ಬಕ್ರೀದ್ ಸರಳ ಆಚರಣೆಗೆ ಮನವಿ
Team Udayavani, Jul 29, 2020, 10:24 AM IST
ಹೊಸಕೋಟೆ: ಬಕ್ರೀದ್ ಹಬ್ಬವನ್ನು ನಗರದಲ್ಲಿ ಸರಳವಾಗಿ ಆಚರಿಸಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ವಿಧಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸಬೇಕು ಎಂದು ಪೊಲೀಸ್ ಉಪ ಅಧೀಕ್ಷಕ ಎನ್.ಬಿ.ಸಕ್ರಿ ಮನವಿ ಮಾಡಿದರು.
ನಗರದ ಠಾಣೆಯಲ್ಲಿ ಏರ್ಪಡಿಸಿದ್ದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸಂಪ್ರದಾಯ ಕಾಪಾಡುವ ಉದ್ದೇಶದಿಂದ ಬದಲಾವಣೆ ಅನಿವಾರ್ಯ. ಬಕ್ರೀದ್ ಹಬ್ಬವನ್ನು ಸರಳವಾಗಿ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿಕೊಳ್ಳಬಹುದಾಗಿದ್ದು ಸಾಮೂಹಿಕವಾಗಿ ದಾನ ವಿತರಿಸುವ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗದಂತೆ ಸೂಕ್ತ ಎಚ್ಚರ ವಹಿಸಬೇಕು ಎಂದರು.
ನಗರದ ವ್ಯಾಪ್ತಿಗೆ ಒಳಪಡುವ 21ರಲ್ಲಿ ಸೀಲ್ ಡೌನ್ ಪ್ರದೇಶದ 4 ಮಸೀದಿ ಹೊರತುಪಡಿಸಿ ಉಳಿದೆಡೆ ಕನಿಷ್ಠ ಸಂಖ್ಯೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಸೀದಿಗಳಿಗೆ 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟವರ ಪ್ರವೇಶ ನಿರ್ಬಂಧಿಸಲಾಗಿದ್ದು ಮುಖಂಡರು ಸಹಕರಿಸಬೇಕು ಎಂದು ತಿಳಿಸಿದರು. ಸಬ್ಇನ್ಸ್ಪೆಕ್ಟರ್ ರಾಜು, ನಗರಸಭೆ ಸದಸ್ಯ ಗುಲ್ಜಾರ್ ಅಹಮದ್, ಮಾಜಿ ಸದಸ್ಯ ಅಬ್ದುಲ್ಲಾ ಸಾಬ್ ಮತ್ತಿತರರಿದ್ದರು.