ಜಾಲ್ಸೂರು-ಸಂಪಾಜೆ: ಗುಡ್ಡ ಕುಸಿತ ಭೀತಿ!
Team Udayavani, Jun 10, 2019, 6:10 AM IST
ಸುಳ್ಯ : ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪಾಜೆ- ಜಾಲ್ಸೂರು- ಕನಕಮಜಲು ತನಕ ಈ ಮಳೆಗಾಲದಲ್ಲಿ ರಸ್ತೆ ಸಂಚಾರ ಕ್ಷೇಮವೇ ಎಂದು ಪರಿಶೀಲಿಸಿದರೆ, ಅಲ್ಲಲ್ಲಿ ಗುಡ್ಡ ಕುಸಿತ, ನೆರೆ ಹಾವಳಿ ಆತಂಕ ಇದ್ದೆ ಇದೆ ಅನ್ನುತ್ತಿದೆ ಈಗಿನ ಚಿತ್ರಣ.
ಕಳೆದ ಬಾರಿ ಪ್ರಾಕೃತಿಕ ವಿಕೋಪದ ಪರಿಣಾಮ ಕೊಡಗು ಜಿಲ್ಲಾ ವ್ಯಾಪ್ತಿಯ ಸಂಪಾಜೆಯಿಂದ ಮಡಿಕೇರಿ ತನಕ ಭೂ ಕುಸಿತ, ಗುಡ್ಡ ಕುಸಿತ, ಜಲ ಪ್ರವಾಹಕ್ಕೆ ಸಿಲುಕಿ ರಸ್ತೆ ಸಂಪೂರ್ಣ ಹದೆಗೆಟ್ಟಿತ್ತು. ಅಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ಮರು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ದ.ಕ. ಜಿಲ್ಲೆ ವ್ಯಾಪ್ತಿಗೆ ಒಳಪಟ್ಟಿರುವ ಸಂಪಾಜೆ – ಜಾಲೂÕರು ತನಕ ಕೆಲವೆಡೆ ಅಪಾಯಕಾರಿ ಸ್ಥಿತಿ ಇದೆ.
ಮುಂಜಾಗ್ರತಾ ಕಾಮಗಾರಿ ಆಗದ ಕಾರಣ ಪ್ರಯಾಣಿಕರು ಭೀತಿಯಿಂದಲೇ ಇಲ್ಲಿ ರಸ್ತೆ ದಾಟಬೇಕಿದೆ.
ಕಳೆದ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅರಂಬೂರು ಪಾಲಡ್ಕಕ್ಕೆ ಪಯಸ್ವಿನಿ ನದಿ ನೀರು ನುಗ್ಗಿ ಬಂದಿತ್ತು. ಅರಂಬೂರು ಬಳಿಯ ತ್ರಯಾಂಬಿಕ ಆಶ್ರಮ ಸಂಪೂರ್ಣ ಮುಳುಗಡೆ ಆಗಿತ್ತು.
ಆತಂಕ ಸೃಷ್ಟಿಯಾಗಿತ್ತು
ಅರಂಬೂರು ತೂಗು ಸೇತುವೆ ಮೇಲ್ಭಾಗದ ತನಕ ಏರಿ ಸ್ಥಳೀಯ ಮನೆಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಇಲ್ಲೆಲ್ಲ ಬೋಟ್ ತರಿಸಿ ಪ್ರಯಾಣಿಕರನ್ನು, ಸ್ಥಳೀಯ ಮನೆ ಮಂದಿಯನ್ನು ರಸ್ತೆ ದಾಟಿಸಲಾಗಿತ್ತು.
ಈ ಬಾರಿ ಈ ಪ್ರದೇಶಗಳಲ್ಲಿ ನೆರೆ ಹಾವಳಿ ತಡೆಗೆ ಸಂಬಂಧಿಸಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿಲ್ಲ. ಅಪಾಯ ಹೊತ್ತು ಕೊಂಡೇ ಇಲ್ಲಿ ವಾಹನ ಸವಾರರು ರಸ್ತೆ ದಾಟಬೇಕಿದೆ. ಮನೆ ಮಂದಿ ಕಾಲ ಕಳೆಯಬೇಕಿದೆ.
ಇಲಾಖೆಗೆ ಸೂಚನೆ
ಸಚಿವರ ಉಪಸ್ಥಿತಿಯಲ್ಲಿ ನಡೆದ ಸಭೆಗಳಲ್ಲಿ ಮಳೆಗಾಲಕ್ಕಿಂತ ಪೂರ್ವಭಾವಿಯಾಗಿ ರಸ್ತೆ ನಿರ್ವಹಣೆ ಮಾಡುವಂತೆ ಹೆದ್ದಾರಿ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಜಾಲೂÕರು-ಸಂಪಾಜೆ ರಸ್ತೆ ಕುರಿತು ಇಲಾಖಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
– ಎಚ್.ಕೆ. ಕೃಷ್ಣಮೂರ್ತಿ ಸಹಾಯಕ ಆಯುಕ್ತ, ಪುತ್ತೂರು ಉಪವಿಭಾಗ
ಗುಡ್ಡ ಕುಸಿತ, ನೆರೆ ಭೀತಿ
ಮೈಸೂರು-ಮಂಗಳೂರು ನಡುವೆ ಸಂಪರ್ಕದ ಕೊಂಡಿ ಆಗಿರುವ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಸುಳ್ಯ, ಪುತ್ತೂರು ತಾಲೂಕನ್ನು ಹಾದು ಹೋಗುತ್ತದೆ. ಕೊಡಗು-ದಕ್ಷಿಣ ಕನ್ನಡ ಗಡಿಭಾಗದ ಸಂಪಾಜೆ-ಅರಂಬೂರು ತನಕದ ರಸ್ತೆಯಲ್ಲಿ ಕೆಲವೆಡೆ ಗುಡ್ಡ ಕುಸಿತದ ಭೀತಿ ಇದೆ. ಬಿಳಿಯಾರು ಬಳಿ ಕಳೆದೆ ಬಾರಿ ಕುಸಿದ ಗುಡ್ಡ ಹಾಗೆಯೇ ಇದ್ದು, ದೊಡ್ಡ ಗಾತ್ರದ ಬಂಡೆಗಳು ರಸ್ತೆಗೆ ಉರುಳುವ ಅಪಾಯದಲ್ಲಿದೆ.
ಚರಂಡಿ ದುರಸ್ತಿ ಆಗಿಲ್ಲ
ಸಂಪಾಜೆ – ಜಾಲೂÕರು- ಕನಕಮಜಲು ರಸ್ತೆಯ ಇಕ್ಕೆಲೆಗಳಲ್ಲಿ ಚರಂಡಿ ದುರಸ್ತಿ ಆಗಿಲ್ಲ. ಇದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುವ ಅಪಾಯ ಉಂಟಾಗಿದೆ. ರಾಜ್ಯ ಹೆದ್ದಾರಿಯಿಂದ ಕೆಲ ಸಮಯಗಳ ಹಿಂದೆಯಷ್ಟೆ ರಾ. ಹೆದ್ದಾರಿಗೆ ಸೇರ್ಪಡೆಗೊಂಡ ಈ ರಸ್ತೆ ನಿರ್ವಹಣೆಯತ್ತ ಇಲಾಖೆ ನಿರ್ಲಕ್ಷé ವಹಿಸಿದೆ ಅನ್ನುವುದು ಸಾರ್ವಜನಿಕರ ಆರೋಪ.