ನಿನಗೆ ಇಷ್ಟ ಆಗೋ ಹಾಗೆ ಆಡಿದೀನಿ ಅಪ್ಪಾ, ಅಂದೆ!

ಕಲ್ಲು ಸಕ್ಕರೆ

Team Udayavani, Apr 19, 2020, 5:43 AM IST

ನಿನಗೆ ಇಷ್ಟ ಆಗೋ ಹಾಗೆ ಆಡಿದೀನಿ ಅಪ್ಪಾ, ಅಂದೆ!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಈಗ ಎಲ್ಲರ ಕಣ್ಣಲ್ಲೂ ಕೋವಿಡ್ 19 ವೈರಸ್ ಭಯ. ನಾಲ್ಕು ಬಾರಿ ಕೆಮ್ಮಿದರೆ ಸಾಕು, ಭಯ, ಸಂಕಟ. ಲಾಕ್‌ಡೌನ್‌ ನೆಪದಲ್ಲಿ ಮನೆಯಲ್ಲಿದ್ದುಕೊಂಡೇ ನಾವೆಲ್ಲಾ ಹೀಗೆ ಒದ್ದಾಡುವಾಗಲೇ, ಕ್ರಿಕೆಟಿಗ ಯುವರಾಜ್‌ ಸಿಂಗ್‌ ನೆನಪಾಗುತ್ತಾನೆ. ಕ್ಯಾನ್ಸರ್‌ ಜೊತೆಯಾಗಿದೆ ಎಂದು ತಿಳಿಯದೆ, ಆರೇಳು ತಿಂಗಳುಗಳ ಕಾಲ ಕೆಮ್ಮುತ್ತಲೇ ಬದುಕು ಕಳೆದ, ಆ ಸಂಕಟದ ಮಧ್ಯೆಯೇ ವಿಶ್ವಕಪ್‌ ಪಂದ್ಯ ಆಡಿದ ದಿನಗಳನ್ನು ಯುವಿ ನೆನಪಿಸಿಕೊಂಡಿದ್ದಾರೆ. ಅವರ ಆತ್ಮಕಥೆಯ ಒಂದು ಅಧ್ಯಾಯದ ಭಾವಾನುವಾದ ಇಲ್ಲಿದೆ.

ವಿಶ್ವಕಪ್‌ ಟೂರ್ನಿ ಆರಂಭವಾಗಲು ಕೆಲವೇ ತಿಂಗಳು ಬಾಕಿಯಿದೆ ಅನ್ನುವಾಗ, ನನ್ನ ಟ್ರಾಕ್‌ ರೆಕಾರ್ಡ್‌ ಕೆಟ್ಟದಾಗಿತ್ತು. ಹಿಂದಿನ ಪಂದ್ಯ ಗಳಲ್ಲಿ ಅಷ್ಟೇನೂ ಚೆನ್ನಾಗಿ ಆಡಿರಲಿಲ್ಲ. ಫೀಲ್ಡಿಂಗ್‌ನ ವೇಳೆ ಚೆಂಡು ಬಡಿದು, ಮೊಣಕೈನ ಮೂಳೆ ಮುರಿದಿತ್ತು. ಕೈಬೆರಳುಗಳಿಗೂ ಬ್ಯಾಂಡೇಜ್‌ ಹಾಕಲಾಗಿತ್ತು.

ಅದಕ್ಕಿಂತ ಮುಖ್ಯವಾಗಿ- ಪಂದ್ಯ ಗೆಲ್ಲಿಸಬಲ್ಲ ಆಟಗಾರ, ಮ್ಯಾಚ್‌ ವಿನ್ನರ್‌ ಎಂಬ ಹಣೆಪಟ್ಟಿ ನನಗಿರಲಿಲ್ಲ. ಹಾಗಾಗಿ, ವಿಶ್ವಕಪ್‌ ಆಡುವ ತಂಡದಲ್ಲಿ ಛಾನ್ಸ್ ಸಿಗುವ ಸಾಧ್ಯತೆ 50-50 ಎಂದು ನನಗೇ ಅನಿಸಿತ್ತು. ಆದರೆ, ಕಡೆಗೊಮ್ಮೆ ವಿಶ್ವಕಪ್‌ ಆಡಲು ಆಯ್ಕೆ ಮಾಡಿರುವ ತಂಡದ ಪಟ್ಟಿ ಪ್ರಕಟವಾದಾಗ a pleasant surprise ನನಗೆ ಅವಕಾಶ ಸಿಕ್ಕಿತ್ತು. ಸುದ್ದಿ ತಿಳಿದಾಗ, ನನಗೆ ನಾನೇ ಹೇಳಿಕೊಂಡೆ: ವಿಶ್ವಕಪ್‌ ಗೆಲ್ಲಬೇಕು!

