ವಿವಿಧ ಸಂಘಟನೆಗಳಿಂದ ಕೋಮು ಸೌಹಾರ್ದ ಭಾಷ್ಯ
Team Udayavani, May 31, 2018, 12:15 PM IST
ಮಂಗಳೂರು: ಸಣ್ಣ ಸಣ್ಣ ಕಾರಣಗಳಿಗೆ ಗುಂಪುಗಳ ಮಧ್ಯೆ, ಕೋಮುಗಳ ಮಧ್ಯೆ ಮನಸ್ತಾಪ ವಿದ್ದರೂ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಅವುಗಳಾವುವೂ ಮುಖ್ಯವಾಗದು. ಎಲ್ಲರ ಬದುಕೂ ಒಂದೇ ಎಂಬುದೇ ದೊಡ್ಡ ದಾಗಿ ಮಾನವೀಯತೆ ಮೆರೆಯುತ್ತದೆ.
ಮಂಗಳವಾರ ಭಾರೀ ಮಳೆಯಿಂದ ನಗರ ತತ್ತರಿಸಿದಾಗಲೂ ಇಂಥದ್ದೇ ವಾತಾವರಣ ಕಂಡು ಬಂದಿತು. ಜಾತಿ, ಮತ ಭೇದ ನೋಡದೆ ಸಂಘಟನೆಗಳ ಯುವಜನರು ನೆರೆ ಪೀಡಿತರ ಸಹಾಯಕ್ಕೆ ಧಾವಿಸಿದ್ದು ವಿಶೇಷ.
ಭೀಕರ ಮಳೆಯಿಂದಾಗಿ ಮನೆಗಳಿಗೆ ಅಥವಾ ಊರಿಗೆ ತೆರಳಲಾರದೆ ಬಾಕಿಯಾದವರಿಗೆ ಮಣ್ಣಗುಡ್ಡದಲ್ಲಿರುವ ಸಂಘ ನಿಕೇತನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ಉಚಿತ ವಸತಿ, ಆಹಾರ ವ್ಯವಸ್ಥೆ ಮಾಡಲಾಗಿತ್ತು. ಬಜರಂಗದಳ, ವಿಹಿಂಪ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ನೆರವು ನೀಡಿದರು. ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಮಂದಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕೊರಗಜ್ಜನ ಗುಡಿ ಶುಚಿ ಮಾಡಿದ ಮುಸ್ಲಿಂ ಯುವಕರು
ಪಾಂಡೇಶ್ವರದಲ್ಲಿರುವ ಕೊರಗಜ್ಜನ ಗುಡಿಗೆ ನುಗ್ಗಿದ ನೀರನ್ನು ಹೊರಚೆಲ್ಲಿ ಶುಚಿ ಮಾಡುವ ಮೂಲಕ ಆ ಪ್ರದೇಶದ ಮುಸ್ಲಿಂ ಯುವಕರ ತಂಡವೊಂದು ಕೋಮು ಸೌಹಾರ್ದಕ್ಕೆ ಮಾದರಿಯಾಯಿತು. ಪಾಂಡೇಶ್ವರ ರೈಲ್ವೇಗೇಟ್ ಬಳಿ ಇರುವ ಕೊರಗಜ್ಜನ ಗುಡಿಗೆ ಮಳೆ ನೀರು ನುಗ್ಗಿ ಗುಡಿಯ ಸುತ್ತಮುತ್ತಲೂ ನೀರು ನಿಂತಿತ್ತು. ಇದನ್ನು ಗಮನಿಸಿದ ಈ ಯುವಕರು ಗುಡಿಯಲ್ಲಿದ್ದ ನೀರನ್ನೆಲ್ಲ ಹೊರಚೆಲ್ಲಿ ಸ್ವತ್ಛಗೊಳಿಸಿ ಸೌಹಾರ್ದ ಮೆರೆದರು.
ಮಾನವೀಯತೆ ಮೆರೆದ ಪಾಪ್ಯುಲರ್ ಫ್ರಂಟ್
ಪಾಂಡೇಶ್ವರ ಸುಭಾಶ್ನಗರದ ಎರಡನೇ ತಿರುವಿನಲ್ಲಿ ನೆರೆ ಹಾನಿ ಗೊಳಗಾದ ಸುಮಾರು 20 ಮನೆಗಳಿಗೆ ಕುಡಿಯುವ ನೀರು ಒದಗಿಸಿ ಪಾಪ್ಯುಲರ್ ಫ್ರಂಟ್ ಯುವಕರ ತಂಡ ಮಾನವೀಯತೆ ಮೆರೆದಿದೆ. ಈ ಪ್ರದೇಶ ದಲ್ಲಿ ಹಿಂದೂ, ಮುಸ್ಲಿಂ ಸಹಿತ ವಿವಿಧ ಮತಗಳ ಜನರಿದ್ದಾರೆ. ಮಳೆ ಹಾನಿಯಿಂದ ಕುಡಿಯಲು ನೀರೂ ಇಲ್ಲದೆ ಜನರು ಸಮಸ್ಯೆ ಎದುರಿಸಿದ್ದರು. ಈ ಸಂದರ್ಭದಲ್ಲಿ ಸಂಘಟನೆಯ ಯುವಕರು ಎಲ್ಲರಿಗೂ ಕುಡಿಯುವ ನೀರಿನ ಕ್ಯಾನ್ಗಳನ್ನು ಒದಗಿಸಿದರು.
ಉಚಿತ ಸೇವೆಗೆ ಸದಾ ಸಿದ್ಧ
ಮಂಗಳೂರಿನಲ್ಲಿ ಮಳೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ, ನೆರವಿಗೆ ವಿವಿಧ ತಂಡಗಳು ಸಿದ್ಧವಾಗಿದ್ದವು. ಉಚಿತ ಆಶ್ರಯ, ಆಹಾರ, ನೆರೆ ನೀರಿನಲ್ಲಿ ನಡೆದಾಡಲು ಸಾಧ್ಯವಾಗದೇ ಇರುವವರಿಗೆ ದೋಣಿಗಳ ಉಚಿತ ಸೇವೆ… ಹೀಗೆ ಹಲವರು ತಮ್ಮ ವೈಯಕ್ತಿಕ ಮೊಬೈಲ್ ನಂಬರ್ ಅಥವಾ ಸಂಘಟನೆಗಳ ಸದಸ್ಯರ ನಂಬರ್ಗಳನ್ನು ಸಾಮಾಜಿಕ ತಾಣಗಳಾದ ಫೇಸುºಕ್, ವಾಟ್ಸಪ್ಗ್ಳಲ್ಲಿ ಹರಿಯಬಿಟ್ಟು ನೆರವು ಬೇಕಿದ್ದರೆ ತತ್ಕ್ಷಣ ಕರೆ ಮಾಡಿ ಎಂದು ಕೋರುತ್ತಿದ್ದರು. ಇದನ್ನು ಇತರರೂ ಶೇರ್ ಮಾಡಿಕೊಂಡು ನೆರವು ಕೋರಲು ಜನರಲ್ಲಿ ವಿನಂತಿಸುತ್ತಿದ್ದುದು ಕಂಡು ಬಂದಿತ್ತು.