ಸಂಘಟನೆಯಿಂದ ಗ್ರಾಮ ಅಭಿವೃದ್ಧಿ: ಸಂಜೀವ ರೈ
Team Udayavani, Feb 26, 2017, 2:58 PM IST
ಬಡಗನ್ನೂರು: ಸಂಘಟನೆಯಿಂದ ಗ್ರಾಮದ ಅಭಿವೃದ್ಧಿಯ ಸಾಧ್ಯ. ಸಂಘಟನೆಯಲ್ಲಿ ಪಾರದರ್ಶಕ ಇರಬೇಕು ಎಂದು ಕುವೆ ಶಾಸ್ತರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂಜೀವ ರೈ ಕೆ.ಪಿ. ವಿಷಾದ ವ್ಯಕ್ತಪಡಿಸಿದರು.
ಪಟ್ಟೆ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಪುತ್ತೂರಿನ ಮರಾಠಿ ಸಮಾಜ ಸೇವಾ ಸಂಘ (ಕೊಂಬೆಟ್ಟು) ದ ಗ್ರಾಮೀಣ ಶಾಖೆ ಬಡಗನ್ನೂರು ಪಡುಮಲೆ ಮರಾಠಿ ಸಮಾಜ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಒಳ್ಳೆಯ ವಿಚಾರಗಳ ಬಗ್ಗೆ ಚಿಂತನೆ ಮಾಡಬೇಕು. ದೇಶದಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಆದರೆ ರಾಜಕೀಯ ವ್ಯವಸ್ಥೆಯಿಂದ ಕ್ರೀಡಾ ಪ್ರತಿಭೆ ಕುಂಠಿತವಾಗಿದೆ ಎಂದ ಅವರು, ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಳ್ಳಲು ಸಾಧ್ಯ ಎಂದು ಹೇಳಿದರು.
ಪಡುಮಲೆ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಕೃಷ್ಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಮ.ಸ.ಸೇ. ಸಂಘದ ಸಂಘಟನ ಕಾರ್ಯದರ್ಶಿ ರಾಜಾರಾಮ್ ಮೊಟ್ಟೆತ್ತಡ್ಕ, ಈಶ್ವರಮಂಗಲ ಬಿಎಸ್ಸೆನ್ನೆಲ್ನ ಹಿರಿಯ ಕಚೇರಿ ಸಹಾಯಕ ಕೃಷ್ಣಪ್ಪ ನಾಯ್ಕ ಮಾತನಾಡಿದರು. ಜಿಲ್ಲಾಉತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಮೋನಪ್ಪ ಎಂ. ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟು ಭವ್ಯಾ ತುಳಸಿಯಡ್ಕ ಅವರನ್ನು ಸಮ್ಮಾನಿಸಲಾಯಿತು.
ಸಮ್ಮಾನ
ಶಾರದಾ ರಾಜಾರಾಮ್ ಮೊಟ್ಟೆತ್ತಡ್ಕ, ಸಮಿತಿ ಕೋಶಾಧಿಕಾರಿ ಅಪ್ಪಯ್ಯ ನಾಯ್ಕ, ಕ್ರೀಡಾ ಕಾರ್ಯದರ್ಶಿ ನಾರಾಯಣ ನಾಯ್ಕ ಪೇರಾಲು ಉಪಸ್ಥಿತರಿದ್ದರು. ಪಟ್ಟೆ, ತಲೆಂಜಿ, ಚಂದುಕೂ…, ಮೈಂದನಡ್ಕ ಮೋಡಿಕೆ, ಮೂಂಡೋಲೆ ಅಂಬಟೆಮೂಲೆ ವಠಾರ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಭಾಗವಹಿಸಿದರು.
ಸಮಿತಿ ಸದಸ್ಯರಾದ ಜಯಲಕ್ಷ್ಮೀ ಸ್ವಾಗತಿಸಿದರು. ವಿಲಾಸಿನಿ ಸೋಣಂಗೇರಿ ವಂದಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ ನೀಲಗಿರಿ ಕಾರ್ಯಕ್ರಮ ನಿರೂಪಿಸಿದರು.