ಮುಚ್ಚಾರು ಗ್ರಾ.ಪಂ.: ಅಂತರ್ಜಾಲ ಸೇವೆ ಕಡಿತ
Team Udayavani, May 25, 2018, 10:10 AM IST
ಮುಚ್ಚಾರು: ಇಲ್ಲಿನ ಗ್ರಾಮ ಪಂಚಾಯತ್ನ ಅಂತರ್ಜಾಲ ಸೇವೆಯು ಮೇ 21ರಿಂದ ಕಡಿತವಾಗಿದ್ದು, ಗ್ರಾ.ಪಂ.ನ ಆನ್ಲೈನಿಂದ ಸಿಗುವ ಸೇವಾ ಸೌಲಭ್ಯಗಳು ನಿಂತು ಹೋಗಿವೆ. ಇದರಿಂದಾಗಿ ಗ್ರಾಮದ ಜನರಿಗೆ ತೊಂದರೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮುಚ್ಚಾರು ಗ್ರಾ. ಪಂ. 2008-09 ರಿಂದ ಗ್ರಾಮಸ್ಥರಿಗೆ ಅಂತರ್ಜಾಲದಿಂದ ಹಲವು ಸೇವೆಗಳನ್ನು ನೀಡುತ್ತಾ ಬಂದಿದೆ. ಪಂಚತಂತ್ರ, ಮಿಂಚಂಚೆ, ಗಾಂಧಿ ಸಾಕ್ಷಿ ಕಾಯಕ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಕಾಲ, ಇ-ಸ್ವತ್ತು, ಪಡಿತರ ಚೀಟಿ, ಬಾಪೂಜಿ ಸೇವಾ ಕೇಂದ್ರ ಹಾಗೂ ಇತರ ಸೇವೆಗಳನ್ನು ಗ್ರಾಮ ಪಂಚಾಯತ್ನಲ್ಲಿ ನೀಡಲಾಗುತ್ತಿತ್ತು. ಈ ಸೇವೆಗಳು ಹಾಗೂ ದೂರವಾಣಿ ಸೇವೆ ಸೇರಿ ಪ್ರತಿ ತಿಂಗಳು ಸರಾಸರಿ 4,364 ರೂ. ಪಂಚಾಯತ್ ಪಾವತಿಸುತ್ತಿದೆ.
ಗ್ರಾ.ಪಂ. ನಲ್ಲಿ ಅಂತರ್ಜಾಲ ವ್ಯವಸ್ಥೆ ಉತ್ತಮ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಒಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲು ಕ್ರಮಕೈಗೊಂಡಿದೆ ಹಾಗೂ ಒಎಫ್ಸಿ ದರಗಳು ತುಂಬ ದುಬಾರಿ ಆಗಿದೆ. ಯೋಜನೆ ದರ ರೂ.1,499 ನಿಯಮಗಳ ಅವಕಾಶಗಳಿಂದ ಅಧಿಕವಾಗಿರುತ್ತದೆ.
ಅಧಿಕ ಬಿಲ್ಗೆ ಅವಕಾಶ ಇಲ್ಲ
ಕರ್ನಾಟಕ ಗ್ರಾ.ಪಂ. ಆಯವ್ಯಯ ಮತ್ತು ಲೆಕ್ಕ ನಿಯಮಗಳ ಪ್ರಕಾರ 2006ರಲ್ಲಿ 1,000 ರೂ. ಗಿಂತ ಹೆಚ್ಚು ಬಿಲ್ಗೆ ಅವಕಾಶ ವಿಲ್ಲ. ಲೆಕ್ಕ ಪರಿಶೋಧನೆಯಲ್ಲಿ ದತ್ತಾಂಶ ಮೊತ್ತ 1,000 ರೂ. ಅನಂತರ ಹೆಚ್ಚಿನ ಮೊತ್ತವನ್ನು ಅಧ್ಯಕ್ಷರು, ಕಾರ್ಯದರ್ಶಿ, ಪಿಡಿಒ ದೂರವಾಣಿ ವೆಚ್ಚವನ್ನು ಪಂಚಾಯತ್ ನಿಧಿಗೆ ಜಮೆ ಮಾಡಲು ಅದೇಶಿಸಿದೆ. ಈ ನಿಯಮ 2006ರಲ್ಲಿ ತಯಾರಾಗಿದ್ದು ಆಗ ಗ್ರಾಮ ಪಂಚಾಯತ್ ನಲ್ಲಿ ಈ ಎಲ್ಲ ಸೌಲಭ್ಯಗಳು ಸಿಗುತ್ತಿರಲಿಲ್ಲ.
ಈ ಬಗ್ಗೆ ಮುಚ್ಚಾರು ಪಂ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿ ಕಾರಿಗಳ ಮೂಲಕ ಜಿಲ್ಲಾ ಪಂಚಾಯತ್ಗೆ ಮನವಿ ಮಾಡಲಾಗಿದೆ.
ಈ ಬಗ್ಗೆ ಕ್ರಮ ತೆಗೆದುಕೊಳ್ಳದ ಕಾರಣ ಒಟ್ಟು ಬಿಲ್ 12,097 ರೂ. ಎ. 30ಕ್ಕೆ ಆಗಿದೆ. ಇದನ್ನು ಕಟ್ಟದ ಕಾರಣ ಬಿಎಸ್ಎನ್ಎಲ್ ಸಂಸ್ಥೆ ಮೇ 21ರಂದು ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿದೆ.
ವರದಿ ಸಲ್ಲಿಕೆ
ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವರದಿಯನ್ನು ಜಿ.ಪಂ. ಗೆ ಮೇ 22ರಂದು ಸಲ್ಲಿಸಿದ್ದಾರೆ. ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಇದರಿಂದ ಜನರಿಗೆ ಆಗುವ ಸಮಸ್ಯೆಯ ಬಗ್ಗೆ ಚರ್ಚಿಸಲಾಗಿದೆ. ಮುಂದಿನ ಅಗತ್ಯ ಕ್ರಮವನ್ನು ಸರಕಾರ ನಿರ್ಧರಿಸಬೇಕು.
– ವೀರಪ್ಪ ಗೌಡ
ಗ್ರಾ. ಪಂ. ಅಧ್ಯಕ್ಷ