ಸೆನ್ಸಾರ್ ಪರೀಕ್ಷೆಯಲ್ಲಿ “ಶ್ರೀಮನ್ನಾರಾಯಣ’ ಪಾಸ್
ಡಿ. 27 ತೆರೆಗೆ
Team Udayavani, Dec 15, 2019, 7:02 AM IST
ರಕ್ಷಿತ್ ಶೆಟ್ಟಿ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ “ಅವನೇ ಶ್ರೀಮನ್ನಾರಾಯಣ’ ಚಿತ್ರ ತೆರೆಗೆ ಬರೋದಕ್ಕೆ ದಿನ ಗಣನೆ ಶುರುವಾಗಿದೆ. ಇತ್ತೀಚೆಗಷ್ಟೇ ಚಿತ್ರದ ಹಾಡನ್ನು ಬಿಡುಗಡೆರ ಮಾಡಿದ್ದ ಚಿತ್ರತಂಡ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಚಿತ್ರತಂಡ ಭರ್ಜರಿಯಾಗಿ “ನಾರಾಯಣ’ನ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದ್ದು, ಚಿತ್ರದತ್ತ ಪ್ರೇಕ್ಷಕರನ್ನು ಸೆಳೆಯುವ ಅಂತಿಮ ಹಂತದ ಕಸರತ್ತು ನಡೆಸುತ್ತಿದೆ.
ಇದರ ನಡುವೆಯೇ “ಅವನೇ ಶ್ರೀಮನ್ನಾರಾಯಣ’ ಸೆನ್ಸಾರ್ ಪರೀಕ್ಷೆಯಲ್ಲೂ ಸಲೀಸಾಗಿ ಪಾಸಾಗಿದ್ದಾನೆ. ಹೌದು, ಇತ್ತೀಚೆಗಷ್ಟೇ ಪ್ರಾದೇಶಿಕ ಸೆನ್ಸಾರ್ ಮಂಡಳಿ “ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ವೀಕ್ಷಿಸಿತ್ತು. ಬಳಿಕ ಚಿತ್ರಕ್ಕೆ ಯಾವುದೇ ಕಟ್ಸ್, ಮ್ಯೂಟ್ಸ್ ಇಲ್ಲದೆ “ಯು/ಎ’ ಪ್ರಮಾಣ ಪತ್ರವನ್ನು ಕೊಟ್ಟಿರುವ ಸೆನ್ಸಾರ್ ಮಂಡಳಿ ಬಿಡುಗಡೆಗೆ ಅಸ್ತು ಎಂದಿದೆ. ಈಗಾಗಲೇ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿರುವ “ಅವನೇ ಶ್ರೀಮನ್ನಾರಾಯಣ’ ಇದೇ ಡಿಸೆಂಬರ್ 27ಕ್ಕೆ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ.
ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ರಿಷಭ್ ಶೆಟ್ಟಿ, ಅಚ್ಯುತ ಕುಮಾರ್ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನವ ನಿರ್ದೇಶಕ ಸಚಿನ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಸೇರಿದಂತೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗಿದ್ದು, ಪುಷ್ಕರ್ ಮಲ್ಲಿಕಾರ್ಜುನ್ ಮತ್ತು ಹೆಚ್.ಕೆ ಪ್ರಕಾಶ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ.