ಸಾರ್ವಜನಿಕರಿಗೆ ಎದುರಾಗಿದೆ ಸಂಕಷ್ಟ
Team Udayavani, Apr 21, 2018, 11:48 AM IST
ಕೈಕಂಬ: ಗುರುಪುರ ಕೈಕಂಬದ ಜಂಕ್ಷನ್ನಲ್ಲಿ ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಶೌಚಾಲಯ ನೀರಿಲ್ಲದೇ 15ದಿನಗಳಿಂದ ಬೀಗ ಮುದ್ರೆ ಬೀಳುವಂತಾಗಿದೆ. ಇದರಿಂದ ಸಾರ್ವಜನಿಕರಿಗೆ ಸಂಕಷ್ಟ ಎದುರಿಸುವಂತಾಗಿದೆ. ಗುರುಪುರ ಕೈಕಂಬ ನಾಲ್ಕು ಗ್ರಾಮ ಪಂಚಾಯತ್ನ ಸಂಗಮವಾಗಿದೆ. ಪಡು ಪೆರಾರ, ಗಂಜಿಮಠ, ಗುರುಪುರ ಮತ್ತು ಕಂದಾವರ ಗ್ರಾಮ ಪಂಚಾಯತ್ನ ವ್ಯಾಪ್ತಿ ಇಲ್ಲಿ ಕಂಡು ಬರುತ್ತದೆ.
ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿ ಇದ್ದರೂ ಇಲ್ಲಿ ಸಾರ್ವಜನಿಕ ಶೌಚಾಲಯ ಮಾತ್ರ ಎರಡು. ಒಂದು ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನೊಂದು ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ. ಪಡುಪೆರಾರ ಗ್ರಾಮ ಪಂಚಾಯತ್ ನ ಈ ಶೌಚಾಲಯ ಬಜಪೆ, ಮಂಗಳೂರು, ಮೂಡಬಿದಿರೆ ಬಸ್ ನಿಲ್ದಾಣಕ್ಕೆ ಹೆಚ್ಚು ಸಮೀಪವಾಗಿದ್ದು, ಸಾರ್ವಜನಕರು ಹೆಚ್ಚಾಗಿ ಇದನ್ನು ಉಪಯೋಗಿಸುತ್ತಿದ್ದಾರೆ.
ನೀರು ಸರಬರಾಜು ಸ್ಥಗಿತ
ಈ ಶೌಚಾಲಯದ ನಿರ್ವಹಣೆಯನ್ನು ಗ್ರಾಮ ಪಂಚಾಯತ್ ಶುಚಿ ಇಂಟರ್ ನ್ಯಾಷನಲ್ ಬೆಂಗಳೂರು ಇವರಿಗೆ ಗುತ್ತಿಗೆ ಮೂಲಕ ನೀಡಲಾಗಿದೆ. ಶೌಚಾಲಯಕ್ಕೆ ನೀರನ್ನು ಪಡುಪೆರಾರ ಗ್ರಾಮ ಪಂಚಾಯತ್ ನೀಡುತ್ತಿತ್ತು, ಕಳೆದ 15ದಿನಗಳಿಂದ ನೀರು ಸರಬರಾಜು ಆಗದೇ ಇಲ್ಲಿ ಶೌಚಾಲಯವನ್ನು ನಿರ್ವಹಿಸಲು ಸಾಧ್ಯವಾಗದೇ ಬೀಗವನ್ನು ಹಾಕಲಾಗಿದೆ.
ಪರಿಹಾರ ಕೈಗೊಳ್ಳಲಾಗುವುದು
ಈ ಶೌಚಾಲಯಕ್ಕೆ ಕಿನ್ನಿಕಂಬಳದ ಬಳಿಯ ಕೊಳವೆ ಬಾವಿಯಿಂದ ನೀರು ಸರಬರಾಜು ಅಗುತ್ತಿತ್ತು. ಈಗ ಅದರಲ್ಲಿ ನೀರಿಲ್ಲದ ಕಾರಣ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಶುಚಿ ಇಂಟರ್ ನ್ಯಾಶನಲ್ ಬೆಂಗಳೂರು ಸಂಸ್ಥೆಯವರಲ್ಲಿ ಮಾತನಾಡಿದ್ದೇನೆ. ಟ್ಯಾಂಕರ್ ಮೂಲಕ ನೀರು ಹಾಕುವ ಬಗ್ಗೆ ಚಿಂತನೆ ಇದೆ. ಇಲ್ಲಿಗೆ ಬೇರೆ ಕೊಳವೆ ಬಾವಿಯ ಅವಶ್ಯಕತೆ ಇದೆ. ಸದ್ಯದಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
–ಭೋಗಮಲ್ಲಣ್ಣ
ಪ್ರಭಾರ ಪಿಡಿಒ
ಸಾರ್ವಜನಿಕ ಸಳದಲ್ಲಿ ಮೂತ್ರಶಂಕೆ
ಈ ಹಿಂದೆ ಹೆಚ್ಚಿನವರು ಈ ಶೌಚಾಲಯದ ಬಳಕೆ ಮಾಡುತ್ತಿದ್ದಾರೆ. ಆದರೆ ಈಗ ಖಾಸಗಿ ಶೌಚಾಲಯಕ್ಕೆ ಹೋಗುತ್ತಿದ್ದಾರೆ. ಕೆಲವರು ಸಾರ್ವಜನಿಕ ಸ್ಥಳದಲ್ಲೇ ಮೂತ್ರಶಂಕೆ ಮಾಡುತ್ತಿದ್ದಾರೆ.
-ಉದಯ
ರಿಕ್ಷಾ ಚಾಲಕರು
ಸುಬ್ರಾಯ ನಾಯಕ್ ಎಕ್ಕಾರು