ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾದರಿ ನಗರ ನಿರ್ಮಾಣ: ನಝೀರ್
Team Udayavani, Aug 29, 2018, 11:05 AM IST
ಉಳ್ಳಾಲ: ನಗರಸಭಾ ಚುನಾವಣೆಯಲ್ಲಿ 21 ವಾರ್ಡ್ಗಳಿಂದ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದು, ಪಕ್ಷಕ್ಕೆ ಬಹುಮತ ಬಂದರೆ ಭ್ರಷ್ಟಾಚಾರಮುಕ್ತ ಆಡಳಿತದೊಂದಿಗೆ ಉಳ್ಳಾಲ ನಗರಸಭೆಯನ್ನು ರಾಜ್ಯದಲ್ಲೇ ಮಾದರಿ ನಗರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜೆಡಿಎಸ್ ಮುಖಂಡ ನಝೀರ್ ಉಳ್ಳಾಲ್ ಹೇಳಿದರು.
ತೊಕ್ಕೊಟ್ಟುವಿನಲ್ಲಿ ಮಂಗಳವಾರ ನಡೆದ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ವರ್ಷದಲ್ಲೇ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ 24 ಗಂಟೆಯೂ ನೀರು ಪೂರೈಕೆ, ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ವಿಲೇವಾರಿ, ಒಳಚರಂಡಿ ಯೋಜನೆ ಸಮಗ್ರವಾಗಿ ಅನುಷ್ಠಾನ, ಯುವಜನತೆಗಾಗಿ ಆಟದ ಮೈದಾನ, ನಗರ ಸೌಂದರ್ಯಕ್ಕಾಗಿ ಈಜುಕೊಳ ನಿರ್ಮಾಣ, ಪ್ರವಾಸೋದ್ಯಮ ಉತ್ತೇಜನಕ್ಕೆ ಬೀಚ್ ಅಭಿವೃದ್ಧಿ ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ನಗರಸಭೆ ಸದಸ್ಯ ಫಾರೂಕ್ ಯು. ಎಚ್., ಜೆಡಿಎಸ್ ಕ್ಷೇತ್ರಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಹರೇಕಳ, ರಾಜ್ಯ ಸಮಿತಿ ಸದಸ್ಯ ಅಬೂಬಕ್ಕರ್ ನಾಟೆಕಲ್, ಯು.ಕೆ. ಮುಹಮ್ಮದ್ ಮುಸ್ತಫಾ ಆಸೀಫ್, ಅಬ್ದುಲ್ಲಾ ಮೊದಲಾದವರು ಉಪಸ್ಥಿತರಿದ್ದರು.