‘ಮುಸ್ಲೀಮರ ಕ್ಯಾನ್ಸರ್ ಚಿಕಿತ್ಸೆಗೆ ಹಣ’ ನನ್ನ ಯೋಜನೆಯಲ್ಲ: ಸಚಿವೆ ಶಶಿಕಲಾ ಸ್ಪಷ್ಟೀಕರಣ
Team Udayavani, Sep 1, 2021, 9:13 PM IST
ವಿಜಯಪುರ : ಮುಸ್ಲಿಂ ಮಹಿಳೆಯರಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಒಂದು ಲಕ್ಷ ರೂ. ಸಹಾಯಧನ ವಿಚಾರದಲ್ಲಿ ಎಲ್ಲರೂ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಇದು ನಾನು ರೂಪಿಸಿದ ಯೋಜನೆಯಲ್ಲ, ದಶಕದ ಹಿಂದೆಯೇ ಜಾರಿಯಲ್ಲಿರುವ ಆದೇಶ ಎಂದು ಹಜ್ ಮತ್ತು ವಕ್ಫ್ ಇಲಾಖೆಯಲ್ಲಿ 2009 ರಲ್ಲೇ ಈ ಆದೇಶ ಜಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹೊಂದಿರುವ ವಕ್ಫ್-ಹಜ್ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟೀಕರಿಸಿದ್ದಾರೆ.
ಬುಧವಾರ (ಸೆ.01) ನಗರದ ಅದೃಷ್ಟ ಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಕೋವಿಡ್ ವಾರಿಯರ್ಸ್ ಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ಮುಸ್ಲೀಂ ಮಹಿಳೆಯರಿಗೆ 1 ಲಕ್ಷ ರೂ. ಸಹಾಯ ಧನ ನೀಡಲು ತೀರ್ಮಾನಿಸಲಾಗಿತ್ತು. ಅದು ಈ ವರೆಗೆ ಯಾರಿಗೂ ಗೊತ್ತಿರಲಿಲ್ಲ. ನಾನು ಕೇವಲ ಆ ಯೋಜನೆ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದೇನೆ. ನಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ನನ್ನ ಇಲಾಖೆ ಬಗ್ಗೆ ಮಾಹಿತಿ ನೀಡುವಾಗ ಅದರ ಬಗ್ಗೆ ಹೇಳಿದ್ದೇನೆ. ಇದನ್ನು ನಾನು ಘೋಷಣೆ ಮಾಡಿಲ್ಲ, ಬದಲಾಗಿ ಹಿಂದಿನ ಯೋಜನೆ ಬಗ್ಗೆ ಸಾರ್ವಜನಿಕರಿಗೆ ವಿವರ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಮಗೆ ಮುಸ್ಲಿಂ, ಹಿಂದೂ ಎನ್ನುವ ಭೇದಭಾವ ಇಲ್ಲ. ಸಿಎಂ ಪರಿಹಾರ ನಿಧಿ ಹಾಗೂ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಎಲ್ಲರಿಗೂ ಪರಿಹಾರ ನೀಡಲಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳಿಗೂ ಹಲವು ಯೋಜನೆಗಳ ಮೂಲಕ ಪರಿಹಾರ ನೀಡಲಾಗುತ್ತಿದೆ ಎಂದು ವಿವರಿಸಿದರು.