ಬ್ಯಾನರ್, ಬಂಟಿಂಗ್ಸ್ ಗಳ ತೆರವಿಗೆ ಕ್ರಮ
Team Udayavani, Apr 12, 2018, 11:08 AM IST
ಬಜಪೆ: ಚುನಾವಣಾ ಮಾದರಿ ನೀತಿ ಸಂಹಿತೆಯ ಜಾರಿಗೆ ಬಂದ ದಿನದಿಂದ ಬಜಪೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಬ್ಯಾನರ್, ಬಂಟಿಂಗ್ಸ್ ಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಬುಧವಾರ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್ ಹಾಗೂ ಬಂಟಿಂಗ್ಸ್ ಹಾಗೂ ಇತರ ಸಣ್ಣಪುಟ್ಟ ಪೋಸ್ಟರ್ಸ್ ಗಳ ತೆರವು ಕಾರ್ಯ ಮೂಡಬಿದಿರೆ ವಿಧಾನ ಸಭಾಕ್ಷೇತ್ರದ ಚುನಾವಣಾಧಿಕಾರಿಯವರ ಆದೇಶದಂತೆ ನಡೆಯಿತು.
ಬಜಪೆ ಗ್ರಾಮ ಪಂಚಾಯತ್ನಿಂದ ಬ್ಯಾನರ್, ಬಂಟಿಂಗ್ಸ್ಗಳಿಂದ ಜನರಿಗೆ ತೊಂದರೆ ಯಾಗುವುದರನ್ನು ತಪ್ಪಿಸಲು ಬಸ್ಸು ನಿಲ್ದಾಣದ ಹಿಂದುಗಡೆ ಕಬ್ಬಿಣದ ಕಂಬಗಳನ್ನು ಹಾಕಿ ವ್ಯವಸ್ಥೆಗಳನ್ನು ಮಾಡಿತ್ತು. ಅಲ್ಲಿ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್ಗಳನ್ನು ಹಾಕಲಾಗಿತ್ತು. ಆದರೆ ಇಂದು ಅದನ್ನು ಕೂಡ ತೆರವುಗೊಳಿಸಲಾಯಿತು. ಚುನಾವಣಾಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣಿನಿಂದ ಗಮನಿಸುತ್ತಿದೆ.ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆಯಲ್ಲಿ ಯಾವುದೇ ಬಿಟ್ಟುಕೊಡುತ್ತಿಲ್ಲ. ಹೀಗಾಗಿ ಜನರು ಜನರೂ ಕೂಡ ಈಗ ಆಲರ್ಟ್ ಆಗಿದ್ದಾರೆ.
ಈಗ ಎಲ್ಲವೂ ದಾಖಲೀಕರಣವಾಗುವುದರಿಂದ ಹೆಚ್ಚು ಮಹತ್ವ ಬಂದಿದೆ. ಮದುವೆ ಹಾಗೂ ಇತರ ಸಮಾರಂಭಗಳಿಗೂ ಅನುಮತಿ ದಾಖಲೀಕರಣವಾಗುತ್ತದೆ. ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಬ್ಯಾನರ್ ಹಾಗೂ ಬಂಟಿಂಗ್ಸ್ಗಳನ್ನು ತೆರವುಗೊಳಿಸದೇ ಇರುವ ಬಗ್ಗೆ ಜಿಲ್ಲಾಧಿಕಾರಿಯವರು ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ಅವರಿಗೆ ಕಾರಣ ಕೇಳಿ ನೋಟಿಸ್ ಕೂಡ ಜಾರಿಗೊಳಿಸಿದ್ದಾರೆ.
ಪಾದಚಾರಿಗಳಿಗೆ ತೊಂದರೆ ತಪ್ಪಿತು
ಗ್ರಾಮ ಪಂಚಾಯತ್ನಿಂದ ಅನುಮತಿ ಪಡೆದರೂ ಬ್ಯಾನರ್ ಗಳ ತೆರವು ಕಾರ್ಯನಡೆದಿದೆ. ಖಾಸಗಿ ಜಾಗದಲ್ಲೂ ಇರುವ ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ. ಬ್ಯಾನರ್,ಬಂಟಿಂಗ್ಸ್ನಿಂದ ತುಂಬಿದ್ದ ಬಜಪೆ ಪೇಟೆ ಸ್ವಚ್ಛವಾಗಿ ಕಂಡು ಬಂತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಣ್ಣಪುಟ್ಟ ಪೋಸ್ಟರ್ಗಳನ್ನು ಕೂಡ ತೆರವು ಗೊಳಿಸಲಾಗಿದೆ. ಈ ಬ್ಯಾನರ್ ಗಳಿಂದ ಬಜಪೆ ಪೇಟೆಯಲ್ಲಿ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ತೊಂದರೆಯಾಗುತ್ತಿತ್ತು. ಈಗ ಇದಕ್ಕೂ ಪರಿಹಾರ ಸಿಕ್ಕಿದಂತಾಗಿದೆ.