ಕೋವಿಡ್ 19 ಕಳವಳ: ಮಂಗಳೂರು-ಕಾಸರಗೋಡು ರಸ್ತೆ ಸಂಚಾರ ಬಂದ್ ; ದ.ಕ. ಜಿಲ್ಲಾಧಿಕಾರಿ ಆದೇಶ
Team Udayavani, Mar 20, 2020, 11:25 PM IST
ಮಂಗಳೂರು: ಕೋವಿಡ್ 19 ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತವು ಇನ್ನೊಂದು ಕ್ರಮವನ್ನು ಕೈಗೊಂಡಿದೆ.
ಅದರ ಪ್ರಕಾರ ದಕ್ಷಿಣ ಕನ್ನಡದ ಮೂಲಕ ಕೇರಳ ರಾಜ್ಯವನ್ನು ಸಂಪರ್ಕಿಸುವ ಎಲ್ಲಾ ರಸ್ತೆ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಾಳೆ ಮಧ್ಯಾಹ್ನ 2 ಗಂಟೆಯಿಂದ (ಮಾರ್ಚ್ 21) ಮಾರ್ಚ್ 31ರ ಮಧ್ಯರಾತ್ರಿಯವರೆಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ.
ಯಾವುದೇ ತುರ್ತು ಪ್ರಕರಣಗಳಲ್ಲಿ ತಲಪಾಡಿ ಚೆಕ್ ಪೋಸ್ಟ್ ಮೂಲಕ ಮಾತ್ರ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿಯವರ ಆದೇಶದಲ್ಲಿ ತಿಳಿಸಲಾಗಿದೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್- 19 ವೈರಸ್ ನ ಆರು ಪ್ರಕರಣಗಳು ವರದಿಯಾಗಿದೆ. ಕಾಸರಗೋಡು ಮತ್ತು ಮಂಗಳೂರು ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮುಂಜಾಗರುಕತಾ ಕ್ರಮವಾಗಿ ದಕ್ಷಿಣ ಕನ್ನಡ ಕೇರಳ ರಾಜ್ಯದ ಕಾಸರಗೋಡು ಗಡಿಭಾಗದಲ್ಲಿ ಸಂಚರಿಸುವ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸುವುದು ಅಗತ್ಯವೆಂದು ಮನಗಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.