ಕುಸಿದ ರಸ್ತೆಗೆ ಶೀಘ್ರ ಸ್ಪಂದಿಸಿದ ಅಧಿಕಾರಿಗಳು
Team Udayavani, Jun 30, 2018, 11:49 AM IST
ಸುಳ್ಯಪದವು : ಜೂ.30ರ ಉದಯವಾಣಿ ಸುದಿನ ಪತ್ರಿಕೆಯಲ್ಲಿ ‘ಕನ್ನಡ್ಕ: ನಮ್ಮ ಗ್ರಾಮ ನಮ್ಮ ರಸ್ತೆ ಕುಸಿತ’ ಶೀರ್ಷಿಕೆಯೊಂದಿಗೆ ಪ್ರಕಟವಾದ ಸುದ್ದಿಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಎಂಜಿನಿಯರ್ ಶೀಘ್ರದಲ್ಲಿ ಸ್ಪಂದಿಸಿದ ಬಗ್ಗೆ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.
ಕನ್ನಡ್ಕ ಬಸ್ಸು ತಂಗುದಾಣದ ಬಳಿ ರಸ್ತೆ ಕುಸಿದು ಹೋಗಿದ್ದು ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿದ್ದು,ಸುಮಾರು 100 ಮೀಟರ್ ರಸ್ತೆ ಬಿರುಕು ಬಿಟ್ಟಿದ್ದು, ಮೋರಿಯ ಪಕ್ಕದಲ್ಲಿ ನೀರು ಶೇಖರಣೆಗೊಂಡಿದ್ದು ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಸಾರ್ವಜನಿಕರಲ್ಲಿ ಮೂಡಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಯಿತು.
ಸ್ಪಂದಿಸಿದ ಅಧಿಕಾರಿಗಳು ಗುತ್ತಿಗೆದಾರಿಗೆ ತಿಳಿಸಿ ಕುಸಿತವಾದ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಕಲ್ಲು, ಮರಳು ಹಾಗೂ ಸಿಮೆಂಟ್ನ ಮಿಶ್ರಣ ಹಾಕಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ. ನೀರು ಸರಾಗವಾಗಿ ಹೋಗಲು ರಸ್ತೆಯ ಅಂಚಿನಲ್ಲಿ ಚಿಕ್ಕ ಚರಂಡಿಯನ್ನು ನಿರ್ಮಿಸಿದ್ದಾರೆ.
ಮೋರಿಯ ಸಮೀಪ ಮತ್ತು ರಸ್ತೆಯಲ್ಲಿದ್ದ ಹೊಂಡ ಮುಚ್ಚಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗಿದೆ. ನವಂಬರ್ ಅಥವಾ ಡಿಸೆಂಬರ್ನಲ್ಲಿ ಡಾಮರು ಎದ್ದು ಹೋದಲ್ಲಿ ಹಾಗೂ ಬಿರುಕು ಬಿಟ್ಟ ಪ್ರದೇಶಗಳಿಗೆ ಡಾಮರು ಮಾಡಲಾಗುವುದು ಎಂದು ನಮ್ಮ ಗ್ರಾಮ ನಮ್ಮ ರಸ್ತೆಯ ಎಂಜಿನಿಯರ್ ಜನಾರ್ದನ ಮಾಹಿತಿ ನೀಡಿದ್ದಾರೆ.