ಮುಡಿಪಿನಡ್ಕ -ಪೇರಾಲು ರಸ್ತೆ ಕಾಮಗಾರಿ ಪೂರ್ಣ
Team Udayavani, May 18, 2018, 12:42 PM IST
ಬಡಗನ್ನೂರು: ಮುಡಿಪಿನಡ್ಕ- ಮೈಂದನಡ್ಕ ರಸ್ತೆಯ ಮುಡಿಪಿನಡ್ಕ-ಪೇರಾಲು ನಡುವಿನ 2.2 ಕಿ.ಮೀ. ರಸ್ತೆ ವಿಸ್ತರಣೆಗೊಂಡು ಡಾಮರು ಕಾಮಗಾರಿ ಪೂರ್ಣಗೊಂಡಿದೆ. ಪುತ್ತೂರು ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿ ಅವರ ಒನ್ ಟೈಮ್ ಯೋಜನೆಯಡಿ ರಸ್ತೆಗೆ 1.20 ಕೋಟಿ ರೂ. ಮಂಜೂರಾಗಿತ್ತು.
ಸುಮಾರು 30 ವರ್ಷಗಳಿಂದ ಡಾಮರು ಕಾಣದೆ ಈ ರಸ್ತೆ ಅಗಲ ಕಿರಿದಾಗಿತ್ತು. ರಸ್ತೆಯ ಒಟ್ಟು ಅಗಲ 4.5 ಮೀ. ಇದ್ದರೂ ಡಾಮರು 3 ಮೀ. ಮಾತ್ರವಿತ್ತು. ಎರಡು ವಾಹನಗಳು ಎದುರು ಬದುರಾಗಿ ಬಂದರೆ ಸಂಚಾರಕ್ಕೆ ಕಷ್ಟವಾಗುತ್ತಿತ್ತು. ರಸ್ತೆಯ ಅಲ್ಲಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿ ಕಾಲ್ನಡಿಗೆಗೂ ಸಮಸ್ಯೆಯಾಗಿತ್ತು. ರಸ್ತೆ ಅಭಿವೃದ್ಧಿಗಾಗಿ ಬಡಗನ್ನೂರು ಹಾಗೂ ಪಡುವನ್ನೂರು ನಾಗರಿಕ ಹಿತರಕ್ಷಣ ಸಮಿತಿ ವತಿಯಿಂದ ಒಂದು ವಾರದವರೆಗೆ ಅಹೋರಾತ್ರಿ ಪ್ರತಿಭಟನೆಯೂ ನಡೆದಿತು.
ಇತರ ಸಂಘ ಸಂಸ್ಥೆಗಳಿಂದ ರಸ್ತೆ ತಡೆ ಮಾಡಿದ್ದು, ಸಾರ್ವಜನಿಕರೂ ಮನವಿ ನೀಡಿದ್ದರು. ಶಕುಂತಳಾ ಶೆಟ್ಟಿ
ಅವರ ಶಿಫಾರಸಿನಂತೆ ಸರಕಾರ 1.20 ಕೋಟಿ ರೂ. ಅನುದಾನ ಒದಗಿಸಿತ್ತು. ರಸ್ತೆ ಒಟ್ಟು 6 ಮೀ. ಅಗಲವಿದ್ದು, ಡಾಮರು 3.75 ಮೀ. ಇದೆ. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಸಂಚಾರ ಸಮಸ್ಯೆ ನಿವಾರಣೆ ಆದಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.