ಆದರೆ, ಬದುಕು ನಾನು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಮುಖ್ಯವಾಗಿ, ನನ್ನ ದೇಹಸ್ಥಿತಿ ಚೆನ್ನಾಗಿರಲಿಲ್ಲ. ಏನು ತಿಂದರೂ ವಾಂತಿಯಾಗುತ್ತಿತ್ತು. ಕೆಲವೊಮ್ಮೆ ಅತೀ ಅನ್ನುವಷ್ಟು ಭೇದಿ. ವಿಕೆಟ್‌ಗಳ ಮಧ್ಯೆ ಓಡುವಾಗ, ಸುಸ್ತಾಗುತ್ತಿತ್ತು. ರಾತ್ರಿಯಂತೂ ಎಡೆಬಿಡದ ಕೆಮ್ಮು. ಒಂದೆರಡು ಬಾರಿ, ಕಫ‌ದೊಂದಿಗೆ ರಕ್ತವೂ ಬಂದಿತ್ತು.

ಹೀಗೆಲ್ಲ ಆದಾಗ, ನಾವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದೆವು. ಬದಲಾದ ವಾತಾವರಣ, ಅಪಾರ ಬಿಸಿಲು ಮತ್ತು ಪಿತ್ತದ ಕಾರಣಕ್ಕೆ ಹೀಗೆಲ್ಲ ಆಗುತ್ತಿರಬಹುದು ಅಂದುಕೊಂಡೆ. ಭಾರತಕ್ಕೆ ಹೋದ ತಕ್ಷಣ ಆಸ್ಪತ್ರೆಗೆ ಹೋಗೋಣ, ಅದುವರೆಗೂ ಯಾರಿಗೂ ಈ ವಿಷಯ ಹೇಳಬೇಡಿ ಎಂದು ತಂಡದ ದೈಹಿಕ ತರಬೇತುದಾರರಿಗೆ ಮನವಿ ಮಾಡಿಕೊಂಡೆ. ಅವರೂ ಒಪ್ಪಿದರು.

ಹಾಂಹೂ ಅನ್ನುವುದರೊಳಗೆ ವಿಶ್ವಕಪ್‌ ಟೂರ್ನಿ ಆರಂಭವಾಗಿಯೇ ಹೋಯಿತು. ತೆಂಡೂಲ್ಕರ್‌ಗೆ ಇದು ಕಡೆಯ ವಿಶ್ವಕಪ್‌. ಆ ಕಾರಣಕ್ಕಾದರೂ ನಾವು ಕಪ್‌ ಗೆಲ್ಲಬೇಕು. ಆ ಮೂಲಕ ತೆಂಡೂಲ್ಕರ್‌ಗೆ ಗೌರವ ಸಲ್ಲಿಸಬೇಕು ಎಂಬ ಸೆಂಟಿಮೆಂಟ್‌ ಕೂಡ ಜತೆಗಿತ್ತು. ಮೊದಲ ಎರಡು ಪಂದ್ಯಗಳನ್ನು ನಾವು ಸುಲಭವಾಗಿಯೇ ಗೆದ್ದೆವು.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐರ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಒಂದು ಮ್ಯಾಜಿಕ್‌ ನಡೆಯಿತು. ಅದುವರೆಗೂ ಪಾರ್ಟ್‌ ಟೈಮ್‌ ಬೌಲರ್‌ ಅನ್ನಿಸಿಕೊಂಡಿದ್ದ ನಾನು, ಐದು ವಿಕೆಟ್‌ ಪಡೆದಿದ್ದೆ. ಆ ಮೂಲಕ, ಮ್ಯಾನ್‌ ಆಫ್ ದಿ ಮ್ಯಾಚ್‌ ಅನ್ನಿಸಿಕೊಂಡಿದ್ದೆ. ಬ್ಯಾಟ್ಸ್‌ಮನ್‌ ಆಗಿ ಮಾತ್ರವಲ್ಲ; ಬೌಲರ್‌ ಆಗಿಯೂ ಮಿಂಚಬೇಕು. ಅಕಸ್ಮಾತ್‌, ಬ್ಯಾಟಿಂಗ್ನಲ್ಲಿ ವಿಫ‌ಲನಾದರೆ, ಬೌಲಿಂಗ್ನಲ್ಲಿ ಮಿಂಚುವ ಮೂಲಕ ಆ ನಷ್ಟ ತುಂಬಬೇಕು ಎಂದು ಎರಡೆರಡು ಬಾರಿ ಹೇಳಿಕೊಂಡೆ. ಆಗ ಎದುರಾದದ್ದೇ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ.

