ನಿತ್ಯ ಆತಂಕದಲ್ಲೇ ಹೆದ್ದಾರಿ ದಾಟುವ ವಿದ್ಯಾರ್ಥಿಗಳು
Team Udayavani, Nov 29, 2019, 2:16 PM IST
ನೆಲಮಂಗಲ: ತಾಲೂಕಿನ ಶತಮಾನ ಕಂಡ ಟಿ.ಬೇಗೂರಿನ ಸರ್ಕಾರಿ ಶಾಲೆಗೆ ವಿದೇಶಿ ಪ್ರಜೆಗಳು ದೇಣಿಗೆ, ಅಗತ್ಯ ಪೀಠೊಪಕರಣಗಳು,ಪರಿಕರಗಳನ್ನುನೀಡುವುದರ ಮೂಲಕ ಶಾಲೆಗೆ ಉಳಿವಿಗೆ ಅನುಕೂಲ ಮಾಡಿಕೊಡುತ್ತಿದ್ದರೆ ಎನ್.ಹೆಚ್ 4 ಪಂಚಾಯಿತಿ ಅಧಿಕಾರಿಗಳು ಶಾಲೆಯ ಮಕ್ಕಳಲ್ಲಿ ಆತಂಕ ಸೃಷ್ಟಿಸಿದ್ದಾರೆ.
106 ವರ್ಷಗಳ ಇತಿಹಾಸ: 106 ವರ್ಷಗಳು ಪೂರೈಸಿರುವ ಟಿ.ಬೇಗೂರಿನ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 132 ವಿದ್ಯಾರ್ಥಿಗಳ ಜೊತೆ, 5 ಜನ ಶಿಕ್ಷಕರಿದ್ದು, ಉತ್ತಮ ಮೈದಾನ, 14 ಕೊಠಡಿಗಳು, ಕಂಪ್ಯೂಟರ್ ಲ್ಯಾಬ್,3069 ಪುಸ್ತ ಕವಿರುವ ಗ್ರಂಥಾಲಯ, ಹಾಗೂ ವಿದೇಶಿಗರು ,ಕೆಲವು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ
ಉತ್ತಮ ಪೀಠೊಪಕರಣಗಳನ್ನು ಅಳವಡಿಸಿಕೊಂಡು ಹೈಟೆಕ್ ಶಾಲೆಯಾಗಿ ಬದಲಾಯಿಸಿದ್ದರೂ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಹೆದ್ದಾರಿ ಮಧ್ಯೆ ಶಾಲೆ: ಬೆಂಗಳೂರು- ತುಮಕೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ಸಂಪರ್ಕ ಕಲ್ಪಿಸುವ ಎನ್.ಹೆಚ್.4ನ ಹೆದ್ದಾರಿಯು 4 ಪಥಗಳನ್ನು ಹೊಂದಿದ್ದು, ಟಿ.ಬೇಗೂರಿನಲ್ಲಿ 500 ಮೀ ಗಳಷ್ಟು ದೂರ ಎರಡೆರಡು ಪಥಗಳಾಗಿ ವಿಗಂಡಣೆ ಮಾಡಲಾಗಿದೆ. ಸರ್ಕಾರಿ ಶಾಲೆ ಹೆದ್ದಾರಿಯ ಮಧ್ಯೆ ಭಾಗ ಉಳಿದ ಕಾರಣ, ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುವಾಗ ಶಾಲೆಯ ವಿದ್ಯಾರ್ಥಿಗಳು ಅಂಗನವಾಡಿ ಮಕ್ಕಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಪೋಷಕರಿಗೆ ಹೆದ್ದಾರಿ ದಾಟಿ ಬರುವ ಅನಿವಾರ್ಯತೆ ಎದುರಾಗಿದೆ.
ಅಪಾಯದ ಜಾಗ: ಏಳು ಗ್ರಾಮಗಳಿಂದ ಬರುವ ಮಕ್ಕಳು ಹೆದ್ದಾರಿ ದಾಟುವ ಮೂಲಕವೇ ಶಾಲೆಗೆ ಬರಬೇಕಾಗಿದೆ. ಲಕ್ಷಾಂತರ ವಾಹನಗಳು ವೇಗವಾಗಿಚಲಿಸುವ ಹೆದ್ದಾರಿಯನ್ನು ದಾಟಲು ಗಂಟೆಗಟ್ಟಲೆ ಸಮಯ ವ್ಯರ್ಥದ ಜೊತೆಗೆ ಸ್ವಲ್ಪ ಯಾಮಾರಿದರೂ, ವಾಹನ ಚಕ್ರಕ್ಕೆ ಸಿಲುಕುವ ಭಯ.ಇನ್ನೂ ಶಿಕ್ಷಕರು ಮಕ್ಕಳನ್ನು ಹೆದ್ದಾರಿ ದಾಟಿಸಲು ಪ್ರತಿನಿತ್ಯ ಹರಸಾಹಸ ಪಡುವಂತಾಗಿದೆ.
