ಸರ್ನೇಮ್ ನಾವು ಭಾವಿಸಿದಷ್ಟು ಸರಳವಲ್ಲ!
Team Udayavani, May 17, 2018, 6:00 AM IST
ಕಾಲದ ಚಲನೆಯಲ್ಲಿ ಕಳೆದುಕೊಂಡದ್ದನ್ನು ಮತ್ತೆ ಪಡೆಯುವ ತವಕವೆ? ಮತ ಧರ್ಮದ ಜಗಳ ಸಮರದಂತೆ ಕೆಲವೊಮ್ಮೆ ಕಂಡು ಬಂದರೆ ಜಾತಿಯು ಶೀತಲ ಸಮರದಂತೆ ಇದೆ. ಮತ ಪ್ರೀತಿಯ ಹಿಂದೆ ಇರುವುದು ಮತ (ಓಟು) ಪ್ರೀತಿ. ಅದು ಅಧಿಕಾರಕ್ಕಾಗಿ. ಅದೂ ಒಂದು ಉದ್ಯಮ. ಜಾತಿಯೂ ಅಷ್ಟೆ. ಪಕ್ಷಗಳು ಇಂತಹ ಭಾವನಾತ್ಮಕ ಅಂಶಗಳನ್ನು ಮಾರುಕಟ್ಟೆಯ ಸರಕಾಗಿ ಬಳಸಿ ಲಾಭ ಗಳಿಸುತ್ತಿವೆ.
ಹೆಸರಿನಲ್ಲೇನಿದೆ? ಎನ್ನುವುದು ಹಳೆಯ ಹೇಳಿಕೆ. ಹೆಸರು ಒಬ್ಬ ವ್ಯಕ್ತಿಯನ್ನು ಗುರುತಿಸುವುದಕ್ಕಾಗಿ ಅಷ್ಟೆ. ನಮಗೆ ಇಟ್ಟ ಹೆಸರು ಏನೂ ಮಾಡುವುದಿಲ್ಲ. ವ್ಯಕ್ತಿಯ ಕಾರ್ಯವೈಖರಿ, ಗುಣಸ್ವಭಾವ ಅವನಿಗೆ ಹೆಸರನ್ನು ತಂದುಕೊಡುತ್ತದೆ. ಹೆಸರು ಹೇಗಿದ್ದರೂ ಆ ವ್ಯಕ್ತಿಯ ಸಾಧನೆ , ಪ್ರತಿಭೆಯ ಮೂಲಕ ವ್ಯಕ್ತಿಗೆ ಪ್ರಭೆ ಮೂಡುತ್ತದೆ. ಅಂದರೆ ಅವನಿಗೊಂದು ಹೆಸರು ಬರುತ್ತದೆ. ಅಂತಹ ವ್ಯಕ್ತಿಯ ಹೆಸರು ನಮಗೆ ಚೆಲುವಾಗಿಯೇ ಕಾಣುತ್ತದೆ. ಹೆಸರೆಂದರೆ ಬರೇ ಅಕ್ಷರವಲ್ಲ; ಅದೊಂದು ಭಾವ. ಬಾಳ್ವೆ ಸಮೃದ್ಧವಾದಷ್ಟು ಹೆಸರಿನ ಆಯುಷ್ಯ ಹೆಚ್ಚು.
ಇಲ್ಲಿ ಹೇಳಹೊರಟಿರುವುದು ವ್ಯಕ್ತಿಯ ಹೆಸರಿನ ಬಗ್ಗೆ ಅಲ್ಲ. ಹೆಸರಿನೊಂದಿಗಿರುವ ಸರ್ನೇಮ್ ಬಗ್ಗೆ. ವ್ಯಕ್ತಿಗೆ ಇರುವ ಹೆಸರು ಕೇವಲ ಗುರುತಿಸುವುದಕ್ಕೆ ಎಂದಾದರೆ ಮತ್ತೆ ಅದರ ಜೊತೆಗಿರುವ ಸರ್ನೇಮ್ಗೆ ಏನೇನೂ ಮಹತ್ವವಿಲ್ಲ. ಸರ್ನೇಮ್ ಇಲ್ಲದೆಯೂ ವ್ಯಕ್ತಿಯನ್ನು ಗುರುತಿಸುವುದು ಸಾಧ್ಯ. ಹೆಸರಿ ನೊಂದಿಗೆ ಸರ್ನೇಮ್ ಇದ್ದರೂ ಸರಿಯೆ. ಅದು ಚರ್ಚಿಸಬೇಕಾದ ವಿಷಯವೇ? ತೀರ ಗೌಣವಾದ ವಿಷಯ. ಈ ಗೌಣ ಸಂಗತಿಯೂ ಕಾಡುವಂತಾಗಿರುವುದು ವಿಪರ್ಯಾಸ.
