ಹೊಂಗೆ ಮರದಲಿ ತೇಲಿ ಬಂತು ಭೃಂಗದ ಸಂಗೀತ..!
Team Udayavani, Jul 17, 2021, 7:04 PM IST
ಸಿಂಗಾಪುರ :“ಭೃಂಗದ ಸಂಗೀತ ಕೇಳಿ’ ಸಿಂಗಾಪುರ ಕನ್ನಡ ಸಂಘವು ತನ್ನ 25 ವಸಂತಗಳ ಸಂಭ್ರಮವನ್ನು ಸಿಂಗಪುರದ ಕನ್ನಡಿಗರ ಜತೆಯಲ್ಲಿ ಆಚರಿಸಲು ಹಮ್ಮಿಕೊಂಡ ಒಂದು ಸುಂದರ ಕಾರ್ಯಕ್ರಮ. ಇಂದು ಜಗತ್ತು ಎದುರಿಸುತ್ತಿರುವ ಕೊರೊನಾ ಮಹಾಮಾರಿಯ ನಿರ್ಬಂಧಗಳ ಕಾರಣದಿಂದ ಯೂಟ್ಯೂಬ್ ವೇದಿಕೆಯ ಮೂಲಕ ಜೂ. 26ರಂದು ಶನಿವಾರ ಸಂಜೆ ನಮ್ಮ ಹೆಮ್ಮೆಯ ಸಿಂಗನ್ನಡಿಗರ ಮನೆಗಳ ಪರದೆಗಳಲ್ಲಿ ಮೂಡಿಸುವ ಪ್ರಯತ್ನ ಯಶಸ್ವಿಯಾಗಿ, ವಾರಾಂತ್ಯವನ್ನು ಸುಂದರವಾಗಿಸಿತು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ರಮ್ಯಾ ಅವರು ಕಾರ್ಯಕ್ರಮಕ್ಕೆ ಮುನ್ನುಡಿಯನ್ನು ನುಡಿದರು. ಅನಂತರ ಸಂಘದ ಅಧ್ಯಕ್ಷರಾದ ವೆಂಕಟ್ ಅವರು ಕಾರ್ಯಕ್ರಮದ ಹಿನ್ನಲೆ, ಉದ್ದೇಶಗಳನ್ನು ಸವಿಸ್ತಾರವಾಗಿ ವಿವರಿಸಿದರು. ಹಳೆಯ ಬೇರು ಹಾಗೂ ಹೊಸ ಚಿಗುರಿನ ಸಂಧಾನವೇ ಹೊಸತನ, ಹೊಸ ಚಿಗುರು ಮುಡಿದಾಗಲೇ ಜೀವನದಲ್ಲಿ ಹೊಸತನ ಕಾಣುವುದು. ಹೊಸ ಲವಲವಿಕೆ ಮತ್ತು ಹೊಸ ಅನ್ವೇಷಣೆಯಲ್ಲಿ ಮನುಷ್ಯ ತನ್ನನ್ನು ತೊಡಗಿಸಿಕೊಂಡಾಗ ಜೀವನಕ್ಕೆ ಹೊಸ ಅರ್ಥ ಬರುವುದು ಎಂಬುದನ್ನು ಡಿವಿಜಿ ಅವರ ಕಗ್ಗಗಳನ್ನು ವಾಚನ ಮಾಡುವ ಮೂಲಕ ಹೇಳುತ್ತಾ ಅಂತಹ ಒಂದು ಪ್ರಯತ್ನ ಈ ಕಾರ್ಯಕ್ರಮ ಎಂದು ತಿಳಿಸಿದರು.
ಅನಂತರ ಸಂಘದ ಕಾರ್ಯದರ್ಶಿ ಶಿವಕುಮಾರ್ ಅವರು ಕಲಾವಿದರ ಪರಿಚಯ ಮಾಡಿಸಿ ಅದ್ಭುತ ಕಾರ್ಯಕ್ರಮದ ವೇದಿಕೆಗೆ ಅನುವು ಮಾಡಿಕೊಟ್ಟರು.
