಣದ ತೆರಿಗೆ ರಿಯಾಯಿತಿ ಒದಗಿಸುವ ನಿಟ್ಟಿನಲ್ಲಿ ರೂ 2.5 ಲಕ್ಷದಿಂದ ರೂ 5 ಲಕ್ಷದವರೆಗಿನ ವಾರ್ಷಿಕ ಆದಾಯ ಉಳ್ಳವರಿಗೆ ಅದಾಯ ತೆರಿಗೆ ದರವನ್ನು ಶೇ.10 ದಿಂದ ಶೇ.5ಕ್ಕೆ ಇಳಿಸಲಾಗಿದೆ. 60 ವಯಸ್ಸು ಮೀರಿದ ರೂ. 3-5 ಲಕ್ಷ ಆದಾಯ ಉಳ್ಳ ಹಿರಿಯ ನಾಗರಿಕರಿಗೆ ಕೂಡಾ ಈ ಇಳಿಕೆ ಲಾಗೂ ಆಗುತ್ತದೆ. ಆ ಪ್ರಕಾರ ರೂ. 5 ಲಕ್ಷ ರೂಪಾಯಿ ಆದಾಯ ಉಳ್ಳ ನಾಗರಿಕರಿಗೆ ಈ ಮೂಲಕ ವಾರ್ಷಿಕ ರೂ. 12,875 ರಷ್ಟು ಆದಾಯಕರ ಉಳಿತಾಯ ಉಂಟಾಗುತ್ತದೆ. ಹಿರಿಯ ನಾಗರಿಕರಿಗೆ ಈ ಲಾಭ ರೂ. 10,300. ರೂ. 5 ಲಕ್ಷ ಮೀರಿದ ಆದಾಯದವರಿಗೂ ತಳಮಟ್ಟದ ಈ ಉಳಿತಾಯ ಸಿಕ್ಕಿಯೇ ಸಿಗುತ್ತದೆ.
2. ತೆರಿಗೆ ರಿಬೇಟಿನಲ್ಲಿ ಇಳಿಕೆ
ಸೆಕ್ಷನ್ 87 ಅನುಸಾರ ವಾರ್ಷಿಕ ಆದಾಯ ರೂ. 5 ಲಕ್ಷಕ್ಕಿಂತ ಕಡಿಮೆ ಇರುವವರಿಗೆ ಮಾತ್ರ ರೂ. 5,000ದವರೆಗೆ ಕಟ್ಟುವ ತೆರಿಗೆಯಲ್ಲಿ ರಿಯಾಯಿತಿ ಸಿಗುತ್ತಿತ್ತು. (ಆ ಲೆಕ್ಕಾಚಾರದ ಪ್ರಯುಕ್ತ ಈ ಮೊದಲು ರೂ. 3 ಲಕ್ಷ ವಾರ್ಷಿಕ ಆದಾಯ ಉಳ್ಳವರಿಗೆ ಯಾವುದೇ ತೆರಿಗೆ ಕಟ್ಟುವ ಅಗತ್ಯ ಬೀಳುತ್ತಿರಲಿಲ್ಲ). ಅಂತಹ ಅರ್ಹತೆಗೆ ಆದಾಯ ಮಿತಿಯನ್ನು ಈಗ ರೂ. 3.5 ಲಕ್ಷಕ್ಕೆ ಇಳಿಸಲಾಗಿದೆ ಹಾಗೂ ತೆರಿಗೆಯ ರಿಯಾಯಿತಿ ಮೊತ್ತವನ್ನು ರೂ. 2,500ಕ್ಕೆ ಇಳಿಸಲಾಗಿದೆ. ಮೇಲೆ ಹೇಳಿದಂತೆ ತೆರಿಗೆಯನ್ನು )ಶೇ.10 ದಿಂದ ಶೇ.5ಕ್ಕೆ ಇಳಿಸಿದ್ದರಿಂದಾಗಿ ತೆರಿಗೆ ಕಟ್ಟದೆ ಬಚಾವಾಗುವ ಮಿತಿ ಮೇಲಕ್ಕೆ ಏರದೇ ಅದೇ 3 ಲಕ್ಷದಲ್ಲಿ ಇರುವಂತೆ ನೋಡಿಕೊಳ್ಳಲು ಈ ಬದಲಾವಣೆಯನ್ನು ಮಾಡಲಾಗಿದೆ. ಅಂದರೆ ಈ ವಿತ್ತ ವರ್ಷ ಸೆಕ್ಷನ್ 87 ರಿಯಾಯಿತಿ ವಾರ್ಷಿಕ ಆದಾಯ ರೂ. 3.5 ಲಕ್ಷಕ್ಕಿಂತ ಕಡಿಮೆ ಇರುವವರಿಗೆ ಮಾತ್ರವೇ ಸಿಗುತ್ತದೆ ಹಾಗೂ ಆ ಲಾಭ ರೂ. 2,500ಕ್ಕೆ ಸೀಮಿತವಾಗಿರುತ್ತದೆ.