ಸರ್ನೇಮ್ ಬಹುತೇಕ ಜಾತಿಸೂಚಕವಾಗಿರುತ್ತದೆ. ಅದನ್ನು ಜಾತಿಸೂಚಕ ಎಂದು ಕರೆಯುವುದು ಸೂಕ್ತವಲ್ಲ. ನಿಜವಾಗಿಯೂ ಅದು ಅನ್ನಸೂಚಕ. ಹಸಿವನ್ನು ತಣಿಸುವುದಕ್ಕಾಗಿ ನಮ್ಮ ಹಿರಿಯರು ಒಂದೊಂದು ಕಾಯಕದಲ್ಲಿ ತೊಡಗಿಸಿಕೊಂಡರು. ಸಮಾನ ವೃತ್ತಿಯವರೊಂದಿಗೆ ಸಂಬಂಧ ಬೆಳೆಯಿತು. ಅದೂ ಅನ್ನದ ಸಂಪಾದನೆಗಾಗಿ ಬೆಳೆಸಿದ ಅನುಕೂಲಕರ ಹಾದಿ. ಆ ಗುಂಪು ಜಾತಿಯಾಗಿ ಸಮಾಜದಲ್ಲಿ ಕಾಣಿಸಿಕೊಂಡಿತು ಎಂದು ಒಪ್ಪಿಕೊಳ್ಳುವುದಕ್ಕೆ ಸಮಾಜಶಾಸ್ತ್ರಜ್ಞರ ಸಿದ್ಧಾಂತ ವ್ಯಾಖ್ಯಾನಗಳೇ ಆಗಬೇಕಿಲ್ಲ. ಅಲ್ಲಿ ದಾರಿ ಅನ್ನದ್ದೇ ಆದರೂ ಅದಕ್ಕಾಗಿ ಇದ್ದ ದಾರಿ ಒಂದೇ ಅಲ್ಲ. ಕೆಲವು ಶ್ರಮ ಸಂಬಂಧಿಯಾದರೆ ಇನ್ನು ಕೆಲವು ಆಡಳಿತ ಸಂಬಂಧಿ. ಕೆಲವರದ್ದು ತಲೆಯಿಂದ ಕೆಲಸ
ಮತ್ತೆ ಕೆಲವರು ಕೈಕಾಲಿನಿಂದ. ಯಾಕಾಗಿ? ತಲೆ ಮತ್ತು ಕಾಲಿನ ಮಧ್ಯೆ ಇರುವ ಹೊಟ್ಟೆಗಾಗಿ. ಈ ವಾಸ್ತವವನ್ನು ಅಹಂಮಿನ ಪೊರೆ ಕಳಚಿ ಒಪ್ಪಿಕೊಳ್ಳಬೇಕು.
