ಲೋಕಾಯುಕ್ತ ಹತ್ಯೆಯತ್ನ: ಬಿಜೆಪಿ ಪ್ರತಿಭಟನೆ
Team Udayavani, Mar 11, 2018, 11:09 AM IST
ಮಹಾನಗರ: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಹತ್ಯೆಯತ್ನ ವಿರುದ್ಧ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಬಿಜೆಪಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ರಾಜ್ಯದಲ್ಲಿ ಗೂಂಡಾಗಳ ಅಟ್ಟಹಾಸ ಮೀತಿಮೀರುತ್ತಿದೆ. ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮೇಲೆ ಕೊಲೆಯತ್ನ ನಡೆದಿದೆ ಎಂದರೆ ಸಾಮಾನ್ಯ ಜನರ ಗತಿ ಏನು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಕಳೆದ ಐದು ವರ್ಷಗಳಿಂದ ಕರ್ನಾಟಕ ಗೂಂಡಾ ರಾಜ್ಯವಾಗಿ ಬದಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಕಾನೂನು ವ್ಯವಸ್ಥೆ ವಿಫಲ
ನಮ್ಮ ರಕ್ಷಣೆಗಾಗಿ ಸರಕಾರ, ಪೊಲೀಸ್ ಇಲಾಖೆ ಇದೆಯಾ ಎನ್ನುವ ಸಂಶಯ ನಮ್ಮನ್ನು ಕಾಡುತ್ತಿದೆ. ಶಾಲೆಗೆ, ಕೆಲಸಕ್ಕೆ ಹೋದ ಜನ ಮತ್ತೆ ಮನೆ ಸೇರುತ್ತಾರೆ ಎನ್ನುವ ನಂಬಿಕೆ ರಾಜ್ಯದ ಜನರಿಗೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೇಳಿದರು.
ಬಿಜೆಪಿ ಮಂಗಳೂರು ನಗರ ದಕ್ಷಿಣ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಈಗ ರಾಜ್ಯದಲ್ಲಿ ನ್ಯಾಯ ಮಾರ್ಗದಲ್ಲಿ ನಡೆದರೆ ಶಿಕ್ಷೆ. ಅನ್ಯಾಯ ಮಾರ್ಗದಲ್ಲಿ ನಡೆದರೆ ರಕ್ಷೆ ಎಂಬಂತಾಗಿದೆ. ಪ್ರಮಾಣಿಕರಾಗಿರುವುದು ತಪ್ಪೇ ಎನ್ನುವ ಪ್ರಶ್ನೆ ರಾಜ್ಯದ ಜನತೆಯಲ್ಲಿ ಕಾಡುತ್ತಿದೆ. ಕರ್ನಾಟಕ ಅಭಿವೃದ್ಧಿಯಲ್ಲಿ ಅಲ್ಲ ಗೂಂಡಾಗಿರಿಯಲ್ಲಿ ನಂ.1 ಸ್ಥಾನಪಡೆದಿದೆ ಎಂದರು.
ಕಾರ್ಪೋರೇಟರ್ಗಳಾದ ವಿಜಯ್ಕುಮಾರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಸುದರ್ಶನ್ ಮೂಡಬಿದಿರೆ, ವಸಂತ ಪೂಜಾರಿ, ಕಸ್ತೂರಿ ಪಂಜ, ಈಶ್ವರ್ ಕಟೀಲು, ಆನಂದ್ ಉಪಸ್ಥಿತರಿದ್ದರು.
ಭ್ರಷ್ಟ ಸರಕಾರ ನಮಗೆ ಬೇಕೆ
ಬಿಜೆಪಿ ಮುಖಂಡರಾದ ಸುಲೋಚನಾ ಭಟ್ ಮಾತನಾಡಿ, ಅಪರಾಧಿಗಳು ಜೈಲಿನಿಂದ ಬಿಡುಗಡೆಗೊಂಡರೆ ಅವರನ್ನು ಮೆರವಣಿಗೆ ಮೂಲಕ ಕೊಂಡೊಯ್ಯುವಂತಹ ಸ್ಥಿತಿಯನ್ನು ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರಕಾರ ನಿರ್ಮಾಣ ಮಾಡಿದೆ. ನ್ಯಾಯಮೂರ್ತಿಗಳ ಮೇಲೆಯೇ ಹತ್ಯೆ ಯತ್ನ ನಡೆಯುತ್ತದೆ ಎಂದಾದರೆ ಇಂತಹ ಭ್ರಷ್ಟ ಸರಕಾರ ನಮಗೆ ಬೇಕೆ ಎಂದು ಪ್ರಶ್ನಿಸಿದರು.