3. ರೂ. 50 ಲಕ್ಷದಿಂದ 1 ಕೋಟಿಯವರೆಗೆ ಶೇ. 10 ಸರ್ಚಾರ್ಜ್
ವಾರ್ಷಿಕ ರೂ. 1 ಕೋಟಿ ಆದಾಯ ಮೀರಿದವರಿಗೆ ಶೇ.15 ಸರ್ಚಾರ್ಜ್ ಈಗಾಗಲೇ ಇದೆ. ಸರ್ಚಾರ್ಜ್ ಅಂದರೆ ತೆರಿಗೆಯ ಮೇಲೆ ಬೀಳುವ ಹೆಚ್ಚುವರಿ ತೆರಿಗೆ. ಆದರೆ ಈ ಬಜೆಟ್ಟಿನಲ್ಲಿ ವಾರ್ಷಿಕ ಆದಾಯ ರೂ. 50 ಲಕ್ಷ – ರೂ. 1 ಕೋಟಿ ವರ್ಗಕ್ಕೆ ಶೇ. 10 ಸರ್ಚಾರ್ಜ್ ವಿಧಿಸಲಾಗಿದೆ. ಈ ಕಾರಣದಿಂದಾಗಿ ರೂ.50 ಲಕ್ಷ – ರೂ. 1 ಕೋಟಿಯ ವರ್ಗಕ್ಕೆ ಒಟ್ಟು ತೆರಿಗೆಯಲ್ಲಿ ಹೆಚ್ಚಳವಾಗಲಿದೆ.
4. ಎನ್ಪಿಎಸ್ ದೇಣಿಗೆ ಮಿತಿಯಲ್ಲಿ ಹೆಚ್ಚಳ
ಸಂಬಳ ಪಡೆಯುತ್ತಿರುವ ಓರ್ವ ಉದ್ಯೋಗಿಗೆ ನ್ಯಾಶನಲ್ ಪೆನ್ಶನ್ ಸ್ಕೀಮಿನ ಅಡಿಯಲ್ಲಿ ಸಂಬಳದ ಶೇ. 10 (80 ಸಿಸಿಡಿ) ದೇಣಿಗೆಯನ್ನು ಕಡಿತ ಮಾಡಿ ಖಾತೆಗೆ ತುಂಬಬಹುದಾಗಿದೆ. ಹೆಚ್ಚುವರಿಯಾಗಿ ಉದ್ಯೋಗದಾತರೂ ಕೂಡಾ ಸಂಬಳದ ಇನ್ನೊಂದು ಶೇ.10 ಮೊತ್ತವನ್ನು ಪ್ರತ್ಯೇಕವಾಗಿ ಆತನ ಎನ್ಪಿಎಸ್ ಖಾತೆಗೆ ತುಂಬಬಹುದಾಗಿದೆ 80ಸಿಸಿಡಿ (2). ಆದರೆ ಸ್ವಯಂ ಉದ್ಯೋಗಿಯಾದ ಪ್ರೊಫೆಷನಲ್ ವರ್ಗದವರಿಗೆ ತಮ್ಮ ಗ್ರಾಸ್ ಟೋಟಲ್ ಆದಾಯದ ಶೇ.10 ಮಾತ್ರ ಎನ್ಪಿಎಸ್ ಖಾತೆಗೆ ತುಂಬಬಹುದಾಗಿತ್ತು. ಅವರಿಗೆ ಉದ್ಯೋಗ ದಾತರು ಇಲ್ಲದ ಕಾರಣ ಇನ್ನೊಂದು ಶೇ.10ರ ಅವಕಾಶ ಅವರಿಗೆ ಇರುತ್ತಿರಲಿಲ್ಲ. ಈ ಬಜೆಟ್ಟಿನಲ್ಲಿ ಅಂತಹ ಪ್ರೊಫೆಶನಲ್ ವರ್ಗದವರು ತಮ್ಮ ಗ್ರಾಸ್ ಟೋಟಲ್ ಆದಾಯದ ಶೇ.20ನ್ನು ತಮ್ಮ ಎನ್ಪಿಎಸ್ ಖಾತೆಗೆ ಸ್ವತಃ ತುಂಬಬಹುದಾದ ಅವಕಾಶವನ್ನು ನೀಡಲಾಗಿದೆ. ಆದರೆ ಆ ವರ್ಗದವರು ದೇಣಿಗೆಯ ಒಟ್ಟಾರೆ ವಾರ್ಷಿಕ ಮಿತಿ ರೂ. 1.5 ಲಕ್ಷ ಮೀರುವಂತಿಲ್ಲ.