ನಾಡಗಲವಿರುವ ಜನರ ಸರ್ನೇಮ್ಗಳನ್ನು ಪಟ್ಟಿ ಮಾಡುತ್ತಾ ಶೋಧಿಸಿದರೆ ಆತನ ಅನ್ನದ ದಾರಿ ತೆರೆದುಕೊಳ್ಳುವುದು. ಇಂದು ಕೂಡ ನಿನ್ನ ಹೆಸರೇನು? ಎನ್ನುವುದಕ್ಕಿಂತ ನೀನು ಏನು ಮಾಡುತ್ತಿದ್ದೀಯ? ಎಂಬ ಪ್ರಶ್ನೆಯನ್ನು ಎದುರಿಸಬೇಕಾಗುತ್ತದೆ. ಹೆಸರಿಗಿಂತ ಅನ್ನ ಸಂಪಾದನೆಯೇ ಮುಖ್ಯ. ಆ ಕಾರಣದಿಂದಲೇ ಹೆಸರಿ ನೊಂದಿಗೆ ವೃತ್ತಿಸೂಚಕ ಸರ್ನೇಮ್ ಅಂಟಿಕೊಂಡಿರಬೇಕು. ದುಡಿದು ತಿನ್ನುವ ಕಾಯಕ ಶ್ರೇಷ್ಠ. ಹೆಸರಿನೊಂದಿಗೆ ಸರ್ನೆàಮ್ ಸೇರಿಸುವ ಮೂಲಕ ಅನ್ನಕ್ಕೆ, ದುಡಿಮೆಗೆ ಗೌರವ. ತನ್ನ ದುಡಿಮೆ ತನಗಾಗಿ ಮತ್ತು ಇತರರಿಗಾಗಿ. ಇತರರು ಇಲ್ಲದೆ ತನ್ನ ಸರ್ನೇಮ್ ಇಲ್ಲ. ಸಮಾಜವೆಂದರೆ ಅವಲಂಬನೆಗಳ ಮೊತ್ತ. ಇತರರ ಕೈಯಲ್ಲಿರುವ ಅನ್ನವನ್ನು ದುಡಿದು ಸಂಪಾದಿಸುತ್ತೇವೆ. ಈ ಅನ್ನವೇ ರಕ್ತವಾಗಿ ಶಕ್ತಿ ತುಂಬುತ್ತದೆ. ಇದೂ ಒಂದು ರಕ್ತ ಸಂಬಂಧವೆ.
ದೈಹಿಕ ಶ್ರಮ ಬಯಸುವ ದುಡಿಮೆಯಲ್ಲಿ ಮಣ್ಣು ಮೆತ್ತಿಕೊಳ್ಳುತ್ತದೆ. ಬೆವರು ಹರಿಯುತ್ತದೆ. ನೋವು ಪರಿಹಾರಕ್ಕೆ ಲಭ್ಯವಿರುವ ಸುಲಭದ ದಾರಿ ಹಿಡಿಯುತ್ತಾನೆ. ವೃತ್ತಿಗೆ ತಕ್ಕ ಪ್ರಜ್ಞೆ ಮೂಡುತ್ತದೆ.
ವೃತ್ತಿ ಬಾಂಧವರು ಕಾಲಕ್ರಮೇಣ ಒಂದು ಜಾತಿಯಾಗಿ ರೂಪು ತಾಳಿದ್ದು ಹಂತ ಹಂತವಾದ ಪ್ರಕ್ರಿಯೆ. ಅಷ್ಟೇ ಕುತೂಹಲಕರ ವಾದುದು. ಅದು ಉಂಟು ಮಾಡಿದ ಸ್ತರ ವ್ಯವಸ್ಥೆ ಈ ಪ್ರಕ್ರಿಯೆಯ ಇನ್ನೊಂದು ಮಗ್ಗುಲು. ಕಳೆದ ಎರಡು ದಶಕದಿಂದೀಚೆ ಈ ವಿಷಯದಲ್ಲಿ ಉದಾರೀಕರಣದ ಯುಗ, ವೃತ್ತಿಯ ಆಯ್ಕೆಯಲ್ಲಿ ಸಂಭವಿಸಿದ ಪಲ್ಲಟ ಒಂದು ಮಹಾಪ್ರಬಂಧಕ್ಕೆ ಸಾಮಾಗ್ರಿ ನೀಡಬಲ್ಲುದು. ನಿರ್ವಹಿಸಬಲ್ಲ, ಸಂಪಾದಿಸಬಲ್ಲ ವೃತ್ತಿಯ ಆಯ್ಕೆ ಜಾತಿಯ ಗಡಿದಾಟಿರುವುದು ಇಂದಿನ ವಾಸ್ತವ.
