ವಕೀಲ್ ಸಾಬ್ ಥಿಯೇಟರ್ ಗೊಂದಲ : ದರ್ಶನ್ ಫ್ಯಾನ್ಸ್ ಗರಂ
Team Udayavani, Apr 7, 2021, 4:41 PM IST
ತೆಲುಗಿನ “ವಕೀಲ್ ಸಾಬ್’ ಚಿತ್ರ ಏ.09ರಂದು ತೆರೆಕಾಣುತ್ತಿದೆ. ಕರ್ನಾಟಕದಲ್ಲಿ ಈ ಚಿತ್ರದ ವಿತರಣೆಯನ್ನು “ಹೊಂಬಾಳೆ ಫಿಲಂಸ್’ ಪಡೆದಿದೆ. ವಿಚಾರ ಇದಲ್ಲ, ಚಿತ್ರಮಂದಿರದ ಹೆಸರಿನಲ್ಲಾದ ಸಣ್ಣ ಗೊಂದಲ ದರ್ಶನ್ ಅಭಿಮಾನಿಗಳನ್ನು ಕೆರಳುವಂತೆ ಮಾಡಿತ್ತು.
ಆರಂಭದಲ್ಲಿ “ವಕೀಲ್ ಸಾಬ್’ ಚಿತ್ರ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆ ಯಾಗುತ್ತದೆ ಎಂಬ ಸುದ್ದಿ ಕೇಳಿದ ದರ್ಶನ್ ಅಭಿಮಾನಿಗಳು ಗರಂ ಆಗಿದ್ದರು ಮತ್ತು ಕನ್ನಡದ “ಹೊಂಬಾಳೆ ಫಿಲಂಸ್’ನ ನಡೆ ಸರಿಯಲ್ಲ ಎಂದು ಹೇಳಿ, “ಹೊಂಬಾಳೆ ಫಿಲಂಸ್’ನ ಕಾರ್ತಿಕ್ ಗೌಡ ಅವರಿಗೆ ಟ್ಯಾಗ್ಮಾಡಿ ತಮ್ಮ ಅನಿಸಿಕೆ, ಸಿಟ್ಟು, ಬೇಸರವನ್ನು ಹಂಚಿಕೊಳ್ಳಲಾರಂಭಿಸಿದ್ದರು. ಅದರಲ್ಲೂ ಪಕ್ಕಾ ಕನ್ನಡ ಸೆಂಟರ್ ಎನಿಸಿಕೊಂಡಿರುವ ಸಂತೋಷ್ನಲ್ಲಿ ತೆಲುಗುಸಿನಿಮಾ ಬಿಡುಗಡೆ ಮಾಡೋದು ಸರಿಯಲ್ಲ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕೋವಿಡ್ ಲಸಿಕೆ ಪಡೆದ ನಟ ಪುನೀತ್ ರಾಜಕುಮಾರ್
ಅಭಿಮಾನಿಗಳ ವಾದ-ಪ್ರತಿವಾದ ಜೋರಾಗುತ್ತಿದ್ದಂತೆ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ ಕಾರ್ತಿಕ್ ಗೌಡ, “ವಕೀಲ್ ಸಾಬ್ ಚಿತ್ರ ಭೂಮಿಕಾ ಚಿತ್ರಮಂದಿರದಲ್ಲಿ ಪ್ರದರ್ಶನವಾಗಲಿದ್ದು, ಸಂತೋಷ್ ಚಿತ್ರಮಂದಿರದಲ್ಲಿ “ರಾಬರ್ಟ್’ ಮುಂದುವರೆಯಲಿದೆ’ ಎಂದು ಟ್ವೀಟ್ ಮಾಡುವ ಮೂಲಕ ಗೊಂದಲಕ್ಕೆ ತೆರೆ ಎಳೆದರು. ಇತ್ತ “ರಾಬರ್ಟ್’ ನಿರ್ಮಾಪಕ ಉಮಾಪತಿಕೂಡಾ ಟ್ವೀಟ್ ಮೂಲಕ ಸಂತೋಷ್ ಚಿತ್ರಮಂದಿರದಲ್ಲೇ “ರಾಬರ್ಟ್’ ಇನ್ನೊಂದಷ್ಟು ದಿನ ಪ್ರದರ್ಶನ ಕಾಣಲಿದೆ ಎಂದು ಹೇಳಿದರು.