ದೃಷ್ಟಿ ಕೈಕೊಟ್ಟಿತು, ಅಡಿಕೆ ಸುಲಿವ ಕಾಯಕ ಕೈಹಿಡಿಯಿತು!
Team Udayavani, May 29, 2018, 3:30 AM IST
ಆಲಂಕಾರು: ಎರಡೂ ಕಣ್ಣುಗಳ ದೃಷಿಯನ್ನು ಕಳೆದುಕೊಂಡಿದ್ದರೂ ತನ್ನ ಅನ್ನವನ್ನು ತಾನೇ ಸಂಪಾದಿಸುವುದಲ್ಲದೆ ಸಂಸಾರವನ್ನು ಯಶಸ್ವಿಯಾಗಿ ಮುನ್ನಡೆವ ಜತೆಗೆ ಮಗನಿಗೆ ಉತ್ತಮ ವಿದ್ಯಾಭ್ಯಾಸವನ್ನೂ ನೀಡುತ್ತಿರುವ ವಿಶಿಷ್ಟ ವ್ಯಕ್ತಿಯೊಬ್ಬರು ಆಲಂಕಾರಿನಲ್ಲಿದ್ದಾರೆ. ಇವರು 44 ವರ್ಷ ವಯಸ್ಸಿನ ಚೀಂಕ್ರ. ಪುತ್ತೂರು ತಾಲೂಕಿನ ಆಲಂಕಾರು ಗ್ರಾಮದ ನೆಕ್ಕರೆ ನೀರಕಟ್ಟೆ ನಿವಾಸಿ. ತನಗಿರುವ ಅಂಧತ್ವಕ್ಕೆ ತಕ್ಕುದಾದ ಅಡಿಕೆ ಸುಲಿಯುವ ಕಾಯಕ ನಿರ್ವಹಿಸಿ ತನ್ನ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಪತ್ನಿ ಲಲಿತಾ ಮತ್ತು ಒಬ್ಬ ಪುತ್ರನೊಂದಿಗೆ 25 ಸೆಂಟ್ಸ್ ಜಾಗದಲ್ಲಿ ಒಂದು ಪುಟ್ಟ ಮನೆ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ತನ್ನ ದುಡಿಮೆಯಿಂದಲೇ ಮಗನಿಗೆ ಪಿಯುಸಿ ಹಾಗೂ ಕಂಪ್ಯೂಟರ್ ಶಿಕ್ಷಣ ಕೊಡಿಸಿದ್ದಾರೆ.
ದಿನಕ್ಕೆ 40 ಕಿಲೋ ಅಡಿಕೆ
ಆಲಂಕಾರು ಹಾಗೂ ಸುತ್ತಮುತ್ತಲಿನ ಮನೆಗಳಿಗೆ ತನ್ನ ಮಗನ ಆಸರೆಯೊಂದಿಗೆ ನಡೆದು ಅಥವಾ ಸೈಕಲಿನಲ್ಲಿ ಹೋಗಿ ಅಡಿಕೆ ಸುಲಿಯುತ್ತಾರೆ. ದಿನವೊಂದಕ್ಕೆ 30-40 ಕಿಲೋ ಅಡಿಕೆ ಸುಲಿದು ಸುಮಾರು 200 ರೂ.ಗಳಷ್ಟು ಸಂಪಾದಿಸುತ್ತಾರೆ. ಚೀಂಕ್ರ ಹುಟ್ಟು ಕುರುಡರಲ್ಲ. ಮನೆ ಹತ್ತಿರದ ಕಲ್ಲಿನ ಕೋರೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. 20 ವರ್ಷಗಳ ಹಿಂದೆ ಕಣ್ಣಿನ ನರದೌರ್ಬಲ್ಯದಿಂದ ಒಂದು ಕಣ್ಣಿನ ದೃಷ್ಟಿ ಕ್ಷೀಣಿಸುತ್ತಾ ಬಂತು. ತತ್ ಕ್ಷಣ ತಜ್ಞ ವೈದ್ಯರ ಚಿಕಿತ್ಸೆ ಪಡೆಯಲು ಆರ್ಥಿಕ ಸಮಸ್ಯೆ ಅಡ್ಡಿಯಾಯಿತು. ಪರಿಣಾಮವಾಗಿ ಒಂದು ಕಣ್ಣಿನ ದೃಷ್ಟಿಯನ್ನು ಕಳೆೆದುಕೊಂಡರು. ಮುಂದೆ ಇದಕ್ಕಾಗಿ ಶಸ್ತ್ರಚಿಕಿತ್ಸೆ ನಡೆಸಿದರೂ ಪರಿಣಾಮವಾಗಲಿಲ್ಲ. ಕ್ರಮೇಣ ಇನ್ನೊಂದು ಕಣ್ಣಿನ ದೃಷ್ಟಿ ಸಾಮರ್ಥ್ಯವೂ ನಶಿಸಿತು. ಅಂಧತ್ವದ ನಡುವೆ ಸಂಸಾರದ ಹೊರೆ ಹೊತ್ತುಕೊಂಡ ಚಿಂಕ್ರಣ್ಣ ಜೀವನ ನಿರ್ವಹಣೆಗೆ ಆರಿಸಿಕೊಂಡದ್ದು ಅಡಿಕೆ ಸುಲಿಯುವ ಕೆಲಸ. ತನ್ನ ಕೈ ಚಲನೆಯನ್ನು ಅಂದಾಜಿಸಿಕೊಂಡು ಅವರು ಅಡಿಕೆ ಸುಲಿಯುವ ಕೆಲಸ ಬಹಳ ಅಚ್ಚುಕಟ್ಟು. ಹೀಗಾಗಿಯೇ ಪರಿಸರದ ಅಡಿಕೆ ಬೆಳೆಗಾರರಿಗೆ ಇವರೇ ಖಾಯಂ ಆಗಿದ್ದಾರೆ. ಮಡದಿ ಬೀಡಿ ಕಟ್ಟಿ ಸಂಸಾರದ ಭಾರಕ್ಕೆ ಹೆಗಲು ಕೊಡುತ್ತಿದ್ದಾರೆ, ಮಗನೂ ಆದಾಯಗಳಿಸುತ್ತಿದ್ದು ಸಾಥ್ ನೀಡಿದೆ.
ಸರಕಾರಿ ಸವಲತ್ತು ಇಲ್ಲ
ಇಪ್ಪತ್ತು ವರ್ಷಗಳಿಂದ ಅಂಧತ್ವ ಹೊಂದಿದ್ದರೂ 4 ವರ್ಷಗಳಿಂದ ಸಿಗುತ್ತಿರುವ ಅಂಗವಿಕಲ ವೇತನ ಬಿಟ್ಟರೆ ಸರಕಾರದ ಯಾವುದೇ ಯೋಜನೆಗಳು ಇವರ ಕೈಸೇರಿಲ್ಲ. ಸುಶಿಕ್ಷಿತರು ಸೂಕ್ತ ಉದ್ಯೋಗ ಲಭಿಸದೆ ಸೋಮಾರಿಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಚೀಂಕ್ರ ಅವರ ಸ್ವಾವಲಂಬಿ ಬದುಕು ಸಮಾಜಕ್ಕೆ ಮಾದರಿಯಾಗಿದೆ.
— ಸದಾನಂದ ಆಲಂಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