ಜಾತಿ ಹಿಂದಿಗಿಂತಲೂ ಸಂಕೀರ್ಣಗೊಂಡಿದೆ. ವೃತ್ತಿ ಸಡಿಲ ಗೊಂಡು ಜಾತಿ ಬಲಗೊಂಡಿದೆ. ಇರಲಿ. ವಿಶ್ವದ ಮಾನವರಾದರೂ ಬಾಳಿಗೊಂದು ಗೂಡುಬೇಕಲ್ಲವೆ? ಆದರೆ ಗೂಡು ಉಸಿರು ಕಟ್ಟುವಂತಾದರೆ ಕಷ್ಟ. ಒಂದು ಕಡೆಯಲ್ಲಿ ಸ್ವದೇಶದ ವರ ವಿದೇಶದ ವಧುವನ್ನು ವರಿಸಿದ ಸುದ್ದಿ ನಮ್ಮ ಮುಂದಿದೆ. ವಿದ್ಯಾವಂತ ವೃತ್ತಿಪರ ಹುಡುಗ ತನ್ನದೇ ವೃತ್ತಿಯವಳನ್ನು ಜಾತಿ ಗಮನಿಸದೆ ಸ್ವೀಕರಿಸುತ್ತಾನೆ. ಹರಸಿ ಉಂಡು ಬರುತ್ತೇವೆ. ಸಮುದಾಯದಲ್ಲಿ ಹೆಣ್ಣು ಮಕ್ಕಳ ಕೊರತೆಯನ್ನು ಪ್ರಕೃತಿ ಒಡ್ಡಿದಾಗ ಸಂಸ್ಕೃತಿಯನ್ನು ಕೊಂಚ ಸಡಿಲಗೊಳಿಸಿ ಸಪ್ತಪದಿ ತುಳಿ ಯುವುದೂ ಸಾಮಾನ್ಯ. ಮುಟ್ಟುವುದರಲ್ಲಿ,ಉಣ್ಣುವುದರಲ್ಲಿ ಯಾವ ತಾರತಮ್ಯವೂ ಇಲ್ಲದೆ ಜಾತಿ ಕರಗಿ ನೀರಾಗುತ್ತದೆ. ದೈವ ದೇವರ ನೆಪದಲ್ಲಿ ಒಂದಿಷ್ಟು ಉಳಿದುಕೊಂಡಿದ್ದರೂ ಅದು ಗೌಣ. ಏನಿದ್ದರೂ ಇದು ಮಾರುಕಟ್ಟೆಯ ಯುಗ. ಸಂಪಾದಿಸುವುದಕ್ಕೆ ಕೊಂಡುಕೊಳ್ಳುವುದಕ್ಕೆ ಬಾಳಿನ ಬಹುಪಾಲು ಗಮನ.ಆದರೆ ಹೆಸರಿನೊಂದಿಗೆ ಸರ್ನೆàಮ್ ಹಾಗೆಯೇ ಉಳಿದಿದೆ ಯಲ್ಲಾ? ಇರಲಿ ಬಿಡಿ. ಭಾರತೀಯರಿಗೆ ಇತಿಹಾಸ ಪ್ರಜ್ಞೆ ಇಲ್ಲ ಎಂಬುದು ವಿದೇಶಿ ಇತಿಹಾಸ ತಜ್ಞರ ಮಾತು. ವ್ಯಕ್ತಿ ತನ್ನ ಹಿನ್ನೆಲೆಯನ್ನು ಈ ಮೂಲಕವಾದರೂ ಗ್ರಹಿಸಬಹುದು. ವೃತ್ತಿಯೇ ಇಲ್ಲದ ಮೇಲೆ ಈ ವೃತ್ತಿ ಸೂಚಕ ಸರ್ನೇಮ್ ಯಾಕೆ ಎಂದು ತೆಗೆದುಬಿಡಲೂಬಹುದು.
ಜನಸಮೂಹದ ಮಧ್ಯೆ ನಾವೂ ಒಬ್ಬರಾಗಿ ಕಿವಿಯಾದರೆ ಈ ಸರ್ನೆಮ್ ನಾವು ಭಾವಿಸಿಕೊಂಡಷ್ಟು ಸರಳವಾಗಿಲ್ಲ ಎಂಬುದು ಸ್ಪಷ್ಟ.