ಸಿಂಗಾಪುರದ ಕನ್ನಡಿಗರನ್ನು ಬೆಂಗಳೂರಿನ ಸ್ಟುಡಿಯೋದಿಂದ ನೇರವಾಗಿ ರಂಜಿಸಿದವರು ಹಿನ್ನಲೆ ಗಾಯಕ ಅಜಯ್ ವಾರಿಯರ್, ಇವರೊಂದಿಗೆ ಧ್ವನಿ ಕೂಡಿಸಿದವರು ಗಾಯಕಿ ಶಶಿಕಲಾ ಸುನಿಲ…. ಗಾಯಕರಿಬ್ಬರಿಗೂ ಪಕ್ಕವಾದ್ಯದಲ್ಲಿ ಜತೆ ನೀಡಿದವರು ರಿದಮ್ ಪ್ಯಾಡ್/ಡ್ರಮ್ಸ್ನಲ್ಲಿ ಪ್ರಕಾಶ್ ಅಂಥೋಣಿ ಮತ್ತು ಕೀಬೋರ್ಡ್ ಕಲಾವಿದ ದೀಪಕ್ ಜಯಶೀಲನ್. ಈ ನಾಲ್ವರ ತಂಡದ ಸಂಯೋಗವನ್ನು ತಮ್ಮ ಅದ್ಭುತ ನಿರೂಪಣೆಯ ಮೂಲಕ ವೇದಿಕೆಯನ್ನು ಇನ್ನಷ್ಟು ಸುಂದರವಾಗಿಸಿದವರು ಖ್ಯಾತ ನಿರೂಪಕಿ ರಂಜನಿ ಕೀರ್ತಿ ಅವರು.
ಗಣೇಶನ ಸ್ತುತಿಯೊಂದಿ ಅಜಯ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಳಿಕ ರಾಜಣ್ಣವರ ನಾದಮಯ, ಕಲ್ಲು ಕಲ್ಲಲ್ಲಿ ನುಡಿಯುವ ಕನ್ನಡ ನುಡಿಯ ಕಿಚ್ಚನ್ನು ಹೊಡೆದೆಬ್ಬಿಸಿ, ಜುಮ್ ಎನಿಸುವ ಪ್ರೇಮಲೋಕಕ್ಕೆ ಕೊಂಡೈದು, ಮಳೆ ಬಿಲ್ಲು-ಮೋಡದ ಜೋಡಿಯ ಮಳೆಯನ್ನು ಸುರಿಸಿ, ಮತ್ತೆ ಕನ್ನಡಮ್ಮನ ಸಿರಿಯನ್ನು ಕೊಂಡಾಡಿ, ಮನವ ಕಾಡುವ ರೂಪಸಿಯನ್ನು ಎÇÉೆಲ್ಲೂ ಕಾಣಿಸಿ, ತುಂತುರು ಅಲ್ಲಿ ನೀರ ಹಾಡು ಎಂಬ ತಂಪಾದ ಹಾಡಿನೊಂದಿಗೆ ಮೊದಲ ಸುತ್ತನ್ನು ಮುಗಿಸಿದರು.
ಎರಡನೇ ಸುತ್ತಿನಲ್ಲಿ ನಮ್ಮ ಹೆಮ್ಮೆಯ ಕವಿ ಜಿ.ಎಸ್. ಶಿವರುದ್ರಪ್ಪನವರ ಕಾಣದ ಕಡಲಿಗೆ ಗೀತೆಯಿಂದ, ಕಾಣದ ಕಡಲಿಗೆ ಬದುಕು ಕಟ್ಟಿಕೊಳ್ಳಲು ಬಂದ ಹೊರನಾಡಿನಲ್ಲಿರುವ ನಮೆಲ್ಲ ಕನ್ನಡಿಗರಿಗೂ ಮತ್ತೆ ಮರಳಿ ಕನ್ನಡಮ್ಮನ ಕಡಲಿಗೆ ಮರಳಿ ಹೋಗಬೇಕೆಂಬ ಬಯಕೆ ಮೂಡಿಸಿದರು. ಮಕ್ಕಳಿಗೆಂದು ಹಾಡಿದ ಹಿಂದುಸ್ಥಾನವು ಎಂದು ಮರೆಯದ ಹಾಗೂ ಜನಪದ ಶೈಲಿಯ ಗೀತೆಗಳು, ಶರೀಫಜ್ಜರ ಗೀತೆಗಳು ಕಾರ್ಯಕ್ರಮವನ್ನು ಹೆಚ್ಚು ವೈವಿಧ್ಯಮಯ ಹಾಗೂ ಸಂಗೀತಮಯಗೊಳಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ.
