
ಆಧ್ಯಾತ್ಮಿಕ ವಿಕಾಸಕ್ಕಾಗಿ ಭಜನೆ
Team Udayavani, Sep 8, 2022, 5:30 AM IST

ಆಧುನಿಕತೆ ಮತ್ತು ತಂತ್ರಜ್ಞಾನಗಳು ಮಾನವನನ್ನು ಒಂದು ಹಂತದಲ್ಲಿ ವಿಕಾಸದೆಡೆಗೆ ಕೊಂಡೊಯ್ದರೆ ಅದೇ ಸಮಯದಲ್ಲಿ ಅವುಗಳ ಅತಿಯಾದ ದುರುಪಯೋಗದಿಂದಾಗಿ ಅವನ ಅವನತಿಗೂ ಕಾರಣವಾಗುತ್ತಿವೆ. ಕೇವಲ ತನ್ನ ಕೈ ಬೆರಳಿನಿಂದ ಒಂದು ಗುಂಡಿಯನ್ನು ಒತ್ತುವುದರಿಂದ ಇಡೀ ಜಗತ್ತಿನ ಆಗು-ಹೋಗುಗಳನ್ನು ತಾನಿರು ವಲ್ಲಿಂದಲೇ ತಿಳಿದುಕೊಳ್ಳಬಲ್ಲಂತಹ ಸಾಮರ್ಥ್ಯ ಪಡೆದಿರುವ ಮನುಷ್ಯ ತನ್ನ ನಿಜಜೀವನದಲ್ಲಿ ಮಾತ್ರ ಮಾನವೀ ಯತೆಯ ಜೀವನ ಮೌಲ್ಯಗಳನ್ನು ಕಳೆದುಕೊಂಡು ದಿನದಿಂದ ದಿನಕ್ಕೆ ಅತ್ಯಂತ ಸಂಕುಚಿತ ಮನಃಸ್ಥಿತಿಯ ಸ್ವಾರ್ಥ ಬದುಕಿಗೆ ತನಗರಿವಿಲ್ಲದೆ ತನ್ನನ್ನು ಒಗ್ಗಿಸಿಕೊಳ್ಳುತ್ತಿದ್ದಾನೆ. ಈ ರೀತಿಯಾಗಿ ತನ್ನ ಸುಂದರ ಬದುಕನ್ನು ಇನ್ನಷ್ಟು-ಮತ್ತಷ್ಟು ಯಾತನಾಮಯವನ್ನಾಗಿಸುತ್ತಿದ್ದಾನೆ. ಪರಿ ಣಾಮ ತನ್ನ ಸುತ್ತಲಿನ ಸಮಾಜ ಮಾತ್ರವಲ್ಲ ತನ್ನ ಕುಟುಂಬದ ಸದಸ್ಯ ರೊಂದಿಗಿನ ಅ ಮಧುರ ಬಾಂಧವ್ಯದ ಕೊಂಡಿಯನ್ನು ಕಳಚಿ ಅತೀ ಬುದ್ಧಿವಂತಿಕೆಯ ಅಂತರವೊಂದನ್ನು ಕಾಯ್ದುಕೊಂಡು ತನ್ನವರೆನಿಸಿಕೊಂಡವರ ಜತೆಯಲ್ಲಿ ಇದ್ದೂ ಇಲ್ಲದವರಂತೆ ಬದುಕು ತ್ತಿದ್ದಾನೆ.
ಇಂದು ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗಿವೆ. ಈ ವಿಭಕ್ತ ಕುಟುಂಬಗಳು ಸಂಬಂಧಗಳನ್ನು ತಂದೆ-ತಾಯಿ ಮತ್ತು ಎರಡು ಮಕ್ಕಳಿರುವ ಪುಟ್ಟ ಪ್ರಪಂಚಕ್ಕೆ ಸೀಮಿತಗೊಳಿಸಿ ತಮ್ಮ ದುಡಿಮೆ ಮತ್ತು ವಿದ್ಯಾಭ್ಯಾಸದ ಅನಂತರದ ಬಿಡುವಿನ ಸಮಯದಲ್ಲಿ ಟಿವಿ ಧಾರಾವಾಹಿ ಮತ್ತು ಮೊಬೈಲ್ನಲ್ಲಿ ವಾಟ್ಸ್ಆ್ಯಪ್ – ಫೇಸ್ಬುಕ್ ವೀಕ್ಷಣೆಯಲ್ಲಿ ತೊಡಗಿಸಿಕೊಂಡು ತನ್ನತನವನ್ನೇ ಕಳೆದುಕೊಂಡು ಒಂದು ರೀತಿಯ ಕಾಲ್ಪನಿಕ ಲೋಕದಲ್ಲಿ ವಿಹರಿಸುತ್ತಿರುವುದನ್ನು ಆಧುನಿಕತೆಯ ಇಂದಿನ ದಿನಗಳಲ್ಲಿ ನಾವು ಕಾಣ ಬಹುದಾಗಿದೆ.
