ಮತದಾರರ ದಿನಾಚರಣೆ; ಪ್ರತಿಜ್ಞಾ ವಿಧಿ ಬೋಧನೆ
Team Udayavani, Jan 26, 2022, 2:53 PM IST
ಮುದ್ದೇಬಿಹಾಳ: ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಮತ್ತು ಜ್ಞಾನ ಭಾರತಿ ವಿದ್ಯಾಮಂದಿರ ಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮವನ್ನು ಕೋವಿಡ್ ನಿಯಮಗಳ ಹಿನ್ನೆಲೆ ಸರಳವಾಗಿ ಆಚರಿಸಲಾಯಿತು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎಸ್. ಕಡಕಭಾವಿ ಅವರು ಕಚೇರಿ ಸಿಬ್ಬಂದಿ ಮತ್ತು ಯುವ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ವೇಳೆ ಪ್ರಥಮ ಬಾರಿಗೆ ಮತದಾನದ ಹಕ್ಕು ಪಡೆದುಕೊಂಡ ಯುವಕ, ಯುವತಿಯರಿಗೆ ಸಾಂಕೇತಿಕವಾಗಿ ಮತದಾರರ ಇ-ಎಪಿಕ್ ಕಾರ್ಡ್ಗಳನ್ನು ವಿತರಿಸಿ ಮತದಾನ ಹಕ್ಕು ಬಳಕೆಯ ಮಹತ್ವದ ಕುರಿತು ತಿಳಿ ಹೇಳಲಾಯಿತು. ಅತ್ಯುತ್ತಮ ಬಿಎಲ್ಒ (ಮತಗಟ್ಟೆ ಮಟ್ಟದ ಅಧಿಕಾರಿ) ಎಂದು ನಾಗಬೇನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಅಣ್ಣಪ್ಪ ಮಾದರ ಅವರನ್ನು ತಾಲೂಕಾಡಳಿತ ವತಿಯಿಂದ ಸನ್ಮಾನಿಸಲಾಯಿತು. ಶಿರಸ್ತೇದಾರರು, ಕಚೇರಿ ಸಿಬ್ಬಂದಿ, ಶಿಕ್ಷಣ ಇಲಾಖೆ ಪ್ರತಿನಿಧಿಗಳು, ಬಿಎಲ್ ಒಗಳು ಪಾಲ್ಗೊಂಡಿದ್ದರು.
ಜ್ಞಾನಭಾರತಿ ವಿದ್ಯಾಮಂದಿರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕ ರಾಮಚಂದ್ರ ಹೆಗಡೆ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋ ಧಿಸಿದರು. ಶಿಕ್ಷಕರಾದ ಅನ್ನಪೂರ್ಣ ನಾಗರಾಳ, ಶಿವಲೀಲಾ ಗಡೇದ, ಪಾರ್ವತಿ ಅಂಗಡಿ, ಬಿ.ಆರ್. ಬೆಳ್ಳಿಕಟ್ಟಿ, ಆರ್.ಎಸ್. ಮಡಿವಾಳರ ಇದ್ದರು.