ಪಣಂಬೂರು ಬೀಚ್ಗೆ ರಸ್ತೆ ಯಾವುದಯ್ಯ?
Team Udayavani, Dec 2, 2018, 10:41 AM IST
ಪಣಂಬೂರು : ಇಲ್ಲಿಯ ಬೀಚ್ ಒಂದು ಪ್ರಸಿದ್ಧ ಪ್ರವಾಸಿತಾಣ. ಮಂಗಳೂರು ಪ್ರವಾಸಕ್ಕೆ ಬಂದ ಹೆಚ್ಚಿನವರು ಪಣಂಬೂರು ಬೀಚ್ ವೀಕ್ಷಿಸಿಯೇ ತೆರಳುವುದು ರೂಢಿ. ಇನ್ನು ಸ್ಥಳೀಯರು, ನಿವೃತ್ತರು ರವಿವಾರ ಒಂದು ಬಾರಿಯಾದರೂ ಬೀಚ್ಗೆ ತೆರಳಿ ತಂಗಾಳಿಯಲ್ಲಿ ಒಂದಿಷ್ಟು ಸಮಯ ಕಳೆಯುತ್ತಾರೆ. ಇದೀಗ ಬೀಚ್ ರಸ್ತೆ ಎಲ್ಲಿದೆ ಎಂದು ಹುಡುಕಡುವ ಸ್ಥಿತಿ ಎದುರಾಗಿದೆ.
ಯಾಕೆಂದರೆ ನಿತ್ಯ ಇಲ್ಲಿ ಘನ ಲಾರಿಗಳ ಸರತಿ ಸಾಲು ಕಾಣುತ್ತದೆ. ಪಣಂಬೂರು ನಂದನೇಶ್ವರ ದೇವಸ್ಥಾನದ ರಸ್ತೆ ಹಾಗೂ ಮೀನಕಳಿಯ ರಸ್ತೆಯುದ್ದಕ್ಕೂ ಇದು ಕಾಣ ಸಿಗುತ್ತದೆ. ಎರಡೂ ಕಡೆ ಲಾರಿಗಳು ನಿಲ್ಲುವುದರಿಂದ ಮಧ್ಯದಲ್ಲಿ ಬಹು ಕಷ್ಟದಿಂದ ಪ್ರವಾಸಿಗರ ಕಾರು ಚಲಿಸಬೇಕಾಗುತ್ತದೆ. ಸ್ವಲ್ಪ ಎಡವಟ್ಟಾದರು ಅಪಾಯ ಖಚಿತ.
ಇಲ್ಲಿನ ರಸ್ತೆಯುದ್ದ ಕಪ್ಪು ಬಣ್ಣದ ಹುಡಿ ನಮ್ಮ ನಮ್ಮನ್ನು ಸ್ವಾಗತಿಸುತ್ತದೆ. ಸ್ಥಳೀಯ ವಿದ್ಯುತ್ ಕಂಪೆನಿಗಳಿಗೆ ಬಂದರು ಮೂಲಕ ಕಲ್ಲಿದ್ದಲು ಬರುತ್ತಿದ್ದು, ಇದು ಲಾರಿಗಳ ಮೂಲಕ ರಾಜ್ಯದ ವಿವಿಧೆಡೆ ಸಾಗಾಟವಾಗುತ್ತದೆ. ಹೀಗಾಗಿ ಸ್ವಲ್ಪ ಮಟ್ಟಿಗೆ ಶುಚಿತ್ವದ ಕೊರತೆಯೂ ಕಾಡುತ್ತಿದೆ.
ಪ್ರವಾಸಿಗರ ಆಗಮನಕ್ಕೆ ಸಮಸ್ಯೆ
ಇದೀಗ ಬಂದರಿನ ಚಟುವಟಿಕೆ ಹೆಚ್ಚಾದ ಕಾರಣ ಲಾರಿಗಳ ಸಂಖ್ಯೆಯೂ ಅಧಿಕವಾಗಿದೆ. ಬೈಕಂಪಾಡಿಯಾಗಿ ಬಂದರಿನ ಕೆ.ಕೆ. ಗೇಟ್ವರೆಗೆ ಹೊಸ ಕಾಂಕ್ರೀಟ್ ಹಾಕಲಾದ ಚತುಷ್ಪಥಗೊಂಡ ರಸ್ತೆ ನಿರ್ಮಾಣವಾಗುತ್ತಿದೆ. ಇದರ ಮೂಲಕ ಲಾರಿಗಳು ಆಗಮಿಸುತ್ತಿದ್ದು ಇತ್ತ ಪಣಂಬೂರು ಬೀಚ್ ಮೂಲಕವೂ ಲಾರಿಗಳು ಬರುತ್ತಿವೆ. ಹೀಗಾಗಿ ಬೀಚ್ಗೆ ಪ್ರವಾಸಿಗರ ಆಗಮನಕ್ಕೆ ಸಮಸ್ಯೆಯಾಗಿದೆ.