ಕೆಲವೇ ತಿಂಗಳುಗಳ ಹಿಂದೆ ಮುಖಾಮುಖಿಯಾಗಿದ್ದೆವಲ್ಲ; ಅದೇ ಕಾರಣಕ್ಕೆ ಸೌತ್‌ ಆಫ್ರಿಕಾ ಆಟಗಾರರ ಶಕ್ತಿ ಮತ್ತು ದೌರ್ಬಲ್ಯಗಳು ಗೊತ್ತಿದ್ದವು. ನಮ್ಮ ಸ್ಕೋರ್‌, 40 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 268 ರನ್‌. ಉಳಿದ ಹತ್ತು ಓವರ್‌ಗಳಲ್ಲಿ 100 ರನ್‌ ಆದರೂ ಸೇರಬಹುದು ಎಂದು ಎಲ್ಲರೂ ಅಂದಾಜು ಮಾಡಿದ್ದರು. ಆದರೆ, ಅದಾದ ನಂತರ 27 ರನ್‌ಗಳು ಆಗುವಷ್ಟರಲ್ಲಿ ಏಳು ವಿಕೆಟ್‌ ಬಿದ್ದುಹೋದವು. 296ಕ್ಕೆ ಆಲೌಟ್‌. ಆ ಪಂದ್ಯವನ್ನು ಆಫ್ರಿಕನ್ನರು ಗೆದ್ದುಕೊಂಡರು.

ಅಷ್ಟೆ: ಎಲ್ಲಾ ಕಡೆಯಿಂದಲೂ ಟೀಕೆಯ ಸುರಿಮಳೆ ಆಗತೊಡಗಿತು. ಹೀಗೇ ಆದರೆ, ಕಪ್‌ ಗೆಲ್ಲುವುದು ಕನಸು. ಬರೀ 27 ರನ್‌ಗೆ ಏಳು ವಿಕೆಟ್‌ ಕಳೆದುಕೊಂಡರು ಅಂದ್ರೆ ತಮಾಷೆಯಾ? ಆಟಗಾರರಿಗೆ ಭೇದಿ ಶುರುವಾಗಿತ್ತೋ ಹೇಗೆ? ಒಬ್ಬನಿಗಾದ್ರೂ ಜವಾಬ್ದಾರಿ ಬೇಡವಾ ಎಂದೆಲ್ಲಾ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾದವು. ಒಬ್ಬ ವ್ಯಕ್ತಿ ಇಡೀ ದಿನ ಚಟುವಟಿಕೆಯಿಂದ ಇರಬೇಕೆಂದರೆ, ಹಿಂದಿನ ರಾತ್ರಿ ಅವನು ಚೆನ್ನಾಗಿ ನಿದ್ರೆ ಮಾಡಿರಬೇಕು.

ಆದರೆ, ನನ್ನ ಪಾಲಿಗೆ ಪ್ರತಿಯೊಂದು ರಾತ್ರಿಯೂ ಭಯಾನಕವಾಗಿರುತ್ತಿತ್ತು. ಇಡೀ ರಾತ್ರಿ ಕೆಮ್ಮು, ಕೆಮ್ಮು, ಕೆಮ್ಮು. ಜೊತೆಗೆ, ಉಸಿರಾಟದ ತೊಂದರೆಯಿಂದ ನಿದ್ರೆಯೇ ಬರುತ್ತಿರಲಿಲ್ಲ. ಮುಖ್ಯವಾಗಿ ಯಾವ ಬಗೆಯ ಆಹಾರವೂ ಸೇರುತ್ತಿರಲಿಲ್ಲ. ತಿಂದ ಅರ್ಧಗಂಟೆಗೇ ಎಲ್ಲವೂ ವಾಂತಿಯಾಗಿ ಬಿಡುತ್ತಿತ್ತು. ದೇಹದೊಳಗೆ ಕ್ಯಾನ್ಸರ್‌ ಎಂಬ ಹೆಮ್ಮಾರಿ ಅಡಗಿಕೂತು ಹೀಗೆಲ್ಲ ಆಟವಾಡುತ್ತಿದೆ ಎಂದು ನನಗಾದರೂ ಹೇಗೆ ಗೊತ್ತಾಗಬೇಕು?

