ಅಭಿವೃದ್ಧಿಗೆ ಕಾಯುತ್ತಿದೆ ಕಲ್ಲುಗುಂಡಿ-ಕೀಲಾರುಮೂಲೆ ರಸ್ತೆ
Team Udayavani, Nov 24, 2018, 10:29 AM IST
ಅರಂತೋಡು : ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಂಡಿ-ಕೀಲಾರು ರಸ್ತೆಯ ಡಾಮರು ಕಿತ್ತು ಹೋಗಿ ಜಲ್ಲಿ ಕಲ್ಲು, ಮಣ್ಣುಗಳೆದ್ದು ಹೋಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ರಸ್ತೆ ಗ್ರಾಮ ಪಂಚಾಯತ್ ಎದುರು ಹಾದು ಹೋಗುತ್ತಿದ್ದು, ನೆಲ್ಲಿಕುಮೇರಿ, ಹರಿಜನ ಕಾಲನಿ, ಸಿ.ಆರ್.ಸಿ. ಕಾಲನಿ, ಕೀಲಾರು ಮೂಲೆ ಮೊದಲಾದೆಡೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದಲ್ಲಿ ಸುಮಾರು 100ಕ್ಕೂ ಅಧಿಕ ಮನೆಗಳಿವೆ. ಸುಮಾರು ಒಂದು ಕಿ.ಮೀ. ರಸ್ತೆಗೆ ಕೆಲ ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು. ಈಗ ಡಾಮರು ಕಾಮಗಾರಿಯಾದ ರಸ್ತೆಯ ಡಾಮರು ಕೂಡ ಸಂಪೂರ್ಣ ಕಿತ್ತು ಹೋಗಿದೆ. ಸುಮಾರು 150 ಮೀಟರ್ನಷ್ಟು ಭಾಗಕ್ಕೆ ಮಾತ್ರ ಕಾಂಕ್ರೀಟ್ ಹಾಕಲಾಗಿದೆ.ಉಳಿದ ಭಾಗದ ರಸ್ತೆಯ ಡಾಮರು ಕಿತ್ತು ಹೋಗಿ ಜಲ್ಲಿ ಕಲ್ಲುಗಳು ಮೇಲೆದ್ದುಕೊಂಡಿದ್ದು ವಾಹನಗಳು ಸಂಚರಿಸುವಾಗ ಜಲ್ಲಿ ಕಲ್ಲುಗಳು ಚಕ್ರಗಳಿಗೆ ಸಿಲುಕಿ ಎಸೆಯಲ್ಪಡುತ್ತಿವೆ. ಇದು ಅಪಾಯಕಾರಿ.
ಕಾಂಕ್ರೀಟ್ ಹಾಕಿ: ಆಗ್ರಹ
ಇಲ್ಲಿ ದಿನನಿತ್ಯ ನೂರಾರು ಸಾರ್ವಜನಿಕರು, ಶಾಲಾ ಮಕ್ಕಳು ಹೋಗುತ್ತಿರುತ್ತಾರೆ. ದ್ವಿಚಕ್ರ ವಾಹನಗಳು ಆಟೋರಿಕ್ಷಾಗಳು ಹೆಚ್ಚಾಗಿ ಓಡಾಡುತ್ತವೆ. ರಸ್ತೆ ತುಂಬಾ ಹದಗೆಟ್ಟಿರುವುದರಿಂದ ಈ ರಸ್ತೆಗೆ ಕಾಂಕ್ರೀಟ್ ಹಾಕಬೇಕೆನ್ನುವ ಒತ್ತಾಯ ಕೇಳಿಬಂದಿದೆ. ಕನಿಷ್ಠ ಡಾಮರು ಆದರೂ ಹಾಕಿ ಸಂಚಾರಕ್ಕೆ ಯೋಗ್ಯ ರಸ್ತೆಯನ್ನಾಗಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಣ ಮೀಸಲಿರಿಸಲಾಗಿದೆ
ಈ ರಸ್ತೆ ನಾದುರಸ್ತಿಯಲ್ಲಿರುವುದು ನಮ್ಮ ಗಮನಕ್ಕೆ ಬಂದಿದೆ. ಅದರ ಅಭಿವೃದ್ದಿಗಾಗಿ ಉದ್ಯೋಗ ಖಾತರಿ ಯೋಜನೆಯಲ್ಲಿ ಹಣ ಮೀಸಲಿರಿಸಲಾಗಿದೆ. ರಸ್ತೆ ಶೀಘ್ರ ಅಭಿವೃದ್ದಿಯಾಗುತ್ತದೆ.
– ನಾಗರಾಜ್,
ಸಂಪಾಜೆ ಗ್ರಾ.ಪಂ. ಪಿಡಿಒ
ತತ್ಕ್ಷಣ ಕಾಮಗಾರಿ ನಡೆಸಿ
ಕಲ್ಲುಗುಂಡಿ-ಕೀಲಾರು ರಸ್ತೆ ಹೆಚ್ಚಿನ ಭಾಗ ನಾದುರಸ್ತಿಯಲ್ಲಿದೆ. ಇದರ ಅಭಿವೃದ್ಧಿ ಕಾರ್ಯ ತತ್ ಕ್ಷಣ ನಡೆಯಬೇಕು. ಈಗ ರಸ್ತೆ ದುರಸ್ತಿಯಿಲ್ಲದ ಪರಿಣಾಮ ಜನರು ಸಮಸ್ಯೆಗೊಳಾಗಿದ್ದಾರೆ. ಸಂಚಾರವೂ ಕಷ್ಟಕರವಾಗಿದೆ.
– ಯಶವಂತ್,
ಸ್ಥಳೀಯರು
ತೇಜೇಶ್ವರ್ ಕುಂದಲ್ಪಾಡಿ