ಶಾಶ್ವತವಾಗಿ ಅಭಿವೃದ್ಧಿಪಡಿಸಿ
ಹೆದ್ದಾರಿ 66ರ ಪಣಂಬೂರು ದೇವಸ್ಥಾನದಿಂದ ನೇರವಾಗಿ ಬೀಚ್ ಗೆ ತಲುಪಬಹುದಾಗಿದೆ. ಇಲ್ಲಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಸುಮಾರು ಮುಕ್ಕಾಲು ಕಿ.ಮೀ. ನಡೆದುಕೊಂಡೇ ಬೀಚ್ ತಲುಪಬೇಕಿದೆ. ಸರಕಾರದಿಂದ ನರ್ಮ್ ಬಸ್ ಓಡಾಟಕ್ಕೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಸ್ಪಂದನೆ ದೊರಕಿಲ್ಲ. ಪರ್ಯಾಯ ರಸ್ತೆ ಮಾಡಿದರೂ ಬಲು ದೂರ. ಹೀಗಾಗಿ ಟ್ರಕ್ ಓಡಾಟಕ್ಕೆ ಚತುಷ್ಪಥ ರಸ್ತೆಯನ್ನು ಪೂರ್ಣಗಳಿಸಿ ಬೀಚ್ ರಸ್ತೆಯನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸಿದಲ್ಲಿ ಮಾಲಿನ್ಯ ಮುಕ್ತವಾಗಿ ಪಣಂಬೂರು ಬೀಚ್ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ.
ನಿಯಂತ್ರಣಕ್ಕೆ ಕ್ರಮ
ಎನ್ಎಂಪಿಟಿ ಕೆ.ಕೆ. ಗೇಟ್ ಭಾಗದಲ್ಲಿ ಸರಕು ನಿರ್ವಹಿಸುತ್ತಿದೆ. ಹೀಗಾಗಿ ಇಲ್ಲಿ ಟ್ರಕ್ ಓಡಾಟ ನಿಯಂತ್ರಣಕ್ಕೆ ಎನ್ ಎಂಪಿಟಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಪರಿಸರ ಸಹ್ಯ ವಾತಾವರಣ ನಿರ್ಮಿಸಲು ಮಂಡಳಿ ಕ್ರಮ ಕೈಗೊಳ್ಳುತ್ತಾ ಬಂದಿದೆ ಎಂದು ಎನ್ಎಂಪಿಟಿ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ಟ್ರಕ್ ಯಾರ್ಡ್ ಅಗತ್ಯ
ಈ ಭಾಗದಲ್ಲಿ ಪ್ರತ್ಯೇಕ ಟ್ರಕ್ ಯಾರ್ಡ್ ನಿರ್ಮಿಸಿದರೆ ಈ ಸಮಸ್ಯೆಯನ್ನು ಬಗೆ ಹರಿಸಬಹುದು. ರೈಲ್ವೇ ಗೋಡೌನ್ ಹಾಗೂ ಎನ್ಎಂಪಿಟಿ ಗೋದಾಮು ಭಾಗಗಳಲ್ಲಿ ವಿಶಾಲ ಜಾಗವಿದ್ದು, ಇಲ್ಲಿ ಟ್ರಕ್ ಯಾರ್ಡ್ ರಚಿಸಿದರೆ ರಸ್ತೆ ಬದಿ ಲಾರಿಗಳ ನಿಲುಗಡೆಯನ್ನು ತಪ್ಪಿಸಬಹುದಾಗಿದೆ. ಇದಲ್ಲದೆ ಕಲ್ಲಿದ್ದಲನ್ನು ಕಂಟೈನರ್ ಮೂಲಕ ಸಾಗಿಸಲು ಉಪಕ್ರಮ ಕೈಗೊಂಡಲ್ಲಿ ಇಲ್ಲಿ ನೆಲದ ಮೇಲೆ ಬೀಳುವ ಕಲ್ಲಿದ್ದಲು ಹುಡಿಯನ್ನು ನಿಯಂತ್ರಿಸಬಹುದು. ಇದರಿಂದ ಬೀಚ್ ರಸ್ತೆಯಲ್ಲಿ ಪ್ರವಾಸಿಗರು ನಿರಾಳವಾಗಿ ಸಂಚರಿಸಬಹುದು.
– ಯತೀಶ್ ಬೈಕಂಪಾಡಿ,ಸಿಇಒ
ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆ
ವಿಶೇಷ ವರದಿ