ಹೆಚ್ಚಿನ ಕಡೆ ಹಿರಿಯರಿಂದ ರೂಢಿಯಾಗಿ ಬಂದಿದ್ದ ಮನೆ- ಮಂದಿ ಯೆಲ್ಲ ಒಟ್ಟು ಸೇರಿ ನಡೆಸುತ್ತಿದ್ದ ಸಂಜೆಯ ಭಜನೆ, ಸಂಧ್ಯಾವಂದನೆ ಕಾರ್ಯಗಳು ಮರೆಯಾಗುತ್ತಿವೆ. ಮನೆಗಳಲ್ಲಿ ಆಚರಿ ಸಲ್ಪಡುತ್ತಿದ್ದ ಸಾಂಪ್ರದಾಯಿಕ ಹಬ್ಬ- ಹರಿದಿನಗಳು ಜೀವನೋತ್ಸಾಹದ ಕೊರತೆ ಯಿಂದ ಸತ್ವವನ್ನು ಕಳೆದುಕೊಂಡು ಕೇವಲ ಶಿಷ್ಟಾಚಾರಕ್ಕೆ ಎಂಬಂತೆ ಆಚರಿಸಲ್ಪಡುತ್ತಿವೆ. ಹಿಂದೆ ನಮ್ಮ ಹಿರಿಯರು ಆಚರಿಸಿ ಕೊಂಡು, ಪಾಲಿಸಿಕೊಂಡು ಬಂದಿದ್ದ ಆಚರಣೆ, ವ್ರತ, ಸಂಸ್ಕಾರಗಳೆಲ್ಲವೂ ಇಂದಿನ ಪೀಳಿಗೆಗೆ ಅಪಥ್ಯವಾಗಿವೆ. ನವ ಪೀಳಿಗೆಗಂತೂ ಈ ಆಚರಣೆ, ಸಂಸ್ಕಾರಗಳ ಪರಿಚಯವೇ ಇಲ್ಲದಂತಾಗಿದೆ. ಇಂದಿನ ಧಾವಂತದ ಯುಗದಲ್ಲಿ ನಿತ್ಯ ಜೀವನದಲ್ಲಿ ಮಾನಸಿಕ ಗೊಂದಲ, ಆತ್ಮವಿಶ್ವಾಸದ ಕೊರತೆ, ಒತ್ತಡದ ಬಳಲಿಕೆ, ಉದ್ವೇಗ, ಖಿನ್ನತೆ, ಅನಾರೋಗ್ಯ ಪ್ರತಿಯೊಬ್ಬರನ್ನೂ ಸದಾ ಕಾಡುತ್ತಿರುತ್ತದೆ. ಇವುಗಳಿಂದ ಮುಕ್ತರಾಗಬೇಕಾದರೆ ನಾವೆಲ್ಲರೂ ಆಧ್ಯಾತ್ಮಿಕ ವಿಕಾಸದ ಕಡೆಗೆ ಹೆಜ್ಜೆ ಹಾಕಲೇಬೇಕಾಗಿದೆ. ಇದು ಇಂದಿನ ತುರ್ತು ಅನಿವಾರ್ಯತೆಯೂ ಹೌದು.
