ಆರೋಪಿ ಶಿಕ್ಷಕನಿಗೆ ಕಠಿಣ ಶಿಕ್ಷೆ ವಿಧಿಸಿ
Team Udayavani, Aug 20, 2022, 4:10 PM IST
ವಿಜಯಪುರ: ರಾಜಸ್ತಾನದ ಜಲೋರ ಜಿಲ್ಲೆಯ ಸರಸ್ವತಿ ವಿದ್ಯಾಮಂದಿರದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ದಲಿತ ವಿದ್ಯಾರ್ಥಿ ಮೇಲೆ ಶಿಕ್ಷಕನೇ ಅಮಾನವೀಯವಾಗಿ ದೌರ್ಜನ್ಯ ನಡೆಸಿದ್ದನ್ನು ಖಂಡಿಸಿ ಶುಕ್ರವಾರ ದಲಿತ ವಿದ್ಯಾರ್ಥಿ ಪರಿಷತ್ನಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯಕುಮಾರ ಅಜಮನಿ ಮಾತನಾಡಿ, ಭಾರತ ಸ್ವಾತಂತ್ರ್ಯವಾಗಿ 75 ವರ್ಷ ಕಳೆದ ಈ ಸಂದರ್ಭ ಮಾನವ ಕುಲವೇ ತಲೆ ತಗ್ಗಿಸುತಂಥ ನಾಚಿಕೆಗೇಡಿನ ಕೃತ್ಯ ರಾಜಸ್ತಾನದಲ್ಲಿ ನಡೆದಿರುವುದ ಖಂಡನೀಯ ಎಂದರು.
ಇಂದ್ರಕುಮಾರ ಎಂಬ ವಿದ್ಯಾರ್ಥಿ ಮೇಲೆ ಜಾತಿವಾದಿ ಶಿಕ್ಷಕ ಛೆಲ್ಸಿಂಗ್ ತನಗೆ ಮೀಸಲಿರಿಸಿದ ಮಣ್ಣಿನ ನೀರಿನ ಮಡಿಕೆ ಮುಟ್ಟಿದನೆಂಬ ಕಾರಣಕ್ಕೆ 9 ವರ್ಷದ ಅಮಾಯಕ ದಲಿತ ವಿದ್ಯಾರ್ಥಿ ಮೇಲೆ ದೈಹಿಕ ದೌರ್ಜನ್ಯ ನಡೆಸಿದ್ದಾರೆ. ಪ್ರಾಥಮಿಕ ಹಂತದ ಶಿಕ್ಷಣ ಕಲಿಕೆ ಹಂತದಲ್ಲೇ ಮೇಲ್ಜಾತಿಯ, ಮನುವಾದಿ ಶಿಕ್ಷಕ ಮುಗ್ದ ಮಗುವಿನ ಮೇಲೆ ರಕ್ತಸ್ರಾವವಾಗಿ, ಸಾಯುವ ರೀತಿಯಲ್ಲಿ ಹಲ್ಲೆ ನಡೆಸಿರುವುದು ರಾಕ್ಷಸೀಯ ಕೃತ್ಯಕ್ಕೆ ಸಾಕ್ಷಿ ಎಂದು ಕಿಡಿ ಕಾರಿದರು.
ದಲಿತರು ಕೊಡ ಮುಟ್ಟಿದರೆ ಕೊಲ್ಲುತ್ತಾರೆ. ದಲಿತರು ಮದುವೆಯಲ್ಲಿ ಕುದುರೆ ಸವಾರಿ ನಡೆಸಿದರೆ, ಮೀಸೆ ಬಿಟ್ಟರೆ ಕೊಲ್ಲುತ್ತಾರೆ. ಪ್ರಕರಣ ದಾಖಲಿಸಿದರೂ ಪೊಲೀಸರು ಬಿ ರಿಪೋರ್ಟ್ ಹಾಕಿ ಕೇಸು ಮುಚ್ಚಿ ಹಾಕುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆ ವಿಳಂಬ ನೀತಿ ಅನುಸರಿಸುತ್ತಿದೆ. ಕೆಲವು ವರ್ಷಗಳಿಂದ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಆದರೆ ಇಂತಹ ಪ್ರಕರಣ ಸಂಪೂರ್ಣ ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂಬುದು ದುರಂತ ಎಂದು ವಾಗ್ಧಾಳಿ ನಡೆಸಿದರು.
ರಾಜಸ್ಥಾನ ಪೊಲೀಸರ ಬಂಧನದಲ್ಲಿರುವ ಆರೋಪಿ ಶಿಕ್ಷಕನಿಗೆ ಕಠಿಣ ಶಿಕ್ಷೆ ವಿಧಿಸಲು ಅಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಂಘಟನೆ ಜಿಲ್ಲಾ ಮುಖಂಡರಾದ ಆನಂದ ಮೂದುರ, ದರ್ಶನ ಸಾಲೋಟಗಿ, ಈಶ್ವರ ಯಂಟಮಾನ, ಸುರೇಶ ರಾಠೊಡ, ಆಕಾಶ ದೊಡಮನಿ, ಸಂಗಮೇಶ, ಪ್ರವೀಣ, ಭೀಮಾಶಂಕರ, ಸತೀಶ ಅಂಜುಟಗಿ, ಋತಿಕೇಶ, ಪ್ರಭು, ಕಾಶೀನಾಥ ಕಟ್ಟಿಮನಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.