ಅದೊಂದು ಕಂಬಳ ಕೂಟ. ಓಟದ ಕೋಣಗಳ ಗೆಲುವು, ಗತ್ತು ಗಾಂಭೀರ್ಯಕ್ಕೆ ಮನಸೋತವರೆ. ಆದರೆ ಒಂದಿಷ್ಟು ಮಂದಿ ಗುಂಪು ಸೇರಿ ಮಾತನಾಡುವ ವಿಷಯವೇ ಬೇರೆ. ಕೋಣಗಳ ಮಾಲೀಕರ ಜಾತಿ ಯಾವುದು ಎಂಬುದರ ಮೇಲೆಯೇ ಅವರದ್ದು ಚರ್ಚೆ. ಅದರ ಆಧಾರದಲ್ಲೇ ಅವರದ್ದು ಅಭಿಮಾನ, ಬೆಂಬಲ ಎಲ್ಲವೂ. ಕಂಬಳದ ಮುಗ್ಧ ಕೋಣಗಳಲ್ಲೂ ಜಾತಿ ಹುಡುಕುತ್ತಾ ಕಂಬಳದ ಆನಂದ ವಂಚಿತ ನತದೃಷ್ಟರು.
ಕಲಾರಂಗದಲ್ಲಿ ಅಪ್ರತಿಮ ಸಾಧನೆ ಮಾಡಿದ ಮಿತ್ರನೊಬ್ಬ ತನ್ನ ಗೋಳು ತೋಡಿಕೊಂಡ. ನಮ್ಮ ಸಂಘದಿಂದ ಸನ್ಮಾನವಾಯಿತು. ಸಭೆ ಊಟ ಮುಗಿದು ಒಂದಿಷ್ಟು ಹರಟೆ. “ನೀವು ನಿಮ್ಮ ಹೆಸರಿನೊಂದಿಗೆ ಸರ್ನೆàಮ್ ಯಾಕೆ ಹಾಕುತ್ತಿಲ್ಲ. ನೀವು ಇಷ್ಟು ಸಾಧನೆ ಮಾಡಿಯೂ ಸಮಾಜದವರು ಎಂದು ಗೊತ್ತಾಗುತ್ತಿಲ್ಲ’ ಎಂದರಂತೆ. ಪಕ್ಕದಲ್ಲಿ ಕುಳಿತವರೊಬ್ಬರು “ಹಾಗೆ ಹೇಳಲಾಗದು ಸರ್ನೆàಮ್ ಅವರು ಹಾಕವುದಕ್ಕೆ ಸ್ವತಂತ್ರರು. ವ್ಯಕ್ತಿಯ ಒಳಿತು ಕೆಡುಕನ್ನು ಜಾತಿಗೆ ಅಂಟಿಸುವುದೊಂದು ಭ್ರಮೆ. ಸರ್ನೆàಮ್ ಹಾಕಿದವ ಮನೆಹಾಳು ಕೆಲಸ ಮಾಡಿದಾಗಲೂ ಜಾತಿಯೇ ಹಾಗೆ ಎಂದು ಭಾವಿಸುವುದೂ ಸಾಧುವಲ್ಲ’ ಎಂದರು. ಮತ್ತೆ ಆ ಹಿರಿಯರು ಮಿತ್ರನಲ್ಲಿ ಕೆಲವು ಸಮುದಾಯಗಳನ್ನು ಉಲ್ಲೇಖೀಸಿ “ನೀವು ಅವರ ಜಾತಿಯಲ್ಲಿ ಹುಟ್ಟುತ್ತಿದ್ದರೆ ಹಾಕುತ್ತಿರಲಿಲ್ಲವೇ?’ ಎಂದು ಮರು ಪ್ರಶ್ನಿಸಿದರಂತೆ. ಒಮ್ಮೆ ತಡವರಿಸಿ “ಇಲ್ಲ…ಇಲ್ಲ’ ಎಂದರಂತೆ. ನಗಣ್ಯ ಸಂಗತಿಗಳಿಗೆ ವಿಪರೀತ ಮಹತ್ವ ಕೊಡುವ ಈ ಮಾತುಗಳು ಸಂಕಟ ತರುತ್ತವೆ.