ಈ ಹಿನ್ನೆಲೆಯಲ್ಲಿ ಪ್ರತೀ ದಿನ 30 ನಿಮಿಷಗಳ ಕಾಲ ಟಿವಿ ಮತ್ತು ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಮನೆಯ ಪ್ರತಿಯೋರ್ವ ಸದಸ್ಯನೂ ದೇವರ ಮುಂದೆ ಕುಳಿತು ಭಜನೆಯ ಮೂಲಕ ತನ್ನನ್ನು ಭಗವನ್ನಾಮಸ್ಮರಣೆಯಲ್ಲಿ ತೊಡಗಿಸಿಕೊಂಡಾಗ, ತಮ್ಮ ಮಕ್ಕಳಿಗೆ ಗೀತೆಯ ಜ್ಞಾನಾಮೃತವನ್ನು ಕುಡಿಸಿ ಸಂಸ್ಕಾರವಂತರನ್ನಾಗಿ ಬೆಳೆಸಿದಾಗ ಸುಸಂಸ್ಕೃತ ಆರೋಗ್ಯಕರ ಸಮಾಜ ದಲ್ಲಿ ನಾವು ಶಾಂತಿ, ನೆಮ್ಮದಿ, ಸೌಹಾ ರ್ದತೆ, ಸಮೃದ್ಧಿಯ ಬದುಕನ್ನು ನಮ್ಮ ದಾಗಿಸಿಕೊಳ್ಳಬಹುದಾಗಿದೆ. ಆದ್ದರಿಂದ ಮನೆಯ ಹಿರಿಯರು ತಮ್ಮ ಮಕ್ಕಳ ಸಹಿತ ಮತ್ತು ಮನೆಯ ಇನ್ನಿತರ ಸದಸ್ಯರುಗಳೊಂದಿಗೆ ನಿತ್ಯ ಸಂಜೆಯ 30 ನಿಮಿಷಗಳ ಕಾಲ ಭಜನೆಯಲ್ಲಿ ತೊಡಗಿಸಿಕೊಂಡು ದೇವರ ಅನುಗ್ರಹಕ್ಕೆ ಪಾತ್ರರಾದಾಗ ನಮ್ಮ ಮನಸ್ಸಿನಲ್ಲಿ ಮೂಡಿ ಬರುವ ಧನ್ಯತೆಯ ಭಾವ, ಸಕಾರಾತ್ಮಕತೆಯ ಅನುಭೂತಿ ಮಲ್ಲಿಗೆಯ ಘಮದಂತೆ ಮನೆಯಿಡೀ ಪಸರಿಸಿ ಮನೆ ಮಂದಿಯೆಲ್ಲರ ಬದುಕು ಒತ್ತಡ ರಹಿತವಾಗಿ ಸುಖ- ಶಾಂತಿ-ಸಮೃದ್ಧಿಯಿಂದ ತುಂಬಿ ನಳನಳಿಸಲು ಸಾಧ್ಯ. ಹೀಗೆ ಪ್ರತಿ ಯೊಂದು ಸಂಸಾರವೂ ಸುಖ- ಶಾಂತಿ- ಸಮೃದ್ಧಿ ಯಿಂದ ತುಂಬಿ ಆನಂದದ ಸಾಗರದಲ್ಲಿ ತೇಲಾಡು ವಂತಾದರೆ ತನ್ನಿಂತಾನೆ ಶಾಂತಿ, ಸುಭಿಕ್ಷೆಯಿಂದ ಕೂಡಿದ ಸಮಾಜ ನಿರ್ಮಾಣಗೊಳ್ಳಲಿದೆ.
ಇದು ಇಂದಿನ ಅನಿವಾರ್ಯತೆಯೂ ಹೌದು. ಮಕ್ಕಳು ತಮ್ಮ ಎಳವೆಯಿಂದಲೇ ಸಂಸ್ಕಾರವನ್ನು ಮೈಗೂಡಿಸಿಕೊಂಡರೆ ಅವರ ಭವಿಷ್ಯ ಮಾತ್ರವಲ್ಲ ಇಡೀ ಕುಟುಂಬವೂ ಸಹಜ ಬದುಕಿನ ಸ್ವಾದವನ್ನು ಸವಿಯಲು ಸಶಕ್ತವಾಗಬಲ್ಲುದು. ನಮ್ಮ ಬದುಕಿನಲ್ಲಿ ಸಂಸ್ಕಾರವನ್ನು ಅಳವಡಿಸೋಣ, ಸಮೃದ್ಧಿಯತ್ತ ಮುನ್ನಡೆಯೋಣ…
-ಲೋಕೇಶ್ ಪುತ್ರನ್,ಮಂಗಳೂರು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
