ಸುದೀಪ್ ಹಂಚಿಕೊಂಡ ವಿಡಿಯೊಗೆ ಅಸಮಾಧಾನ
Team Udayavani, Mar 24, 2020, 12:12 PM IST
ಕೋವಿಡ್ 19 ವೈರಸ್ ಕುರಿತ ವಿಡಿಯೊವೊಂದನ್ನು ನಟ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರಿಂದ ಸಾಕಷ್ಟು ಜನ ಅದು ಅವೈಜ್ಞಾನಿಕ ಸಂಗತಿಯಾಗಿದ್ದು, ಹಂಚಿಕೊಂಡಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಅಷ್ಟಕ್ಕೂ ಸುದೀಪ್ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ “ಚಪ್ಪಾಳೆ ತಟ್ಟುವುದರಿಂದ ವೈರಸ್ ಸಾಯಿಸಬಹುದು. ಈ ಸಂಗತಿಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಹೆಚ್ಚು ಜನರು ಭಾಗವಹಿಸಿ, ಈ ಸಂದೇಶವನ್ನು ಹೆಚ್ಚು ಜನರಿಗೆ ತಲುಪಿಸಿ ಮೋದಿ ಅವರು ನಿಮ್ಮ ಮೂಲಕ ಎನರ್ಜಿ ಮೆಡಿಸಿನ್ ಅನ್ನು ಸೃಷ್ಟಿಸುತ್ತಿದ್ದಾರೆ. ಅವರು ನಿಮ್ಮನ್ನು ಎಲ್ಲಿಗೂ ಕೊಂಡೊಯ್ಯುತ್ತಿಲ್ಲ. ನಿಮ್ಮ ಬಾಲ್ಕನಿಗೆ ಮಾತ್ರ ಬರುವಂತೆ ಹೇಳುತ್ತಿದ್ದಾರೆ. ಹೀಗಾಗಿ ಐದು ನಿಮಿಷ ಚಪ್ಪಾಳೆ ತಟ್ಟಿ ಹೆಚ್ಚು ಸದ್ದು ಮಾಡಿ ‘ ಎಂದು ಮಹಿಳೆಯೊಬ್ಬರು ಹೇಳುವ ವಿಡಿಯೊವನ್ನು ಸುದೀಪ್ ಶೇರ್ ಮಾಡಿದ್ದರು.
ಜೊತೆಗೆ ಸುದೀಪ್ ಕೂಡ “ಇದನ್ನು ಕೇಳಿ, ದಯವಿಟ್ಟು ಭಾಗವಹಿಸಿ, ನಾವು ಏನನ್ನಾದರೂ ಕಳೆದುಕೊಳ್ಳುತ್ತೇವೆಯೇ? ಇಲ್ಲ, ನಾವು ಏನನ್ನಾದರೂ ಪಡೆದುಕೊಳ್ಳುತ್ತೇವೆಯೇ? ಆದರೆ ಕಡೇ ಪಕ್ಷ ಪ್ರಯತ್ನಿಸೋಣ. ಇಷ್ಟಕ್ಕೂ ಮಿಗಿಲಾಗಿ ಇದು ನಮ್ಮದೇ ಬದುಕಿಗಾಗಿ’ ಎಂದು ಸುದೀಪ್ ಹೇಳಿದ್ದರು. ಈ ಮಾತು ಕೇಳಿದ ಅನೇಕರು ಟೀಕಿಸಿದ್ದಾರೆ.
ನಟ “ಆ ದಿನಗಳು’ ಚೇತನ್ ಕೂಡ ಸುದೀಪ್ ಅವರ ವಿಡಿಯೋಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ಚಿತ್ರರಂಗದಲ್ಲಿನ ನಿಮ್ಮ ಕಾರ್ಯವನ್ನು ನಾನು ಗೌರವಿಸುತ್ತೇನೆ. ಇಬ್ಬರು ವೈದ್ಯರ ಮಗನಾಗಿ ನಾನು, ನಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಶ್ಲಾಘಿಸಬೇಕು ಎಂಬುದನ್ನು ಒಪ್ಪುತ್ತೇನೆ. ಆದರೆ, ಇಂತಹ ಎನರ್ಜಿ ಮೆಡಿಸಿನ್ ಸಿದ್ಧಾಂತಗಳನ್ನು ಹರಡುವುದು ತಪ್ಪು ಮಾಹಿತಿ ನೀಡುತ್ತದೆ. ಮತ್ತು ಅತೀಂದ್ರೀಯ ಶಕ್ತಿಗಳ ನಂಬಿಕೆಗೆ ಎಡೆಮಾಡಿಕೊಡುತ್ತದೆ. ಕೊರೊನಾ ವಿರುದ್ಧ ವೈಜ್ಞಾನಿಕವಾಗಿ ಹೋರಾಡೋಣ’ ಎಂದಿದ್ದಾರೆ. ಹಾಗೆಯೇ ಅನೇಕರು ಕೂಡ ಅಸಮಾಧಾನ ಹೊರಹಾಕಿದ್ದಾರೆ.