ಅಂಡರ್ಪಾಸ್ಗೆ ಬೀಗ: ಶಾಲೆಯ ಸಮೀಪದ ಅಂ ಡರ್ಪಾಸ್ಗೆ ಎನ್.ಹೆಚ್4ರ ಹೆದ್ದಾರಿ ಉಸ್ತುವಾರಿಅಧಿಕಾರಿಗಳು ಬೀಗವಾಕಿದ್ದು, ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ, 15 ರಿಂದ 20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಂಡರ್ ಪಾಸ್ ವಿದ್ಯಾರ್ಥಿಗಳಿಗೆ, ಗ್ರಾಮದ ಜನರಿಗೆ ಅನುಕೂಲವಾಗದೇ ಹಾಳು ಕೊಂಪೆಯಗಿದೆ.ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಪರಿಸ್ಥಿತಿ ಇದ್ದರೂ, ಅಧಿಕಾರಿಗಳು ಅಂಡರ್ಪಾಸ್ ಸಂಚಾರ ಮುಕ್ತ ಮಾಡದೇ ಇರುವುದು ದುರಂತ.
ಚರಂಡಿಯ ವಾಸನೆ : ಶಾಲೆಯ ಪ್ರವೇಶದಲ್ಲಿರುವ ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳು ಹೆಚ್ಚಾಗಿವೆ, ಗಲೀಜು ನೀರಿನಿಂದ ಶಾಲೆಯ ಮಕ್ಕಳು ಮೂಗುಮುಚ್ಚಿ ಶಾಲೆಗೆ ಹೋಗಬೇಕಾಗಿದೆ, ಇನ್ನೂ ಮಳೆ ಬಂದರೆ ಶಾಲೆಯ ಪ್ರವೇಶ ದ್ವಾರ, ನೀರಿನಿಂದ ಬಂದ್ ಆಗಲಿದೆ.ಇದನ್ನು ಬಗೆಹರಿಸಬೇಕಾಗದ ಪಂಚಾಯಿತಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಕಣ್ಣುಮುಚ್ಚಿ ಕುಳಿತಿದ್ದಾರೆ, ಚರಂಡಿಯ ಮೇಲ್ಭಾಗ ಮುಚ್ಚಿ ವಾಸನೆ ಹಾಗೂ ಸೊಳ್ಳೆಗಳಿಂದ ದೂರಮಾಡಿ ಎಂದು ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರು ಯಾವುದೇ ಪ್ರಯೋಜವಾಗಿಲ್ಲ.
ಸಮಸ್ಯೆ ತಿಳಿದಿದ್ದರು ಮೌನ: ಶಾಲೆಯ ವಿದ್ಯಾರ್ಥಿಗಳು ಪ್ರತಿದಿನ ಅನುಭವಿಸುತ್ತಿರುವ ಸಮಸ್ಯೆ ತಿಳಿದಿರುವ ಪಂಚಾಯಿತಿ ಅಧಿಕಾರಿಗಳು, ಬಿಇಓ, ತಹಸೀಲ್ದಾರ್, ಟೋಲ್ ಅಧಿಕಾರಿಗಳು ಜಾಣ ಕುರುಡರಾಗಿದ್ದಾರೆ.
ಪ್ರಭಾವಿಗಳ ಪ್ರಭಾವ ಯಾವ ಕಡೆ ?:ಸಮಾಜದ ಅನೇಕ ವಿಚಾರಗಳಿಗೆ ಮೂಗುತೂರಿಸುವಪ್ರಭಾವಿಗಳು ಶಾಲೆಯ ಮಕ್ಕಳ ಪರಿಸ್ಥಿತಿಯನ್ನು ಯಾಕೆ ಅರ್ಥಮಾಡಿಕೊಂಡಿಲ್ಲ.ಇನ್ನೂ ಇದೇ ಶಾಲೆಯಲ್ಲಿ ಓದಿದ ಪ್ರಭಾವಿಗಳಾದ ಬೂದಿಹಾಳ್ ಕರವರದಯ್ಯ, ಟಿ.ಬೇಗೂರು ಗ್ರಾ.ಪಂ.ಅಧ್ಯಕ್ಷರ ಪತಿ ಕರಿವರದಯ್ಯ ಸೇರಿದಂತೆ ಅನೇಕ ಸದಸ್ಯರು, ಮುಖಂಡರು ಇದೇ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ. ಅವರ ಪ್ರಭಾವ ಬಳಸಿಯಾದರೂ ಸಮಸ್ಯೆ ಬಗೆಹರಿಸಿ,ಶಾಲಾ ಮಕ್ಕಳ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎನ್ನುವುದು ವಿದ್ಯಾರ್ಥಿಗಳ ಪೋಷಕರ ಒತ್ತಾಯವಾಗಿದೆ.
-ಕೊಟ್ರೇಶ್ ಆರ್