ಒಂದೆರಡು ವರ್ಷಗಳ ಹಿಂದೆ ಹಿರಿಯ ಸಾಹಿತಿ ಅಮೃತ ಸೋಮೇಶ್ವರ ಅವರು ಪತ್ರಿಕೆಯೊಂದರಲ್ಲಿ ಈ ಬಗ್ಗೆ ಬರೆದಿ
ದ್ದರು. ಜಾತಿಸೂಚಕ ಸರ್ನೆàಮ್ ಹಾಕುವ ಬದಲು ಊರಿನ ಹೆಸರನ್ನು ಹಾಕುವುದು ಸೂಕ್ತ ಎಂದಿದ್ದರು. ಅಮೃತರ ಈ ಸದಾಶಯ ಒಪ್ಪಬೇಕಾದುದೆ. ಆದರೆ ಜಾತಿ ಸೂಚಕ ಸರ್ನೇಮ್ ಹಾಕಿಯೂ ವಿಶಾಲ ಮನೋಭಾವ ತುಂಬಿಕೊಂಡ ಜನ ನಮ್ಮ ನಡುವೆ ಇದ್ದಾರೆ. ಹಾಕದೆಯೂ ಪ್ರಜ್ಞೆಯ ಆಳದಲ್ಲಿ ಜಾತಿವಾದಿಗಳಿದ್ದಾರೆ. ಈ ಪ್ರಜ್ಞೆ ಇಂದು ಕಲೆ, ಸಾಹಿತ್ಯ, ಕ್ರೀಡೆಗೂ ಆವರಿಸಿರುವುದು ನಿಜಕ್ಕೂ ಆತಂಕ ಮೂಡಿಸುವಂತಹುದು. ಆದರ್ಶಕ್ಕಾಗಿಯೋ, ಕೀಳರಿಮೆಯಿಂದಲೋ ಜಾತಿಸೂಚಕ ಸರ್ ನೇಮ್ ಕೈಬಿಟ್ಟವರೂ ಈ ಜಾತಿ ಅಬ್ಬರದಲ್ಲಿ ಆತ್ಮಾಭಿಮಾನ ಕಳೆದು ಕೊಂಡರೆ ಆಶ್ಚರ್ಯವಿಲ್ಲ. ಸಮಾಜದ ಕಟ್ಟ ಕಡೆಯಲ್ಲಿ ಗುರುತಿಸಿ ಕೊಂಡ ಸಮುದಾಯಗಳೂ ತನ್ನ ಸರ್ನೆàಮ್ನ್ನು ದಪ್ಪ ಅಕ್ಷರದಲ್ಲಿ ಹಾಕಿಕೊಂಡು ಅಭಿಮಾನದಿಂದ ಬದುಕಬೇಕು ಎಂದೆನಿಸುತ್ತದೆ.
ಪ್ರತಿ ಜೀವಿಯೂ ಪ್ರಕೃತಿಯಲ್ಲಿ ಅಪೂರ್ವ ಸೃಷ್ಟಿ, ಎಲ್ಲರೂ ಹುಟ್ಟು ಪ್ರತಿಭಾವಂತರೇ ಆಗಿದ್ದಾರೆ. ಸರ್ನೆಮ್ ಬಳಸುತ್ತಲೇ ಸಾಧಿಸಿ ಸಮುದಾಯಕ್ಕೆ ಗುಡ್ವಿಲ್ ತರಬೇಕಾಗಿದೆ ಎಂದೆನಿಸುತ್ತದೆ. ಬತ್ತಲೆ ರಾಜ್ಯದಲ್ಲಿ ಬಟ್ಟೆ ತೊಟ್ಟವನಿಗೆ ಏನು ಬೆಲೆಯಿದೆ? ಇದು ಮಾರುಕಟ್ಟೆ ಯುಗ. ಸಂಪಾದಿಸುವುದು ಮತ್ತು ಕೊಂಡುಕೊಳ್ಳುವುದೇ ಬದುಕು ಎಂಬುದಾಗಿ ಅನೇಕ ಭಾಷಣಕಾರರು ಬರಹಗಾರರೂ ಹೇಳುವುದಿದೆ. ಈ ಮಾರುಕಟ್ಟೆ ಜಗತ್ತು ಕಲೆ, ಕ್ರೀಡೆ, ವಿದ್ಯೆ ಎಲ್ಲವನ್ನೂ ಆವರಿಸಿದೆ. ಇಂತಹ ಕಾಲದಲ್ಲಿ ಬದುಕಿನಲ್ಲಿ ಅಷ್ಟೇನೂ ಕಾಣಸಿಗದ ಜಾತಿ ಭಾವದಲ್ಲಿ ಯಾಕೆ ಉಳಿಯಿತು ಎಂಬುದು ಪ್ರಶ್ನೆ. ಕಾಲದ ಚಲನೆಯಲ್ಲಿ ಕಳೆದುಕೊಂಡದ್ದನ್ನು ಮತ್ತೆ ಪಡೆಯುವ ತವಕವೆ? ಮತ ಧರ್ಮದ ಜಗಳ ಸಮರದಂತೆ ಕೆಲವೊಮ್ಮೆ ಕಂಡು ಬಂದರೆ ಜಾತಿಯು ಶೀತಲ ಸಮರದಂತೆ ಇದೆ. ಮತ ಪ್ರೀತಿಯ ಹಿಂದೆ ಇರುವುದು ಮತ (ಓಟು) ಪ್ರೀತಿ. ಅದು ಅಧಿಕಾರಕ್ಕಾಗಿ. ಅದೂ ಒಂದು ಉದ್ಯಮ. ಜಾತಿಯೂ ಅಷ್ಟೆ. ಪಕ್ಷಗಳು ಇಂತಹ ಭಾವನಾತ್ಮಕ ಅಂಶಗಳನ್ನು ಮಾರುಕಟ್ಟೆಯ ಸರಕಾಗಿ ಬಳಸಿ ಲಾಭಗಳಿಸುತ್ತಿವೆ.
ಕುಟುಂಬ, ಜಾತಿ, ಊರು, ದೇಶ ಮೊದಲಾದ ಬಾಂಧವ್ಯದಲ್ಲಿ ಸುಖವಿದೆ. ಬದುಕಿಗೆ ಅರ್ಥವೂ ಇದೆ. ಆದರೆ ಅನ್ಯದ್ವೇಷ ಅಪನಂಬಿಕೆ ಮಾನವ ಜಾತಿಗೆ ಅಂಟಿದ ದಾರಿದ್ರÂ. ಇದು ಅನ್ನ ಬಟ್ಟೆಯ ದಾರಿದ್ರಕ್ಕಿಂತಲೂ ನಿಕೃಷ್ಟವಾದುದು. ಮತ ಮಾರು ಕಟ್ಟೆಯ ದಾಳಿಗೆ ಬಲಿಯಾಗದೆ ಬಾಳುವುದಲ್ಲೇ ಜೀವನದ ಯಶಸ್ಸಿದೆ. ಒಳ್ಳೆಯವರು ಎಲ್ಲಾ ಕಡೆ ಇದ್ದಾರೆ. ಕೃತಕ ಕನ್ನಡಕವನ್ನು ಕಿತ್ತು ನೋಡಬೇಕಾಗಿದೆ. ಸುಂದರ ಬದುಕಿಗೆ ಅರ್ಥ ಕೇಂದ್ರಿತ ಜಾಗತೀಕರಣವಷ್ಟೆ ಸಾಲದು. ಕುವೆಂಪು ಅವರ ಭಾವ ಕೇಂದ್ರಿತ ವಿಶ್ವಮಾನವ ಕಲ್ಪನೆಯೂ ಬೇಕು. ಅದಕ್ಕಾಗಿ ಕುಟುಂಬ, ಗ್ರಾಮ, ಜಾತಿ ಮೊದಲಾದ ಮನೆಯನ್ನು ಒಡೆಯಬೇಕಾಗಿಲ್ಲ. ಬಾಗಿಲು ಕಿಟಕಿ ತೆರೆಯಬೇಕಾಗಿದೆಯಷ್ಟೆ. ಹೊರಗೆ ಅಂಟಿಸಿದ ನೇಮ್, ಸರ್ನೆàಮ್ ಬೋರ್ಡು ಯಾವುದೇ ಇರಲಿ ಜೀವದೊಲುಮೆ ಬತ್ತದಿರಲಿ. ಪ್ರತಿಭೆ, ಶ್ರಮ, ಸಾಧನಶೀಲನ ಹೆಸರು ಹೇಗಿದ್ದರೂ ಚೆನ್ನ.
– ಯೋಗೀಶ್ ಕೈರೋಡಿ