ನಗರದಲ್ಲಿ ಡೆಂಘೀ ಪ್ರಕರಣ ನಿರಂತರ ಹೆಚ್ಚಳ
Team Udayavani, Jul 25, 2019, 3:09 AM IST
ಬೆಂಗಳೂರು: ರಾಜಧಾನಿಯಲ್ಲಿ ಡೆಂಘೀ ಸೋಂಕು ನಿರಂತರವಾಗಿ ಹೆಚ್ಚಾಗುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ರೋಗ ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಾರ್ಡ್ಗಳಲ್ಲೂ ಆರೋಗ್ಯ ನಿರೀಕ್ಷಕರಿಗೆ ನಿತ್ಯ ಕಡ್ಡಾಯವಾಗಿ ತಮ್ಮ ವ್ಯಾಪ್ತಿಯಲ್ಲಿ ಡೆಂಘೀ ಹತೋಟಿ ಕ್ರಮ ಕೈಗೊಂಡು ಮಧ್ಯಾಹ್ನದೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಜೂನ್ ಆರಂಭದಿಂದಲ್ಲೂ ನಗರದಲ್ಲಿ ಡೆಂಘೀ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ವರ್ಷಾರಂಭದಿಂದ ಇಲ್ಲಿಯವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 3,393 ಮಂದಿಗೆ ಸೋಂಕು ತಗುಲಿದೆ. ವಾರದಿಂದೀಚೆಗೆ 1,136 ಮಂದಿಯಲ್ಲಿ ಸೋಂಕು ದೃಢಪಡುವ ಮೂಲಕ ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ಸೋಂಕನ್ನು ಹತೋಟಿಗೆ ತರಲು ಬಿಬಿಎಂಪಿ ಆರೋಗ್ಯ ಇಲಾಖೆ ನಿರಂತರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವಲಯವಾರು ಸೋಂಕಿತರ ವರದಿ ಪಡೆದು ಸೂಕ್ಷ್ಮ ಪ್ರದೇಶಗಳನ್ನು ಗುರುತು ಮಾಡಿರುವ ಬಿಬಿಎಂಪಿ ಪ್ರತಿ ವಲಯದಲ್ಲಿ ಡೆಂಘೀ ಹೆಚ್ಚು ಕಾಣಿಸಿಕೊಂಡಿರುವ ಮೊದಲ 10 ವಾರ್ಡ್ಗಳನ್ನು ಸೂಕ್ಷ್ಮ ಪ್ರದೇಶಗಳನ್ನಾಗಿ ಘೋಷಿಸಿ ಕಾರ್ಯಚರಣೆ ನಡೆಸುತ್ತಿದೆ. ಈ ಪೈಕಿ ಸಿ.ವಿ.ರಾಮನ್ನಗರ, ಶಾಂತಿನಗರ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳು ಬರುವ ಬಿಬಿಎಂಪಿ ಪೂರ್ವ ವಲಯದಲ್ಲಿ ಹೆಚ್ಚು ಡೆಂಘೀ ಸೋಂಕು ದೃಢ ಪಟ್ಟಿವೆ. ಜನವರಿಯಿಂದ ಈವರೆಗೂ 1126 ಪ್ರಕರಣ ದೃಢಪಟ್ಟಿವೆ.
ಇತ್ತೀಚೆಗೆ ಪಶ್ಚಿಮ ವಲಯದ ರಾಜಾಜಿನಗರ ವಾರ್ಡ್ ಒಂದರಲ್ಲಿಯೇ ಒಂದು ವಾರಕ್ಕೆ 100ಕ್ಕೂ ಹೆಚ್ಚು ಡೆಂಘೀ ಪ್ರಕರಣ ದೃಢಪಟ್ಟ ಹಿನ್ನೆಲೆ ಬಿಬಿಎಂಪಿಯ 600ಕ್ಕೂ ಹೆಚ್ಚು ಸಿಬ್ಬಂದಿ ಸಂಪೂರ್ಣ ವಾರ್ಡ್ ಸಮೀಕ್ಷೆ ಮಾಡಿ ಧೂಮೀಕರಣ, ಟೆಮಿಫಾಸ್ ರಾಸಾಯನಿಕ ಸಿಂಪಡಣೆ ಮಾಡಿ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ನಿತ್ಯ ವರದಿ: ಬಿಬಿಎಂಪಿ ಎಲ್ಲಾ ವಾರ್ಡ್ಗಳಲ್ಲಿ ಸೋಮವಾರದಿಂದ ಆರೋಗ್ಯ ನಿರೀಕ್ಷಕರಿಗೆ ಸಂಪರ್ಕ ಕಾರ್ಯಕರ್ತರು ಹಾಗೂ ಗ್ಯಾಂಗ್ಮಾನ್ ಜತೆಗೆ ನಿತ್ಯ ಬೆಳಗ್ಗೆ 8 ಗಂಟೆಯಿಂದ 12 ಗಂಟೆವರೆಗೂ ವಾರ್ಡ್ ವ್ಯಾಪ್ತಿಯಲ್ಲಿ ಸಮೀಕ್ಷೆ, ಧೂಮೀಕರಣ, ರಾಸಾಯನಿಕ ನಿಂಪಡಣೆ ಜತೆಗೆ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಮಧ್ಯಾಹ್ನ 1 ಗಂಟೆಗೆ ಕೇಂದ್ರ ಕಚೇರಿಗೆ ವರದಿ ನೀಡಲು ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಸಡ್ಡೆ ಮಾಡುವ ಸಂಪರ್ಕ ಕಾರ್ಯಕರ್ತರನ್ನು ವಜಾ ಮಾಡುವುದಾಗಿ, ಜತೆಗೆ ವಾರ್ಡ್ಗಳಲ್ಲಿ ಜಾಗೃತಿಗೆ ಮುಂದಾದವರ ವಿರುದ್ಧವೂ ಕ್ರಮಕ್ಕೆ ಬಿಬಿಎಂಪಿ ಸೂಚಿಸಿದೆ.
ಡೆಂಘೀಗೆ ಮೂವರು ಬಲಿ: ಬಿಬಿಎಂಪಿ ಹೊರತು ಪಡೆಸಿ ರಾಜ್ಯದಲ್ಲಿ ವರ್ಷದಿಂದೀಚೆಗೆ ಡೆಂಘೀ ಪ್ರಕರಣಗಳು 2017 ವರದಿಯಾಗಿವೆ. ಚಿತ್ರದುರ್ಗ, ರಾಮನಗರ, ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಈವರೆಗೂ ದಕ್ಷಿಣ ಕನ್ನಡದಲ್ಲಿ 387, ಶಿವಮೊಗ್ಗ 223, ಹಾವೇರಿ 143, ಉತ್ತರ ಕನ್ನಡ 134, ಹಾಸನ 114, ಚಿಕ್ಕಮಗಳೂರು 108 ಮಂದಿಯಲ್ಲಿ ಡೆಂಘೀ ದೃಡಪಟ್ಟಿದೆ.
ಡೆಂಘೀ ಜ್ವರದ ಲಕ್ಷಣಗಳು: ಜ್ವರ, ತಲೆನೋವು, ಶೀತ, ಗಂಟಲು ನೋವು, ವಾಂತಿ, ಹೊಟ್ಟೆನೋವು, ನಿಶಕ್ತಿ, ಮೈ ಕೈ ನೋವು, ಅತಿಸಾರ ಭೇದಿ, ಮೈಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆಗಳು ಏಳುವುದು. ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿಬೇಕು. ತಿಳಿ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟೆ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಘೀ ಬರುತ್ತದೆ.
ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಶೀಘ್ರ ರೋಗಕ್ಕೆ ತುತ್ತಾಗುತ್ತಾರೆ ಮೂರು ಹಂತಗಳಲ್ಲಿ ಈ ಡೆಂಘೀ ಕಾಣಿಸಿಕೊಳ್ಳಲಿದ್ದು, ಸಾಮಾನ್ಯ ಜ್ವರ, ಡೆಂಘೀ ಹೆಮೊರೈಜಿನ್ ಅಂದರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ ಮತ್ತು ಡೆಂಘೀ ಶಾಕ್ ಸಿಂಡ್ರೋಮ್ ಅಂದರೆ ದೇಹದಲ್ಲಿ ರಕ್ತಸ್ರಾವವಾಗಿ ರೋಗ ಗಂಭೀರ ಹಂತ ಪಡೆಯುವುದು. ಈ ವೇಳೆ ರೋಗಿಗೆ ಬಿಳಿರಕ್ತ ಕಣಗಳು ಕಡಿಮೆಯಾಗುತ್ತವೆ ಎಂದು ವೈದ್ಯರು ಮಾಹಿತಿ ನೀಡಿದರು.
ಡೆಂಘೀ ತಡೆಗಟ್ಟುವ ಕ್ರಮಗಳು
-ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಪರದೆ ಅಳವಡಿಸುವುದು. ಸೊಳ್ಳೆ ನಾಶಕ ಔಷಧಗಳನ್ನು ಬಳಸುವುದು. ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸುವುದು.
– ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು.
– ಸೊಳ್ಳೆ ಸಂತಾನೋತ್ಪತ್ತಿ ಸ್ಥಳವಾದ ನೀರು ಶೇಖರಣಾ ತೊಟ್ಟಿ, ಟ್ಯಾಂಕ್ಗಳಲ್ಲಿ ಅನಗತ್ಯ ನೀರು ಸಂಗ್ರಹಿಸದಿರುವುದು.
-ಮನೆಯಲ್ಲಿ ಬಳಸುವ ನೀರನ್ನು 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸುವುದು.
-ಟಯರ್, ತೆಂಗಿನ ಚಿಪ್ಪಿನಲ್ಲಿ, ಮನೆ ಸುತ್ತಮುತ್ತ ಸ್ವಚ್ಛವಾಗಿಡುವುದು, ಆಸುಪಾಸಿನಲ್ಲಿ ನೀರು ಸಂಗ್ರಹವಾಗದಂತೆ ಜಾಗ್ರತೆ ವಹಿಸುವುದು.
-ಜ್ವರ ಕಾಣಿಸಿಕೊಂಡ ನಿರ್ಲಕ್ಷಿಸದೆ ರಕ್ತ ಪರೀಕ್ಷೆ ಮಾಡಿಸುವುದು. ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು.
ವಾರ್ಡ್ಗಳಲ್ಲಿ ಡೆಂಘೀ ಪ್ರಕರಣ
ವಾರ್ಡ್ ಡೆಂಘೀ ಪ್ರಕರಣ (2019 ಜನವರಿಯಿಂದ ಜು.16ವರೆಗೆ)
ಹೊಯ್ಸಳನಗರ – 195
ಬೆಳಂದೂರು – 133
ನ್ಯೂ ತಿಪ್ಪಸಂದ್ರ – 131
ಜೀವನ್ಭೀಮನಗರ – 119
ರಾಜಾಜಿನಗರ – 111
ಕೋರಮಂಗಲ -117
ಬೆನ್ನಿಗಾನಹಳ್ಳಿ -103
ಸಿ.ವಿ.ರಾಮನ್ನಗರ – 102
ಶಿವಾಜಿನಗರ – 91
ಡೆಂಘೀ ಸೋಂಕು ಹೆಚ್ಚಿರುವ ವಾರ್ಡ್ಗಳನ್ನು ಗುರುತಿಸಿ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದೆ. ನಿತ್ಯ ಕಡ್ಡಾಯವಾಗಿ ಆರೋಗ್ಯ ನಿರೀಕ್ಷಕರು, ಸಂಪರ್ಕ ಸಿಬ್ಬಂದಿಗೆ ತನ್ನ ವಾರ್ಡ್ ವ್ಯಾಪ್ತಿಯಲ್ಲಿ ಹತೋಟಿ ಕ್ರಮ, ಜಾಗೃತಿಗೆ ಮುಂದಾಗುವಂತೆ ಸೂಚಿಸಲಾಗಿದೆ. ನಿರ್ಲಕ್ಷ್ಯ ಮಾಡುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
-ಡಾ.ವಿಜಯೇಂದ್ರ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