ಮಾತಿನ ಮತ, ಸಂದರ್ಶನ:
Team Udayavani, Apr 12, 2018, 2:40 PM IST
ತಪ್ಪು ಕಲ್ಪನೆಯಿಂದಾಗಿ ಸೋಲಾಯಿತು
ಕಳೆದ ಬಾರಿ ಸೋಲಿಗೆ ಕಾರಣ ?
ಪಕ್ಷ ಪ್ರಾರಂಭಗೊಂಡ ಕಡಿಮೆ ಅವಧಿಯಲ್ಲಿ ಚುನಾವಣೆ ಎದುರಿಸಿದ್ದು, ರಾಷ್ಟ್ರೀಯ ಪಕ್ಷಗಳ ಧರ್ಮಾಧಾರಿತ ಮತ್ತು
ಕೋಮು ಆಧಾರಿತ ಪ್ರಚಾರ, ಎಸ್ಡಿಪಿಐಗೆ ಮತ ಹಾಕಿದರೆ ಬಿಜೆಪಿ ಗೆಲ್ಲುತ್ತದೆ ಎನ್ನುವ ತಪ್ಪು ಕಲ್ಪನೆ ಸೋಲಿಗೆ ಕಾರಣ.
ಈ ಬಾರಿ ಎಸ್ಡಿಪಿಐಯ ಸ್ಪರ್ಧಾ ಅಕಾಂಕ್ಷಿಯೇ ?
ನಮ್ಮ ಪಕ್ಷದಲ್ಲಿ ಆಕಾಂಕ್ಷಿ ಎಂಬ ಶಬ್ದವೇ ಇಲ್ಲ. ಪಕ್ಷದ ನಾಯಕತ್ವ, ಸೀಟಿಗಾಗಿ ಲಾಬಿ ಇಲ್ಲ. ಪಕ್ಷಕ್ಕಾಗಿ, ಬಡವರಿಗಾಗಿ, ದೇಶಕ್ಕಾಗಿ ಹೆಚ್ಚು ನಿಸ್ವಾರ್ಥವಾಗಿ ದುಡಿದವರನ್ನು ಕಣಕ್ಕಿಳಿಸುವ ಕಾರ್ಯ ಮಾಡುತ್ತೇವೆ.
ಈ ಬಾರಿಯ ಪ್ರಚಾರದ ವೈಖರಿ ಹೇಗಿದೆ?
ಈಗಾಗಲೇ ದೇರಳಕಟ್ಟೆಯಲ್ಲಿ ಸಮಾವೇಶ ಮಾಡಲಾಗಿದೆ. ಕೆ.ಸಿ.ರೋಡ್ನ ಸಮಾವೇಶದಲ್ಲಿ ರಾಜ್ಯಾಧ್ಯಕ್ಷರು ಭಾಗವಹಿಸಿದ್ದರು. ಅಲ್ಲಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಿ ಜನರಿಗೆ ಸರಕಾರದ ಯೋಜನೆಗಳ ಮಾಹಿತಿ, ಅರ್ಜಿ ಭರ್ತಿ ಮಾಡುವ ಕಾರ್ಯ ನಡೆಸುತ್ತಾ ಬಂದಿದೆ. ಸರಕಾರದ ಸೌಲಭ್ಯವನ್ನು ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಸಾವಿರಾರು ಕಾರ್ಯಕರ್ತರಿದ್ದರೂ ಸೋಲಿಗೆ ಕಾರಣ…?
ಎಸ್ಡಿಪಿಐಗೆ ಕಾರ್ಯಕರ್ತರು ಇದ್ದರೂ ಜಿಲ್ಲೆಯಲ್ಲಿ ದೊಡ್ಡ ಸಮಸ್ಯೆ ಎಸ್ಡಿಪಿಐಗೆ ಮತ ಹಾಕಿದರೆ ಬಿಜೆಪಿ ಗೆಲ್ಲುತ್ತದೆ ಎನ್ನುವ ತಪ್ಪು ಕಲ್ಪನೆ. ಒಂದು ಕಡೆ ಬಿಜೆಪಿಯನ್ನು ಸೋಲಿಸಬೇಕು, ಇನ್ನೊಂದೆಡೆ ಎಸ್ಡಿಪಿಐಯನ್ನು ಗೆಲ್ಲಿಸಬೇಕು ಎನ್ನುವ ಆತ್ಮಸ್ಥೈರ್ಯ ಮತದಾರರಲ್ಲಿ ಬಂದಿಲ್ಲ. ಈ ಬಾರಿ ಅಂತಹ ಆತ್ಮಸ್ಥೈರ್ಯ ಮತದಾರರಲ್ಲಿ ಹೆಚ್ಚಾಗಿದ್ದು, ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಬೇಸತ್ತಿದ್ದು, ಕರಾವಳಿಯಲ್ಲಿ ಎಸ್ಡಿಪಿಐಯನ್ನು ಬೆಂಬಲಿಸಲಿದ್ದಾರೆ.
ಪಕ್ಷದ ಅಭಿವೃದ್ಧಿಯ ಚಿಂತನೆ ಮತ್ತು ಈ ಬಾರಿಯ ಚುನಾವಣೆಯಲ್ಲಿ ಎಸ್ಡಿಪಿಐ ಯಾವ ರೀತಿಯ ಪಾತ್ರ ನಿರ್ವಹಿಸಬಹುದು?
ಅಭಿವೃದ್ಧಿಯ ಬಗ್ಗೆ ದೊಡ್ಡ ಮಟ್ಟದ ಸೈದ್ಧಾಂತಿಕ ಒಂದು ನೋಟವನ್ನು ಎಸ್ಡಿಪಿಐ ರಾಷ್ಟ್ರ ಮಟ್ಟದಲ್ಲಿ ಹಾಕಿಕೊಂಡಿದೆ. ಜನರಿಗೆ ಈ ಬಾರಿ ಬದಲಾವಣೆ ಬೇಕಾಗಿದೆ. ಪ್ರಾಮಾಣಿಕ ರಾಜಕಾರಣಕ್ಕೆ ಈ ಬಾರಿ ಉತ್ತಮ ಬೇಡಿಕೆ ಇದೆ. ಕರಾವಳಿಯಲ್ಲೂ ಈ ಬಾರಿ ಪಕ್ಷ ಪ್ರಮುಖ ಪಾತ್ರ ವಹಿಸಲಿದೆ.
ವಸಂತ ಕೊಣಾಜೆ