ಭಾರಿ ಮಳೆ ಹಿನ್ನೆಲೆ ಚಿತ್ರದುರ್ಗ-ಶಿವಮೊಗ್ಗ ರಾ.ಹೆ. ನೀರಿನಿಂದ ಮುಳುಗಡೆ; ಸಂಚಾರ ಅಸ್ತವ್ಯಸ್ತ
Team Udayavani, Oct 21, 2022, 8:07 AM IST
ಹೊಳಲ್ಕೆರೆ: ತಾಲೂಕಿನಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಹೊಳಲ್ಕೆರೆ ತಾಲೂಕಿನ ಚಿತ್ರದುರ್ಗ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ನೀರಿನಿಂದ ಮುಳುಗಡೆಯಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸಾರ್ವಜನಿಕರು ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಭಾರಿ ಮಳೆಗೆ ಕೆರೆಕಟ್ಟೆಗಳು ಕೊಡಿ ಬಿದ್ದು ದುಮ್ಮಿಗೆ ಹರಿಯಲು ಆರಂಭಿಸಿವೆ. ಪ್ರಮುಖವಾಗಿ ಹೊಳಲ್ಕೆರೆ ತಾಲೂಕಿನ ಹಳೆಹಳ್ಳ, ಶಿವಗಂಗಾ ಹತ್ತಿರ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಧಕ್ಕೆಯಾಗಿದ್ದು ಮಾತ್ರವಲ್ಲದೇ ಜನ ಜೀವನಕ್ಕೆ ತೊಂದರೆಯಾಗಿದೆ.
ಆದ್ದರಿಂದ ತಕ್ಷಣವೇ ಸರ್ಕಾರ ಇತ್ತ ಕಡೆ ಗಮನ ಹರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಮುಕ್ತ ಸಂಚಾರಕ್ಕೆ ಸೌಲಭ್ಯ ಕಲ್ಪಿಸಿ ಕೊಡಬೇಕು. ಈಗಾಗಲೇ ಸಾರ್ಬಜನಿಕರು ಸಂಚಾರಕ್ಕೆ ಪರದಾಡುಂತಾಗಿದೆ. ಭಾರಿ ಮಳೆಯಿಂದಾಗಿ ಶಿವಗಂಗಾ ಹಳೆ ಹಳ್ಳಿ, ಗಿಲಿಕೆನಹಳ್ಳಿ ಸುತ್ತಮುತ್ತ ಹೊಲ-ಗದ್ದೆಗಳು ನೀರಿನಲ್ಲಿ ಮುಳುಗಡೆಯಾಗಿವೆ.
ತೋಟಗಳಲ್ಲಿ ನೀರು ನಿಂತಿರುವ ಪರಿಣಾಮ ರೈತರು ಅಡಿಕೆ ತೆಗೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ಹೊಲದಲ್ಲಿ ಬೆಳೆದಿದ್ದ ಮುಸುಕಿನ ಜೋಳ ನೀರಿನ ಹೊಡೆತಕ್ಕೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದಾಗಿ ರೈತರಿಗೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.