ರಣಾಂಗಣವಾದ ಪುರಭವನ ಸಭಾಂಗಣ
Team Udayavani, Aug 10, 2018, 10:26 AM IST
ಮಂಗಳೂರು: ಕ್ವಿಟ್ ಇಂಡಿಯಾ ಚಳವಳಿಯ ನೆನಪಿಗಾಗಿ ಗುರುವಾರ ದ.ಕ. ಜಿಲ್ಲಾ ಕಾಂಗ್ರೆಸ್ ನಗರದ ಪುರಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಇಂಟಕ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟದಿಂದಾಗಿ ಸಭಾಂಗಣವು ರಣಾಂಗಣವಾಗಿ ಮಾರ್ಪಟ್ಟಿತು. ಇಂಟಕ್ ಯುವ ಮುಖಂಡ ಪುನೀತ್ ಶೆಟ್ಟಿ ಮೇಲೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಬೆಂಬಲಿಗರು ಎನ್ನಲಾದ ಕೆಲವರು ಹಲ್ಲೆ ನಡೆಸಿದ್ದು, ಗಾಯಗೊಂಡ ಪುನೀತ್ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಬಾವುಟಗುಡ್ಡೆಯ ಟಾಗೋರ್ ಪಾರ್ಕ್ನಿಂದ ಪುರಭವನದ ತನಕ ಪಾದ ಯಾತ್ರೆ, ಸಭೆ ಆಯೋಜಿಸಿತ್ತು. ಮುಕ್ತಾಯದ ಹಂತದಲ್ಲಿ ವೇದಿಕೆ ಮುಂಭಾಗ ನಡೆದ ಬೊಬ್ಬೆ, ಹಲ್ಲೆ, ತಳ್ಳಾಟ ಗೊಂದಲ ಮೂಡಿಸಿತು. ಬಳಿಕ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಬೆಂಬಲಿಗರು ಮತ್ತು ಇಂಟಕ್ ಯುವ ಮುಖಂಡ ಪುನೀತ್ ಶೆಟ್ಟಿ ಬೆಂಬಲಿಗರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದರು. ಹೊಡೆದಾಟವೂ ನಡೆಯಿತು. ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ನವೀನ್ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್. ಲೋಬೊ ಹತೋಟಿಗೆ ತಂದರು.
ಪುನೀತ್ ಶೆಟ್ಟಿ ಹೇಳಿಕೆ
“ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಬೆಂಬಲಿಗರಿಂದ ನನ್ನ ಮೇಲೆ ಹಲ್ಲೆ ನಡೆದಿದೆ. ನಾನು ಇಂಟಕ್ ಅಧ್ಯಕ್ಷನಾಗಿದ್ದು, ಸಮಾಜಸೇವೆ ಮಾಡುತ್ತಿದ್ದೇನೆ. ಮಿಥುನ್ ರೈ 10 ದಿನಗಳ ಹಿಂದೆ ನನ್ನ ಮೇಲೆ ನಕಲಿ ದೂರು ನೀಡಿದ್ದಾರೆ ‘ ಎಂದು ಪುನೀತ್ ಶೆಟ್ಟಿ ಆರೋಪಿಸಿ¨ದ್ದಾರೆ. “ಸಭಾಂಗಣದಲ್ಲಿ ನನ್ನ ಮೇಲೆ ಹಲ್ಲೆ ಪ್ರಯತ್ನ ನಡೆದಿತ್ತು. ಕೊನೆಗೆ ತನ್ನ ಚೈನ್, ಉಂಗುರ ಕಿತ್ತು ಹಲ್ಲೆ ನಡೆಸಿದ್ದಾರೆ. ಚಿಕಿತ್ಸೆ ಪಡೆದು, ಪೊಲೀಸರು ದೂರು ನೀಡುತ್ತೇನೆ’ ಎಂದು ತಿಳಿಸಿದ್ದಾರೆ.
ಮಿಥುನ್ ರೈ ಹೇಳಿಕೆ
ಮಿಥುನ್ ರೈ ಪ್ರತಿಕ್ರಿಯಿಸಿ, ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ಘಟನೆ. ಕಾಂಗ್ರೆಸ್ಗೆ ಸಂಬಂಧವಿಲ್ಲ. ಮುಖಂಡರು ಸಮಸ್ಯೆ ಪರಿಹರಿಸಿದ್ದಾರೆ ಎಂದರು. ಯುವ ಇಂಟಕ್ ದ.ಕ. ಜಿಲ್ಲಾ ಘಟಕ ಜಿಲ್ಲಾಧ್ಯಕ್ಷ ದೀಕ್ಷಿತ್ ಶೆಟ್ಟಿ ಘಟನೆಯನ್ನು ಖಂಡಿಸಿದ್ದಾರೆ.
ಕಾಂಗ್ರೆಸ್ ಕಚೇರಿ ಭೇಟಿ
ಘಟನೆಗೆ ಸಂಬಂಧಿಸಿ ಮಿಥುನ್ ರೈ ಮತ್ತು ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ತೆರಳಿ ಮಾಜಿ ಸಚಿವ ಬಿ. ರಮಾನಾಥ ರೈ ಅವರಿಗೆ ವಿಷಯವನ್ನು ಮನವರಿಕೆ ಮಾಡಲು ಯತ್ನಿಸಿದರು,