5. ರಾಜೀವ್ ಗಾಂಧಿ ಈಕ್ವಿಟಿ ಯೋಜನೆ
ಶೇರು ಮಾರುಕಟ್ಟೆಯಲ್ಲಿ ಪ್ರಪ್ರಥಮ ಬಾರಿಗೆ ಹೂಡಿಕೆ ಮಾಡುವವರು ಕೆಲ ನಿಗದಿತ ಶೇರು ಹಾಗೂ ಮ್ಯೂಚುವಲ್ ಫಂಡುಗಳಲ್ಲಿ ಹೂಡಿಕೆ ಮಾಡಿದರೆ ರಾಜೀವ್ ಗಾಂಧಿ ಈಕ್ವಿಟಿ ಯೋಜನೆಯಡಿ ವಾರ್ಷಿಕ ರೂ. 25,000ವರೆಗೆ 3 ವರ್ಷಗಳ ಕಾಲ ಕರವಿನಾಯಿತಿ ಸಿಗುತ್ತಿತ್ತು. ಈ ವಿತ್ತ ವರ್ಷದಿಂದ ಆ ಯೋಜನೆಯನ್ನು ಹಿಂಪಡೆಯಲಾಗಿದೆ. ಆದರೆ ಈಗಾಗಲೇ ಆ ಯೋಜನೆಯಲ್ಲಿ ತೊಡಗಿಸಿಕೊಂಡವರು ಇನ್ನೆರಡು ವರ್ಷಗಳ ಕಾಲ ಆ ಯೋಜನೆಯ ಲಾಭವನ್ನು ಪಡಕೊಳ್ಳಬಹುದು.
6. ಎನ್ಪಿಎಸ್ನಿಂದ ಕರಮುಕ್ತ ಹಿಂಪಡೆತ
ಒಬ್ಟಾತ ಎನ್ಪಿಎಸ್ ಚಂದಾದಾರ ಎಮರ್ಜೆನ್ಸಿ ಕಾರಣಗಳಿಗೆ ತನ್ನ ಖಾತೆಯಿಂದ ಅವಧಿಪೂರ್ವವಾಗಿ ತನ್ನ ದೇಣಿಗೆಯ ಶೇ. 25ವರೆಗೆ ದುಡ್ಡನ್ನು ಹಿಂಪಡೆಯಬಹುದು ಮತ್ತು ಇನ್ನು ಮುಂದೆ ಸ್ಯಾಲರಿ ವರ್ಗದವರಿಗೆ ಅದರ ಮೇಲೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ.
