ಬೆಳಗಾವಿಯಲ್ಲಿ ‘ಮಹಾ’ ಕಚೇರಿ ತಿರುಕನ ಕನಸು : ಸಾಹಿತಿ ಪ್ರೊ. ಸುಬ್ರಾವ ಎಂಟೆತ್ತಿನವರ
ಮರಾಠಿಗರ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಕಚೇರಿ ತೆರೆಯುವುದಾಗಿ ಮಹಾರಾಷ್ಟ್ರ ಸರ್ಕಾರದ ಹೇಳಿಕೆ
Team Udayavani, Apr 20, 2021, 7:51 PM IST
ಚಿಕ್ಕೋಡಿ: ಮರಾಠಿ ಭಾಷಿಕರ ಅಭಿವೃದ್ಧಿಗಾಗಿ ಮಹಾರಾಷ್ಟ್ರ ಸರಕಾರ ಬೆಳಗಾವಿಯಲ್ಲಿ ಒಂದು ಕಚೇರಿ ತೆರೆಯುವ ಪ್ರಸ್ತಾಪ ಮಾಡುತ್ತಿರುವುದು ತಿರುಕುನ ಕನಸಾಗಿದೆ ಎಂದು ಬಂಡಾಯ ಸಾಹಿತಿ ಪ್ರೊ. ಸುಬ್ರಾವ ಎಂಟೆತ್ತಿನವರ ಮಹಾರಾಷ್ಟ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ಎಂಬ ಮಹಾಮಾರಿ ಪುಣೆ, ಮುಂಬೈ ಸೇರಿದಂತೆ ಇಡೀ ಮಹಾರಾಷ್ಟ್ರ ರಾಜ್ಯವನ್ನೇ ತಲ್ಲಣಗೊಳಿಸಿರುವ ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸರಕಾರ ಭಾಷಿಕ ವಿಚಾರವನ್ನು ಎತ್ತಿಕೊಂಡು ಕನ್ನಡಿಗರ ತಾಳ್ಮೆ ಕೆಡಿಸುವ ತಂತ್ರಗಾರಿಕೆಯನ್ನು ಪದೆಪದೆ ಮಾಡುತ್ತಿದ್ದು, ಜನರ ದಿಕ್ಕುತಪ್ಪಿಸುವ ಕೆಲಸ ಮಹಾರಾಷ್ಟ್ರ ಸರಕಾರ ಮಾಡುತ್ತಿರುವುದು ಸರಿಯಲ್ಲ ಎಂದರು. ಭಾಷಾ ವಿಚಾರ ಕೈ ಬಿಟ್ಟು ಕೊರೊನಾದಿಂದ ದಿನನಿತ್ಯ ಸಾವು ನೋವು ಹೆಚ್ಚಾಗುತ್ತಿದೆ. ಬಡವರ ಬದುಕು ದುರ್ಭರವಾಗಿದೆ. ಜನವೆಲ್ಲಾ ಕೊರೊನಾಕ್ಕೆ ಹೆದರಿ ಗುಳೆ ಎದ್ದು ಹೊರಟಿದ್ದಾರೆ.
ದಿನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನ ಇದರ ವಿರುದ್ಧ ಬಂಡಾಯವೆದ್ದು ಹೋರಾಟ ಮಾಡುತ್ತಿದ್ದಾರೆ. ಆದರೆ ಜನರ ಗಮನ ಬೇರೆಡೆ ಸೆಳೆಯಲು ಭಾವಾನಾತ್ಮಕ ವಿಷಯವಾದ ಭಾಷಾ ವಿವಾದವನ್ನು ಮತ್ತೆ ಮತ್ತೆ ಪ್ರಸ್ತಾಪಿಸಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಇದರ ಮುಂದುವರಿದ ಭಾಗವೇ ಮರಾಠಿ ಭಾಷಿಕರ ಅಭಿವೃದ್ಧಿಗಾಗಿ ಮಹಾರಾಷ್ಟ್ರ ಸರಕಾರ ಬೆಳಗಾವಿಯಲ್ಲಿ ಒಂದು ಕಚೇರಿ ತೆರೆಯುವ ಪ್ರಸ್ತಾಪ ಮಾಡುತ್ತಿದೆ. ಇದು ಒಂದು ತಿರುಕನ ಕನಸಾಗಿದೆ. ನೀವು ಇಲ್ಲಿ ಕಚೇರಿ ತೆರೆಯುವುದಾದರೆ ಕೊಲ್ಲಾಪೂರ, ಸಾಂಗ್ಲಿ, ಕೊಲ್ಲಾಪೂರ, ಪೂನಾ, ಮುಂಬೈ ಇಚಲಕರಂಜಿಯಲ್ಲಿ ಕನ್ನಡ ಭಾಷಿಕರು ಹೆಚ್ಚಾಗಿದ್ದಾರೆ. ಅವರಿಗಾಗಿ ನಮ್ಮ ಕಚೇರಿಯನ್ನು ತೆರೆಯಲು ಅನುಮತಿ ನೀಡಿ. ಆ ಮೇಲೆ ನಿಮ್ಮ ಇಂತಹ ಉದ್ಧಟತನದ ಮಾತುಗಳನ್ನು ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯ ಮರಾಠಿ ಜನಾಂಗದ ಅನೇಕ ಮಿತ್ರರು ಕನ್ನಡ ವಿಷಯದಲ್ಲಿ ಎಂಎ ಪದವಿ ಪಡೆದು ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ. ಅವರೆಲ್ಲ ನಮ್ಮ ಕರ್ನಾಟಕದ ಬೆಳಗಾವಿಯವರೇ ಆಗಿದ್ದು, ನಮ್ಮ ಬಂಧುಗಳಾಗಿದ್ದಾರೆ. ಜೊತೆಗೆ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ನಮ್ಮ ಸರಕಾರ ರಚಿಸಿದೆ. ನೀವು ಇಂತಹ ಉದ್ಧಟತನದ ಮಾತುಗಳಿಗೆ ಬ್ರೇಕ್ ಹಾಕಬೇಕು ಎಂದು ಎಚ್ಚರಿಕೆ ನೀಡಿದರು.