ಇಷ್ಟೆಲ್ಲಾ ನೋವುಗಳೊಂದಿಗೇ ನಾನು ಅಂಗಳಕ್ಕೆ ಇಳಿಯುತ್ತಿದ್ದೆ. ಕ್ವಾರ್ಟರ್‌ ಫೈನಲ್‌ ತಲುಪಬೇಕಿದ್ದರೆ, ನಾವು ವಿಂಡೀಸ್‌ ಎದುರಿನ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಇವತ್ತು ಮ್ಯಾಚ್‌ ಗೆಲ್ಲಲೇಬೇಕು ಎಂಬ ಹಠದಿಂದ ನಾನು ಆಡುತ್ತಿದ್ದೆ. 50 ರನ್‌ ದಾಟಿದ ನಂತರ, ಇದ್ದಕ್ಕಿದ್ದಂತೆ ಕೆಮ್ಮು ಬಂತು. ಒಂದರೆಕ್ಷಣ ಬ್ರೇಕ್‌ ತಗೊಂಡು ಕಫ‌ ಉಗಿದರೆ, ಅದರ ಜೊತೆಯಲ್ಲಿಯೇ ರಕ್ತ! ಅಂಪೈರ್‌ ಏನಾದರೂ ನೋಡಿದರೆ ಎಡವಟ್ಟಾಗಬಹುದು ಅನ್ನಿಸಿತು.

ತಕ್ಷಣವೇ, ಕಫ‌ ಬಿದ್ದಿದ್ದ ಜಾಗವನ್ನು ಬೂಟುಗಾಲಿಂದ ಉಜ್ಜಿಬಿಟ್ಟೆ. ಸುಸ್ತಾಗುತ್ತಿದೆ, ಓಡಲು ಸಾಧ್ಯವಾಗುತ್ತಿಲ್ಲ ಅನ್ನಿಸಿದಾಗ, ಫೋರ್‌ ಹೊಡೆದು ರನ್‌ ರೇಟ್‌ ಕಡಿಮೆ ಆಗದ ಹಾಗೆ ನೋಡಿಕೊಂಡೆ. ಇಂಥ ಅನಾರೋಗ್ಯದ ಮಧ್ಯೆಯೂ ಸೆಂಚುರಿ ಹೊಡೆದೆ. ಎರಡು ವಿಕೆಟ್‌ಗಳನ್ನೂ ಪಡೆದೆ. ಆ ಮ್ಯಾಚ್‌ ಗೆದ್ದ ಭಾರತ, ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿತು.

ಅಲ್ಲಿ ನಮಗೆ ಎದುರಾಗಿದ್ದು ಆಸ್ಟ್ರೇಲಿಯಾ. ಅಹಮದಾಬಾದ್‌ನಲ್ಲಿ ನಡೆದ ಆ ಪಂದ್ಯವನ್ನು ಯಾರೊಬ್ಬರೂ ಮರೆಯಲಾರರು ಅನಿಸುತ್ತದೆ. 1992ರಿಂದಲೂ ವಿಶ್ವಕಪ್‌ ಪಂದ್ಯಗಳಲ್ಲಿ ಭಾರತವನ್ನು ಇನ್ನಿಲ್ಲದಂತೆ ಕಾಡಿದ ತಂಡ ಆಸ್ಟ್ರೇಲಿಯಾ. ಪ್ರತಿ ಪಂದ್ಯದಲ್ಲೂ ಅವರೇ ಮೇಲುಗೈ ಸಾಧಿಸುತ್ತಿದ್ದರು. ಜೊತೆಗೆ, ವಿಶ್ವಕಪ್‌ ಟೂರ್ನಿಯಲ್ಲಿ ಸತತವಾಗಿ 34 ಪಂದ್ಯ ಗೆದ್ದ ದಾಖಲೆಯ ಬಲವೂ ಅವರ ಜೊತೆಗಿತ್ತು. ಎಂದಿನಂತೆ ಈ ಬಾರಿಯೂ ಭಾರತ ಸೋಲುತ್ತದೆ ಎಂದೇ ಹೆಚ್ಚಿನವರು ಲೆಕ್ಕ ಹಾಕಿದ್ದರು.

