ಪಿಲಿಕುಳ: ಅಳಿವಿನಂಚಿನಲ್ಲಿರುವ ಮತ್ಸ್ಯಪ್ರಬೇಧಗಳ ರಕ್ಷಣೆ
Team Udayavani, Jun 29, 2018, 10:36 AM IST
ಮಹಾನಗರ: ಪಶ್ಚಿಮಘಟ್ಟದಲ್ಲಿ ಮೀನುಗಳು ವಿನಾಶದ ಅಂಚಿನಲ್ಲಿದ್ದು. ಅವುಗಳ ರಕ್ಷಣೆ ಮಾಡುವ ಸಂಬಂಧವಾಗಿ ನಗರದ ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಮತ್ಸ್ಯಪ್ರಬೇಧಗಳ ಸಂತಾನೋತ್ಪತ್ತಿ ಮತ್ತು ಅಕ್ವೇರಿಯಂ ಸ್ಥಾಪಿಸಿ ಅವುಗಳ ಮರಿಗಳನ್ನು ಬೆಳ್ತಂಗಡಿ ತಾಲೂಕಿನ ನಾರಾವಿ ಪ್ರದೇಶದ ಕೆರೆಗಳಿಗೆ ಗುರುವಾರ ಬಿಡಲಾಯಿತು.
ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್ಗಾರ್ಡನ್ನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪಶ್ಚಿಮ ಘಟ್ಟದ ಅಳಿವಿನ ಅಂಚಿನಲ್ಲಿರುವ ಮತ್ಸ್ಯಪ್ರಬೇಧಗಳ ಸಂತಾನೋತ್ಪತ್ತಿ ಮತ್ತು ಅಕ್ವೇರಿಯಂ ಸ್ಥಾಪನೆ ಶೀರ್ಷಿಕೆಯಡಿಯಲ್ಲಿ 98 ಲಕ್ಷ ರೂ. ಅನುದಾನದಲ್ಲಿ ಅಕ್ವೇರಿಯಂನ್ನು ಈಗಾಗಲೇ ಸ್ಥಾಪಿಸಲಾಗಿದೆ. ಅಕ್ವೇರಿ ಯಂನಲ್ಲಿ ಸುಮಾರು 22 ಜಾತಿಯ ಮೀನುಗಳನ್ನು ಸಾಕಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶದಲ್ಲಿ ಒಂದಾದ ವಿನಾಶದ ಅಂಚಿನಲ್ಲಿರುವ ಕಿಜಾನ್, ಮಲಬಾರ್ ಡೈನೊ, ಚಂದ್ರಡಿಕೆ ಮುಂತಾದ ಇತರೆ ಮೀನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂತಾನೋತ್ಪತ್ತಿ ಮಾಡಿ ಅವುಗಳ ಮರಿಗಳನ್ನು ಪಶ್ಚಿಮ ಘಟ್ಟದ ಮೂಲ ಅವಾಸ ಸ್ಥಾನಕ್ಕೆ ಕೊಂಡೊಯ್ದು ಬಿಡಲಾಗಿದೆ.
ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಅವರು ಮಾತನಾಡಿ, ಮೊದಲನೇ ಹಂತದಲ್ಲಿ ಕಲ್ಮೊರಂಟೆ, ಓಂಟಿತರು, ಚಂದ್ರಡಿಕೆ, ಕಿಜನ್, ಡೈನೋಬಾರ್ಬ್, ಭಾರ್ತಿ ಎಂಬ ಐದು ತಳಿಯ ಸುಮಾರು 1,500 ಸಾವಿರಕ್ಕೂ ಹೆಚ್ಚಿನ ಮೀನು ಮರಿಯನ್ನು ನಾರಾವಿಯ ಸಂರಕ್ಷಿತ ಅರಣ್ಯ ಪ್ರದೇಶಗಳ ಕೆರೆಗಳಲ್ಲಿ ಬಿಡಲಾಗಿದೆ. ಸದ್ಯ ಪಿಲಿಕುಳದಲ್ಲಿ 30 ಜಾತಿಯ ಮೀನುಗಳಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚಿನ ಆಕ್ವೇರಿಯಂ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ತಿಳಿಸಿದರು.