ಕಾರ್ಯಕ್ರಮದ ಒಂದು ಭಾಗವನ್ನು ಇತ್ತೀಚೆಗೆ ಅಗಲಿದ ಎಸ್ಪಿಬಿ ಹಾಗೂ ರಾಜನ್ ನಾಗೇಂದ್ರ ಅವರ ಸ್ಮರಣಾರ್ಥವಾಗಿ ಹಲವು ಮರೆಯದ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸುವುದರ ಮೂಲಕ ಸಮರ್ಪಿಸಲಾಯಿತು.
ಕಾರ್ಯಕ್ರಮದ ಅಂತ್ಯದಲ್ಲಿ ನೀಡಿದ ಹಲವು ಹಾಡುಗಳ ಸಮ್ಮಿಲನದ ಗುತ್ಛ ಪ್ರೇಕ್ಷಕರನ್ನು ತಮ್ಮ ಆಸನಗಳಿಂದ ಬಡಿದೆಬ್ಬಿಸಿ, ಗಾಯನಕ್ಕೆ ಹೆಜ್ಜೆ ಕೂಡಿಸಲು ಪ್ರೇರೇಪಿಸುವಂತೆ ಮಾಡಿತು.
ಮನರಂಜನೆ ಮತ್ತು ಅದನ್ನು ಸವಿಯುವ ಮನಸ್ಸು ಕೇವಲ ಸಭಾಂಗಣದಲ್ಲಿ ಅಲ್ಲದೆ, ಮನೆ ಮನೆಗಳ ಅಂಗಳ, ಪರದೆಗಳಲ್ಲಿಯೂ ಸಾಧ್ಯ ಎಂದು ಸಿಂಗಾಪುರ ಕನ್ನಡಿಗರು ಸಾಬೀತು ಪಡಿಸಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲರೂ ಸುರಕ್ಷಿತವಾಗಿದ್ದು, ಆರೋಗ್ಯ ಕಾಪಾಡಿಕೊಳ್ಳಲಿ. ಕಾರ್ಯಕ್ರಮಗಳು ಮತ್ತೆ ಯಥಾರೀತಿ ನಡೆದು ಕಲಾವಿದರೆಲ್ಲ ಮತ್ತೆ ಸೇರಿ ಕಾರ್ಯಕ್ರಮಗಳನ್ನು ನಡೆಸುವಂತಾಗಲೆಂದು ಹಾರೈಸುತ್ತಾ, ಕಾರ್ಯಕ್ರಮದ ಆರಂಭದಲ್ಲಿ ಉಂಟಾದ ತಾಂತ್ರಿಕ ಅಡಚಣೆಗೆ ಕ್ಷಮೆಯನ್ನು ಕೋರಿ ಇಂತಹ ಅದ್ಭುತ ಕಾರ್ಯಕ್ರಮವನ್ನು ಬೆಂಗಳೂರಿನಿಂದಲೇ ನಡೆಸಿಕೊಟ್ಟಂತಹ ಎಲ್ಲ ಕಲಾವಿದರಿಗೆ, ತಾಂತ್ರಿಕ ಸಿಬಂದಿಗೆ ಹಾಗೂ ಪ್ರೋತ್ಸಾಹಿಸಿ, ಬೆಂಬಲಿಸಿದ ಎಲ್ಲರಿಗೂ ವಂದನೆ ಸಲ್ಲಿಸಲಾಯಿತು.
ವರದಿ- ಸತೀಶ್ ಆರ್.ಎಲ್.