7. ಗೃಹಸಾಲದ ಬಡ್ಡಿ ರಿಯಾಯಿತಿಗೆ ಮಿತಿ
ಈ ವರೆಗೆ ಸ್ವಂತ ವಾಸಕ್ಕೆಂದು ಮಾಡಿಕೊಂಡ ಮನೆಯ ಮೇಲಿನ ಗೃಹಸಾಲದ ಬಡ್ಡಿಯ ಮೇಲೆ ವಾರ್ಷಿಕ ರೂ. 2 ಲಕ್ಷದ ಮಿತಿಯೊಳಗೆ ಮಾತ್ರ ನೀಡಲಾಗುತ್ತಿತ್ತು. ಅದಕ್ಕೂ ಮೀರಿದ ಬಡ್ಡಿ ಪಾವತಿಗೆ ತೆರಿಗೆ ರಿಯಾಯಿತಿ ಇರುತ್ತಿರಲಿಲ್ಲ. ಆದರೆ ಸ್ವಂತ ವಾಸಕ್ಕಲ್ಲದ, ಬಾಡಿಗೆಗೆ ನೀಡುವ ಸಲುವಾಗಿ ಮಾಡಿಕೊಂಡ ಮನೆಯ ಗೃಹ ಸಾಲದ ಬಡ್ಡಿಯ ಮೇಲೆ ಯಾವುದೇ ಮಿತಿ ಇಲ್ಲದೆ ಸಂಪೂರ್ಣ ಕರ ವಿನಾಯಿತಿ ಸಿಗುತ್ತಿತ್ತು. ಇದು ಸಾಲ ಮಾಡಿ ಮನೆಕಟ್ಟಿ ಬಾಡಿಗೆ ನೀಡುವವರಿಗೆ ಒಂದು ಆಕರ್ಷಕವಾದ ಯೋಜನೆಯಾಗಿತ್ತು. ಆದರೆ ಈ ಬಜೆಟ್ಟಿನ ಪ್ರಕಾರ ಇನ್ನು ಮುಂದೆ ಬಾಡಿಗೆಗೆ ನೀಡುವ ಮನೆಯ ಮೇಲೆಯೂ ಕೂಡಾ ಸ್ವಂತ ಮನೆಯಂತೆಯೇ ರೂ. 2 ಲಕ್ಷದ ಮಿತಿಯನ್ನು ಬಡ್ಡಿ ಪಾವತಿಯ ಮೇಲಿನ ತೆರಿಗೆ ವಿನಾಯಿತಿಗೆ ಹೇರಲಾಗುತ್ತದೆ. ಆದರೆ, ಇಲ್ಲಿ ಹೌಸ್ ಪ್ರಾಪರ್ಟಿ ಅಡಿಯ ಉಳಿದ ನಷ್ಟವನ್ನು 8 ವರ್ಷಗಳ ಕಾಲ ಕ್ಯಾರಿ ಫಾರ್ವರ್ಡ್ ಮಾಡಲು ಸಾಧ್ಯವಿದೆ.
8. ರಿಟರ್ನ್ ಫೈಲಿಂಗ್ ಬಗ್ಗೆ
ರಿಟರ್ನ್ ಫೈಲಿಂಗ್ ಮಾಡುವ ಕೊನೆಯ ದಿನಾಂಕದ ಬಗ್ಗೆ ವಿತ್ತ ಮಂತ್ರಿಗಳು ಕಡಿವಾಣವನ್ನು ಬಿಗಿಯಾಗಿಸಿ¨ªಾರೆ. ಈವರೆಗೆ ರಿಟರ್ನ್ ಫೈಲಿಂಗ್ ಕೊನೆ ದಿನಾಂಕವನ್ನು ಕಳಕೊಂಡು ತಡವಾಗಿ ಹೇಳಿಕೆ ಸಲ್ಲಿಸುವವರಿಗೆ ವರ್ಷಾಂತ್ಯದವರೆಗೆ ಯಾವುದೇ ಪೆನಾಲ್ಟಿ ಇರುತ್ತಿರಲಿಲ್ಲ. ಆದರೆ ಇನ್ನು ಮುಂದೆ ಕೊನೆ ದಿನಾಂಕವನ್ನು ಅನುಸರಿಸದೇ ಇರುವವರಿಗೆ ದಂಡ ಬೀಳಲಿದೆ. ಅಸೆಸೆ¾ಂಟ್ ವರ್ಷದ ಡಿಸೆಂಬರ್ 31ರ ವರೆಗೆ ರೂ. 5000 ಹಾಗೂ ಅದು ಮೀರಿದರೆ ರೂ. 10,000 ದಂಡ ತೆರಬೇಕಾದೀತು. ಆದರೆ ರೂ. 5 ಲಕ್ಷಕ್ಕಿಂತ ಕೆಳಗಿನ ಆದಾಯದವರಿಗೆ ದಂಡವು ಗರಿಷ್ಟ ರೂ. 1000 ಮಾತ್ರ. ಒಮ್ಮೆ ಸಲ್ಲಿಸಿದ ರಿಟರ್ನ್ಸ್ ಅನ್ನು ಪರಿಷ್ಕರಿಸುವ ಅವಕಾಶವನ್ನು ವಿತ್ತ ವರ್ಷ ಕಳೆದು ಕೇವಲ 1 ವರ್ಷದ ಅವಧಿಗೆ ಸೀಮಿತಗೊಳಿಸಲಾಗಿದೆ. ಇದು ಈವರೆಗೆ 2 ವರ್ಷವಾಗಿತ್ತು. ಅಲ್ಲದೆ, ತೆರಿಗೆ ರೈಡ್ ಸಂದರ್ಭಗಳಲ್ಲಿ ನಿಮ್ಮ ಕಳೆದ 10 ವರ್ಷಗಳ (ಈವರೆಗೆ 6 ವರ್ಷ) ಲೆಕ್ಕಾಚಾರವನ್ನು ತನಿಖೆ ಮಾಡುವ ಹಕ್ಕನ್ನು ಕರ ಇಲಾಖೆಗೆ ಈ ಬಜೆಟ್ ನೀಡುತ್ತಿದೆ.
