ನಮಗೆ ಬಹುಮತ ಖಚಿತ: ಈಶ್ವರಪ್ಪ
Team Udayavani, May 19, 2018, 7:05 AM IST
ಶಿವಮೊಗ್ಗ: ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕೇ ಸಿಗುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ
ಮುಂದುವರಿಯಲಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚುನಾವಣೆಯಲ್ಲಿ ಕಾಂಗ್ರೆಸ್ 78 ಸ್ಥಾನ ಪಡೆದಿದ್ದರೂ, ಕೇವಲ 38 ಸ್ಥಾನ ಪಡೆದಿರುವ ಜೆಡಿಎಸ್ಗೆ ಅಧಿಕಾರ ನೀಡಲು ಮುಂದಾಗಿದೆ. ಇದು ಹಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಅಪವಿತ್ರ ಮೈತ್ರಿಗೆ ಕಾಂಗ್ರೆಸ್ನ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಜೆಡಿಎಸ್ ಜತೆ ಅಪವಿತ್ರ ಮೈತ್ರಿಗೆ ಕಾಂಗ್ರೆಸ್ ಶಾಸಕರಲ್ಲೇ ವಿರೋಧವಿದೆ.
ರಾಜ್ಯದ ಜನತೆ ಬಿಜೆಪಿಗೆ ಅತ್ಯಧಿಕ ಸ್ಥಾನ ನೀಡಿದ್ದಾರೆ. 104 ಸ್ಥಾನಗಳಲ್ಲಿ ಗೆಲುವು ಪಡೆದಿರುವ ಬಿಜೆಪಿ ಸರ್ಕಾರ ರಚಿಸಿ ಆಡಳಿತ ನಡೆಸಲಿದೆ ಎಂದು ಹೇಳಿದರು. ರಾಜ್ಯ ರಾಜಕಾರಣದಲ್ಲಿ ಈ ರೀತಿಯ ಪರಿಸ್ಥಿತಿ ಹಿಂದೆ ಎಂದೂ
ಬಂದಿರಲಿಲ್ಲ. ಅತ್ಯಧಿಕ ಸ್ಥಾನ ಪಡೆದ ಪಕ್ಷಕ್ಕೆ ವಿರುದ್ಧವಾಗಿ ಅತಿ ಕಡಿಮೆ ಸ್ಥಾನ ಪಡೆದಿರುವ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಕಾಂಗ್ರೆಸ್ ಬೆಂಬಲ ನೀಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಎಂದು ಹೇಳಿದರು.