ಆದರೂ ಕೆಲವರಿಗೆ, ಏನಾದರೂ ಪವಾಡ ನಡೆಯಬಹುದಾ ಎಂಬ ದೂರದ ಆಸೆ… ಪಂದ್ಯದ ಹಿಂದಿನ ದಿನವೂ ನನಗೆ 10ಕ್ಕೂ ಹೆಚ್ಚು ಬಾರಿ ವಾಂತಿ-ಭೇದಿಯಾಗಿತ್ತು. ನೀರು ಕುಡಿದರೆ, ಮರುಕ್ಷಣವೇ ಉಬ್ಬಳಿಕೆಯೊಂದಿಗೆ ಅದೂ ಹೊರಬೀಳುತ್ತಿತ್ತು. ಇದನ್ನು ಕಂಡ ಫಿಸಿಯೋ ಗಾಬರಿಯಾಗಿದ್ದರು. ಮೈದಾನದಲ್ಲಿ ಏನಾದರೂ ಹೆಚ್ಚುಕಡಿಮೆ ಆದರೆ ಎಂಬುದು ಅವರ ಆತಂಕ. ತಕ್ಷಣ ಅವರ ಕೈ ಹಿಡಿದು ಕೇಳಿಕೊಂಡೆ- ನನ್ನ ಅನಾರೋಗ್ಯದ ಸುದ್ದಿಯನ್ನು ಯಾರಿಗೂ ಹೇಳಬೇಡಿ, ನಾನು ಈ ಮ್ಯಾಚ್‌ ಆಡಲೇಬೇಕು….

ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 261 ರನ್‌ ಗಳಿಸಿತು. ಕ್ಯಾಪ್ಟನ್‌ ರಿಕಿ ಪಾಂಟಿಂಗ್‌ ಭರ್ಜರಿ ಸೆಂಚುರಿ ಹೊಡೆದರು. “ಅಬ್ಟಾ, ಏನು ಆಟ ಆಡಿದ ಅಲ್ವ? ಇದು ತಾಖತ್‌ ಅಂದ್ರೆ…” ಎಂಬ ಮೆಚ್ಚುಗೆಯ ಉದ್ಗಾರ ಹಲವರಿಂದ ಬಂತು. ಇಂಥದೇ ಮಾತನ್ನು ಜನ ನನ್ನ ಆಟದ ಕುರಿತೂ ಹೇಳುವಂತೆ ಆಡಬೇಕು ಅಂದುಕೊಂಡೆ. ಆದರೆ, ಅವತ್ತು ಅರ್ಧ ಗಂಟೆ ನಿಂತಿರುವಷ್ಟು ತ್ರಾಣವೂ ನನಗಿರಲಿಲ್ಲ. ಹಿಂದಿನ ರಾತ್ರಿ 10ಕ್ಕೂ ಹೆಚ್ಚು ಬಾರಿ ವಾಂತಿ-ಭೇದಿ ಆಗಿತ್ತು. ಉಸಿರಾಟದ ಸಮಸ್ಯೆಯಾಗಿ ನಿದ್ರೆ ಕೂಡ ಬಂದಿರಲಿಲ್ಲ. ಅದನ್ನೆಲ್ಲ ಮುಚ್ಚಿಟ್ಟು ಅಂಗಳಕ್ಕೆ ಇಳಿದಿದ್ದೆ.