9. ಸ್ಥಿರಾಸ್ತಿಯ ಮೇಲಿನ ಕ್ಯಾಪಿಟಲ್ ಗೈನ್ಸ್
ಭೂಮಿ ಮತ್ತು ಕಟ್ಟಡಗಳನ್ನು ಮಾರಾಟ ಮಾಡುವಾಗ ಬರುವ ಕ್ಯಾಪಿಟಲ್ ಗೈನ್ಸ್ ಕರವನ್ನು ಲೆಕ್ಕ ಹಾಕುವಾಗ 3 ವರ್ಷಗಳನ್ನು ಮೀರಿದ ಅವಧಿಗೆ ಸ್ವಾಧೀನದಲ್ಲಿ ಇದ್ದರೆ ಅದನ್ನು ದೀರ್ಘಾವಧಿಯೆಂದೂ ಅದರಿಂದ ಕಡಿಮೆ ಅವಧಿಗೆ ಸ್ವಾಧೀನದಲ್ಲಿ ಇದ್ದರೆ ಅಲ್ಪಾವಧಿಯೆಂದೂ ಪರಿಗಣಿ ಸಲಾಗುತ್ತಿತ್ತು. ಇನ್ನು ಮುಂದೆ ಸ್ಥಿರಾಸ್ತಿಯ ಮಟ್ಟಿಗೆ 2 ವರ್ಷಗಳನ್ನು ಮೀರಿದ ಸ್ವಾಧೀನಕ್ಕೆ ದೀರ್ಘಾವಧಿಯೆಂದೂ ಅದರಿಂದ ಕಡಿಮೆಯ ಅವಧಿಗೆ ಅಲ್ಪಾವಧಿಯೆಂದೂ ಪರಿಗಣಿಸಲಾಗುವುದು. (ಅಂತಹ ದೀರ್ಘಾವಧಿ ಕ್ಯಾಪಿಟಲ್ ಗೈನ್ಸ್ ಮೇಲೆ ಶೇ. 20 ಕರ ಹೇರಲಾಗುತ್ತದೆ ಹಾಗೂ ಅದರ ಮೇಲೆ ಕೆಲ ನಿರ್ದಿಷ್ಠ ವಿನಾಯಿತಿಗಳೂ ಇವೆ.) ಹಳೆಯ ಕಾಲದ ಆಸ್ತಿಯ ಮೇಲೆ ಕ್ಯಾಪಿಟಲ್ ಗೈನ್ಸ್ ಲೆಕ್ಕ ಹಾಕುವಾಗ ಇನ್ನು ಮುಂದೆ ಎಪ್ರಿಲ್ 1, 2001 ಆಧಾರದಲ್ಲಿ ಇಂಡೆಕ್ಸ್ ಲೆಕ್ಕ ಹಾಕಲಾಗುವುದು. ಈ ಮೊದಲು ಆ ಬೇಸ್ ಇಯರ್ ಎಪ್ರಿಲ್ 1, 1981 ಅಗಿತ್ತು. ಈ ನಡೆಯಿಂದ ಸ್ಥಿರಾಸ್ತಿ ಮಾರಾಟ ಮಾಡುವವರಿಗೆ ಬಹಳಷ್ಟು ಕರ ಉಳಿತಾಯ ಆಗಲಿದೆ.
– ಜಯದೇವ ಪ್ರಸಾದ ಮೊಳೆಯಾರ