Rabakavi-Banahatti: ಯುವತಿಗೆ ಕಿರುಕುಳ; ಮೂವರ ಬಂಧನ
Team Udayavani, Mar 8, 2024, 9:26 AM IST
ರಬಕವಿ-ಬನಹಟ್ಟಿ: ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮೂವರನ್ನು ಬಂಧಿಸಿದ ಘಟನೆ ನಡೆದಿದೆ.
ಅನ್ವರ ಮಕಾನದಾರ, ಅಯಾನ್ ಪಾಟೀಲ, ಜಾವಿದ್ ನದಾಫ್ ಬಂಧಿತರು.
ಘಟನೆಯ ವಿವರ:
ರಬಕವಿಯ ಬಸ್ ನಿಲ್ದಾಣದಲ್ಲಿ ತೇರದಾಳದ ದಾನಿಗೊಂಡ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವ್ಯಾಸಾಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿನಿಯರಲ್ಲಿ ಓರ್ವ 20 ವರ್ಷದ ಯುವತಿ ಮಹಾಲಿಂಗಪೂರಕ್ಕೆ ತೆರಳುವುದು ನಿತ್ಯವಾಗಿತ್ತು.
3-4 ದಿನಗಳಿಂದ ಆರೋಪಿತರಾದ ಅನ್ವರ ಮಕಾನದಾರ, ಅಯಾನ್ ಪಾಟೀಲ, ಜಾವಿದ್ ನದಾಫ್ ಎಂಬವರು ಒಂದೇ ಬೈಕ್ನಲ್ಲಿ ಬರುತ್ತ ಇವರನ್ನು ಬೆನ್ನತ್ತಿ ನೋಡುವುದು, ಚುಡಾಯಿಸುವುದು ಮಾಡುತ್ತಿದ್ದರು.
ಕಳೆದ ಬುಧವಾರ ಸಂಜೆ 6.15ರ ಸುಮಾರಿಗೆ ಕಾಲೇಜು ಮುಗಿಸಿಕೊಂಡು ಮಹಾಲಿಂಗಪೂರಕ್ಕೆ ತೆರಳುವ ಸಂದರ್ಭ ಮತ್ತೇ ಬೈಕ್ವೊಂದರಲ್ಲಿ ಬಂದು ಮೊಬೈಲ್ನಲ್ಲಿ ಫೋಟೊ ತೆಗೆಯುತ್ತಿದ್ದರು. ನಂಬರ್ ಕೊಡುವಂತೆ ಒತ್ತಾಯಿಸಿದರು.
ಆಗ ಮೊಬೈಲ್ ನಂಬರ್ ನೀಡಲು ನಿರಾಕರಿಸಿದಾಗ ಆಕೆಯೊಂದಿಗೆ ಜಗಳವಾಡಿ ಕಪಾಳಕ್ಕೆ ಹೊಡೆದು ಭಾರಿ ಒಳಪೆಟ್ಟುಪಡಿಸಿದ್ದಲ್ಲದೆ ಜಗಳ ಬಿಡಿಸಿಲು ಹೋದ ಇತರ ವಿದ್ಯಾರ್ಥಿಗಳಿಗೂ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆಂದು ದೂರುದಾರರು ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರ ಬಂಧನ: ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ತಾಲೂಕಿನಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ.
ಹೈಅಲರ್ಟ್: ಇತ್ತ ಖಾಕಿ ಪಡೆ ರಬಕವಿ-ಬನಹಟ್ಟಿ ನಗರಾದ್ಯಂತ ಕಣ್ಗಾವಲು ಇಟ್ಟಿದ್ದು, ಅಲ್ಲಲ್ಲಿ ಇಂಥ ಪ್ರಕರಣಗಳಿಗೆ ಸಂಬಂಧಿಸಿದಂತೆ ಯುವಕರನ್ನು ತರಾಟೆಗೆ ತೆಗೆದುಕೊಳ್ಳುವ ದೃಶ್ಯ ಕಂಡು ಬರುತ್ತಿದೆ.
ಸಂಜೆಯಾಗುತ್ತಿದ್ದಂತೆ ಅಲ್ಲಲ್ಲಿ ಪುಂಡರು ಕೂರುತ್ತಿರುವುದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಪೊಲೀಸ್ ರುಚಿ ತೋರಿಸುವಲ್ಲಿ ನಿರತರಾಗಿದ್ದಾರೆ.
ಸಂಘಟನೆಗಳು ಸಜ್ಜು: ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ವಿವಿಧ ಮುಖಂಡರು ಆಂತರಿಕ ಸಭೆ ನಡೆಸುವಲ್ಲಿ ಕಾರಣವಾಗಿದ್ದು, ಘಟನೆ ಕುರಿತು ಆರೋಪಿತರಿಗೆ ಯಾವ ಶಿಕ್ಷೆಗೆ ಗುರಿಪಡಿಸಬೇಕೆಂಬ ಹೋರಾಟದ ಯೋಚನೆಯಲ್ಲಿದ್ದಾರೆ.