ಒಂದೆರಡಲ್ಲ, ಮೂರು ಬಾರಿ ವಿಶ್ವಕಪ್‌ ಗೆದ್ದಿದ್ದ ತಂಡ ಆಸ್ಟ್ರೇಲಿಯಾ. ಅವತ್ತು, 260 ರನ್‌ ಚೇಸ್‌ ಮಾಡುವುದು ನಿಜಕ್ಕೂ ಕಷ್ಟವಿತ್ತು. ಗಂಭೀರ್‌, ಸೆಹವಾಗ್‌, ತೆಂಡೂಲ್ಕರ್‌ ಎಲ್ಲರೂ ಪ್ರತಿ ಬಾಲ್‌ಗೆ ಒಂದು ರನ್‌ ಎಂಬಂತೆ ಹೊಡೆಯುತ್ತಿದ್ದರು. ಅದನ್ನು ಕಂಡು ಪುಕಪುಕ ಶುರುವಾಯಿತು. ಕಾರಣ, ಅವತ್ತು ನನಗೆ ನಿಲ್ಲುವುದೇ ಕಷ್ಟವಿತ್ತು. ಹಾಗಿರುವಾಗ, ಒಂದೊಂದೇ ರನ್‌ ಓಡಿ ಇನ್ನಿಂಗ್ಸ್ ಕಟ್ಟುವುದು ಹೇಗೆ? ಹೀಗೆಲ್ಲ ಯೋಚಿಸುತ್ತಿದ್ದಾಗಲೇ, ತೆಂಡೂಲ್ಕರ್‌, ಸೆಹವಾಗ್‌, ಗಂಭೀರ್‌ ಔಟ್‌ ಆಗಿಬಿಟ್ಟರು.

ಆಸ್ಟ್ರೇಲಿಯಾದವರ ಮುಖದಲ್ಲಿ ಪಂದ್ಯ ಗೆದ್ದ ಖುಷಿ. ಬ್ಯಾಟ್‌ ಹಿಡಿದು ಮೈದಾನಕ್ಕೆ ನಡೆದುಬಂದೆನಲ್ಲ, ಆಗ ಎಲ್ಲರನ್ನೂ ಸುಮ್ಮನೇ ಒಮ್ಮೆ ನೋಡಿದೆ. ಅವರೆಲ್ಲರ ಕಂಗಳಲ್ಲೂ ಯಾವುದೋ ಒಂದು ಭರವಸೆ. ಆಗಲೇ, ಯಾವುದೋ ಒಂದು ಕಡೆಯಿಂದ- “ನೀನೀಗ ಚೆನ್ನಾಗಿ ಆಡಬೇಕಪ್ಪಾ …” ಅಂದಂತಾಯಿತು. ಅದರಲ್ಲಿ, ಅಮ್ಮನ ದನಿಯ ಅಕ್ಕರೆಯಿತ್ತು. ಆ ಕ್ಷಣದಲ್ಲೇ ನನ್ನ ಮೈಯೊಳಗೆ ಮಿಂಚು ಹರಿದಂತಾಯಿತು. ಸುಸ್ತು, ಸಂಕಟ, ಕೆಮ್ಮು, ಕಫ‌- ಈ ಯಾವುದೂ ಆಗ ನೆನಪಾಗಲಿಲ್ಲ.

“ಈಗೇನಾದರೂ ಫೋರ್‌ ಅಥವಾ ಸಿಕ್ಸರ್‌ ಹೊಡೆಯಲು ಹೋದರೆ ಅದು ಕ್ಯಾಚ್‌ ಆಗಿಬಿಡಬಹುದು. ಅಂಥ ಪ್ರಯತ್ನ ಮಾಡುವುದೇ ಬೇಡ. ಸಿಂಗಲ್‌ ಅಥವಾ ಎರಡು ರನ್‌ ಓಡುವ ಮೂಲಕವೇ ಎದುರಾಳಿಗಳನ್ನು ಕಾಡಬೇಕು. ಒಂದು ಕಡೆ ವಿಕೆಟ್‌ ಉಳಿಸಿಕೊಂಡು, ಇನ್ನೊಂದು ಕಡೆ ಇನ್ನಿಂಗ್ಸ್ ಕಟ್ಟಬೇಕು. ಯಾರು ಆಡಲಿ ಬಿಡಲಿ, ನಾನಂತೂ ಆಡಲೇಬೇಕು ಅಂದುಕೊಂಡೆ. ಅವತ್ತು ಮಾತ್ರ ನನ್ನ ದೇಹ ಅದ್ಭುತ ಎಂಬಂತೆ ಸ್ಪಂದಿಸಿತು.

