ಕೃಷ್ಣಾ ನದಿಗೆ ಬಿದ್ದ ಬೊಲೆರೋ ; ಏಳು ಜನರ ರಕ್ಷಣೆ
Team Udayavani, Aug 16, 2019, 7:12 PM IST
ಜಮಖಂಡಿ: ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿಯನ್ನು ನೋಡಿಕೊಂಡು ವಾಹನ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ವಾಹನವೊಂದು ನದಿಗೆ ಬಿದ್ದ ಘಟನೆ ರಬಕವಿ – ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯದ ಅಥಣಿ ರಸ್ತೆಯಲ್ಲಿ ನಡೆದಿದೆ.
ಘಟನೆ ನಡೆದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಜಮಖಂಡಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಜಿ.ಮಾಳೆದ ಅವರ ವಾಹನ ಚಾಲಕ ವಿನೋದ ರೆಡ್ಡಿ ಅವರು ತನ್ನ ಜೀವದ ಹಂಗು ತೊರೆದು ಮುಳುಗುತ್ತಿದ್ದ ವಾಹನದಿಂದ ಜನರನ್ನು ರಕ್ಷಿಸುವಲ್ಲಿ ನೆರವಾಗಿದ್ದಾರೆ.
ವಾಹನದಲ್ಲಿ ಚಾಲಕ ಸಹಿತ ಏಳು ಜನ ಸಂಚರಿಸುತ್ತಿದ್ದರು. ಅವರೆಲ್ಲ ಅಥಣಿ ತಾಲೂಕಿನವರಾಗಿದ್ದಾರೆ. ಜಮಖಂಡಿಯಲ್ಲಿರುವ ನೆಂಟರ ಮನೆಗೆ ಬಂದು, ಊರಿಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ವಾಹನದಲ್ಲಿದ್ದ ಸುರೇಖಾ ಮಾರುತಿ ಪಾಟೀಲ ಎಂಬ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಜಮಖಂಡಿ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಥಣಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.