ಮ್ಯಾಚ್‌ ಕೈ ತಪ್ಪಿಹೋಗಬಹುದು ಅನ್ನಿಸಿದಾಗ, ಎದುರಾಳಿಗಳನ್ನು ಹಂಗಿಸುವುದು, ಅವರನ್ನು ಜಗಳಕ್ಕೆ ಕರೆದು, ಆ ಒತ್ತಡಕ್ಕೇ ಔಟ್‌ ಆಗುವಂತೆ ಮಾಡುವುದು ಆಸ್ಟ್ರೇಲಿಯಾ ಆಟಗಾರರ ಗುಣ. ಅವತ್ತೂ ಹಾಗೇ ಮಾಡಿದರು. ನನ್ನ ಜೊತೆಗಿದ್ದ ರೈನಾ, ಜಗಳಕ್ಕೇ ಹೋಗಿಬಿಟ್ಟ. ಅವನನ್ನು ಕರೆದು ಹೇಳಿದೆ. ಅವರ ಜೊತೆ ಜಗಳಕ್ಕೆ ಹೋದರೆ, ಆ ಟೆನ್ಶನ್‌ನಲ್ಲೇ ಔಟ್‌ ಆಗಿಬಿಡ್ತೇವೆ. ಅವರು ಏನು ಹೇಳಿದ್ರೂ ತಲೆಕೆಡಿಸಿಕೊಳ್ಳದೆ ಆಡು. ಅವರ ಮೇಲಿನ ಸಿಟ್ಟನ್ನು ಚೆಂಡಿನ ಮೇಲೆ ತೋರಿಸೋಣ…

ಬಹುಶಃ ಹೆಚ್ಚಿನವರಿಗೆ ಗೊತ್ತಿಲ್ಲ. ನನ್ನ ತಂದೆ ಯೋಗ್‌ರಾಜ್‌ ಸಿಂಗ್‌ ಕೂಡ ಒಂದು ಕಾಲದಲ್ಲಿ ಭಾರತ ತಂಡಕ್ಕೆ ಆಡಿದವರು. ಕಪಿಲ್‌ ದೇವ್‌ ಅವರಿಗೆ ಸರಿಸಮ ಎಂಬಂತೆ ಬೌಲಿಂಗ್‌ ಮಾಡುತ್ತಿದ್ದವರು. ಅದೇನು ಕಾರಣವೋ ಏನೋ; ಅವರಿಗೆ ಹೆಚ್ಚು ಅವಕಾಶ ಸಿಗಲಿಲ್ಲ.

ಅದೇ ಬೇಸರದಲ್ಲಿ ಆಟಕ್ಕೆ ಗುಡ್‌ ಬೈ ಹೇಳುವ ಮುನ್ನ- “ನನ್ನ ಮಗನನ್ನು ಹೇಗೆ ತಯಾರು ಮಾಡ್ತೀನೋ ನೋಡ್ತಾ ಇರಿ…” ಅಂದಿದ್ದರಂತೆ. ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ರನ್‌ ಹೊಡೆದು, ಆ ಖುಷಿಗೆ ಕುಸಿದು ಕೂತೆನಲ್ಲ: ಆಗ ನೆನಪಾಗಿದ್ದು ನನ್ನ ತಂದೆ! ಅವತ್ತು ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ- ನಿನಗೆ ಖುಷಿಯಾಗುವಂತೆ ಆಡಿದ್ದೇನೆ ಅಪ್ಪಾ…

ಅನಂತರ ನಡೆದಿದ್ದೆಲ್ಲ ಇತಿಹಾಸ. ಸೆಮಿಫೈನಲ್‌ನಲ್ಲಿ ನಮಗೆ ಪಾಕಿಸ್ಥಾನ ಎದುರಾಯಿತು. ವಿಶ್ವಕಪ್‌ನಂಥ ಮಹತ್ವದ ಪಂದ್ಯಗಳಲ್ಲಿ ಪಾಕ್‌ ವಿರುದ್ಧ ಭಾರತ ಸೋತೇ ಇಲ್ಲ. ಅದೇ ಫ‌ಲಿತಾಂಶ ಮತ್ತೆ ರಿಪೀಟ್‌ ಆಯಿತು. ಫೈನಲ್‌ ಪಂದ್ಯದ ಹಿಂದಿನ ದಿನ ಉಳಿದವರೆಲ್ಲಾ ಸವಿಗನಸುಗಳಲ್ಲಿ ತೇಲುತ್ತಿದ್ದಾಗ, ನಾನು ಮತ್ತೆ ಕೆಮ್ಮಿನಿಂದ ತತ್ತರಿಸಿಹೋಗಿದ್ದೆ.

ಅವತ್ತು ಕೊಹ್ಲಿ ಆಡುತ್ತಿದ್ದಾಗಲೇ, ಕೋಚ್‌ ಮತ್ತು ತೆಂಡೂಲ್ಕರ್‌ ಒಟ್ಟಿಗೆ ಹೇಳಿದರು: “ಶ್ರೀಲಂಕಾ ತಂಡದಲ್ಲಿ ಮೂವರು ಸ್ಪಿನ್ನರ್‌ಗಳು ಇದ್ದಾರೆ. ಅವರನ್ನು ಕನ್ ಫ್ಯೂಸ್‌ ಮಾಡಿಯೇ ಅವರ ಮೇಲೆ ಒತ್ತಡ ಹೇರಬೇಕು. ಅಂದರೆ, ಒಬ್ಬ ಬಲಗೈ-ಇನ್ನೊಬ್ಬ ಎಡಗೈ ಆಟಗಾರ ಇರುವಂತೆ ಪ್ಲಾನ್‌ ಮಾಡಬೇಕು.

ಅಕಸ್ಮಾತ್‌ ಈಗ ಗಂಭೀರ್‌ ಔಟ್‌ ಆದರೆ, ಯುವಿ ಆಡಲು ಹೋಗಲಿ. ಅಥವಾ ಕೊಹ್ಲಿ ಔಟ್‌ ಆದರೆ, ಧೋನಿ ಬ್ಯಾಟಿಂಗ್‌ಗೆ ಇಳಿಯಲಿ…” ಅವತ್ತು ಮೊದಲು ಕೊಹ್ಲಿ ಔಟ್‌ ಆದ. ಪ್ಲಾನ್‌ ಪ್ರಕಾರ, ಧೋನಿ ಆಟಕ್ಕಿಳಿದ. ಅಂಥದೊಂದು ವಿರಾಮಕ್ಕೇ ಕಾದಿದ್ದವನಂತೆ, ಡ್ರೆಸ್ಸಿಂಗ್‌ ರೂಮಿಗೆ ಓಡಿ ಹೋಗಿ, ವಾಶ್‌ ಬೇಸಿನ್‌ ಮುಂದೆ ನಿಲ್ಲುತ್ತಿದ್ದಂತೆಯೇ- ವಾಂತಿ, ಅದರ ಜೊತೆಗೇ ರಕ್ತ…

ಇಂಥ ನೋವನ್ನು ಜೊತೆಗಿಟ್ಟುಕೊಂಡೇ ಆಡಿದೆನಲ್ಲ… ಅದನ್ನು ನೆನಪು ಮಾಡಿಕೊಂಡಾಗಲೆಲ್ಲ, ನನ್ನ ಬಗ್ಗೆ ನನಗೇ ಹೆಮ್ಮೆ ಅನಿಸುತ್ತದೆ. ನನ್ನ ಅನಾರೋಗ್ಯದ ವಿಷಯವನ್ನು ಮುಚ್ಚಿಟ್ಟು, ಟೂರ್ನಿ ಮುಗಿವವರೆಗೂ ನನ್ನನ್ನು ಜೋಪಾನ ಮಾಡಿದ ಫಿಸಿಯೋ ಮತ್ತು ಜೊತೆಗಾರರಿಗೆ ಬದುಕಿಡೀ ಋಣಿಯಾಗಿ ಇರಬೇಕು ಅನಿಸುತ್ತದೆ….

– ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

Postman ಅಂಚೆ ಅಣ್ಣನಿಗೆ ಒಂದು ಅಕ್ಕರೆಯ ಪತ್ರ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

ಅಪ್ಪಾ ಹೆದರಬೇಡ, ನಿನ್ನ ಕಾಲಾಗಿ ನಾನಿರ್ತೇನೆ

MUNNA

ಕೆಮರಾ ಕಣ್ಣು ಮಿಟುಕಿಸುತ್ತಾ “ಕಮಾಲ್‌”ಮಾಡಿದ!

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ಕಷ್ಟ ಕೊಡುವ ದೇವರು ಖುಷಿಯನ್ನೂ ಕೊಡುತ್ತಾನೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.