ಬಂಡಾಯ ನೆಲ ನರಗುಂದದಲ್ಲಿ ಕನ್ನಡ ನಾಡು-ನುಡಿ ಕಂಪು
Team Udayavani, Jul 28, 2018, 4:26 PM IST
ನರಗುಂದ: ಬಂಡಾಯ ನಾಡು ಖ್ಯಾತಿಯ ನರಗುಂದ ನೆಲದಲ್ಲೀಗ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಂಪು ಹೊರಸೂಸಲಿದೆ. ಸಾಹಿತ್ಯ, ಸಂಸ್ಕೃತಿ, ಕನ್ನಡ ಕೈಂಕರ್ಯದ ಈ ನೆಲ ಅಕ್ಷರ ಜಾತ್ರೆಗೆ ಸಜ್ಜಾಗಿದೆ. ಸ್ವಾತಂತ್ರ್ಯ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಸಾಮಾಜಿಕವಾಗಿ ವೈಶಿಷ್ಟ್ಯತೆ ಹೊಂದಿದ ನರಗುಂದ, 1857ರಲ್ಲಿ ಸ್ವಾತಂತ್ರ್ಯಕ್ಕಾಗಿ ಬಂಡಾಯ ಬಳಿಕ 1980ರಲ್ಲಿ ರೈತ ಬಂಡಾಯ ಸೇರಿ ಎರಡು ಬಂಡಾಯಕ್ಕೆ ಖ್ಯಾತಿವೆತ್ತಿದೆ.ಬೆಳವಲನಾಡಿನ ಬೆಳವಲ-300ರ 18 ಅಗ್ರಹಾರಗಳಲ್ಲಿ ನರಗುಂದವು ಒಂದಾಗಿದ್ದು, ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಈ ನೆಲಕ್ಕಿದೆ.
2006ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಪಾದಯಾತ್ರೆ ಜೊತೆಗೆ ಕನ್ನಡಕ್ಕೆ ಧಕ್ಕೆ ಬಂದಾಗ ಪುಟಿದೇಳುವ ಈ ನೆಲದ ಕನ್ನಡಾಭಿಮಾನ ಅಸಾಧಾರಣ. ಅಸಂಖ್ಯಾತ ಸಾಹಿತಿಗಳ ಸಾಹಿತ್ಯ ಕೃಷಿ ಇತಿಹಾಸಕ್ಕೆ ಮೈಲಿಗಲ್ಲಾಗಿದೆ. ಧಾರ್ಮಿಕವಾಗಿ ಪಂಚಗ್ರಹ ಗುಡ್ಡದ ಹಿರೇಮಠ, ವಿರಕ್ತಮಠ, ಪುಣ್ಯಾರಣ್ಯ ಪತ್ರಿವನಮಠ,ಧಾರ್ಮಿಕ ಹಾಗೂ ಕನ್ನಡ ಕೈಂಕರ್ಯದಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ನರಗುಂದ ಕೀರ್ತಿ ಬೆಳಗಿವೆ. ಇತಿಹಾಸದ ಕುರುಹು: 1857ರಲ್ಲಿ ನರಗುಂದ ಸಂಸ್ಥಾನವನ್ನಾಳಿದ ವೀರ ಬಾಬಾಸಾಹೇಬ ಭಾವೆ ಪರಾಕ್ರಮ ಮೆರೆವ ಐತಿಹಾಸಿಕ ಕೆಂಪಗಸಿ ಬಾಗಿಲು, ಅರಮನೆ, ತಿರುಪತಿ ಮಾದರಿ ವೆಂಕಟೇಶ್ವರ ದೇವಸ್ಥಾನ, ಹುತಾತ್ಮ ರೈತನ ವೀರಗಲ್ಲು ನರಗುಂದ ನೆಲದ ಇತಿಹಾಸವನ್ನು ಸಾರಿ ಹೇಳುತ್ತಿವೆ. ಜಾನಪದ ಕಲೆಯಲ್ಲೂ ತಾಲೂಕಿನ ಹಲವಾರು ಜಾನಪದ ಕಲಾ ತಂಡಗಳು ರಾಷ್ಟ್ರ ಮಟ್ಟದವರೆಗೆ ಜಾನಪದ ಕಲೆ ಪ್ರಕಾರ ಪ್ರದರ್ಶಿಸಿವೆ.
ಸಾಹಿತ್ಯ ಕೃಷಿ: ಕ್ರಿ.ಶ. 1045ರಲ್ಲಿ ದೇಶದ ಮೊಟ್ಟಮೊದಲ ಜ್ಯೋತಿಷ್ಯ ಗ್ರಂಥ ಜಾತವೇದ ತಿಲಕ ರಚಿಸಿದ ನರಗುಂದದ ಶ್ರೀಧರಾಚಾರ್ಯರು ಈ ನೆಲದ ಸಾಹಿತ್ಯಿಕ ಇತಿಹಾಸಕ್ಕೆ ಕಳಶಪ್ರಾಯ. ಇಂದಿನ ಸಮ್ಮೇಳನದಲ್ಲಿ ಕವಿ ಶ್ರೀಧರಾಚಾರ್ಯ ಮಹಾದ್ವಾರ ಸ್ಥಾಪಿಸಲಾಗಿದೆ. ತಾಲೂಕಿನ ಬನಹಟ್ಟಿ ರುದ್ರಸ್ವಾಮಿಗಳು ಸಂಸ್ಕೃತದಲ್ಲಿ ಮುರುಘೇಂದ್ರ ವಿಜಯ ಪುರಾಣ ರಚಿಸಿದ್ದು ಮಹತ್ವದ್ದಾಗಿದೆ.
ರಡ್ಡೇರನಾಗನೂರ ಕಾಶೀನಾಥ ಶಾಸ್ತ್ರಿಗಳು ಯಜುರ್ವೇದ ಶ್ಲೋಕಗಳನ್ನು ಕೂಡಿಸಿಕೊಂಡು ರುದ್ರಾಕಾಯ ಮಾಡಿದ್ದಲ್ಲದೇ, 1927ರಲ್ಲೇ ಹೊರತಂದ ಪಂಚಾಚಾರ್ಯ ಪ್ರಭ ಪತ್ರಿಕೆ ಇಂದಿಗೂ ಪ್ರಸಾರಗೊಳ್ಳುತ್ತಿದೆ. ರೇಣುಕ ಶತಕ, ಮಾತೃ ಮಹಿಮೆ, ಶಿವರುದ್ರ ವಿಜಯ ಗ್ರಂಥ ಪ್ರಕಟಿಸಿದ್ದು, ಸಾಹಿತ್ಯದ ಹಿರಿಮೆಯಾಗಿದೆ.
ವಿರಕ್ತಮಠ ಲಿಂ| ಚನ್ನವೀರ ಸಾಮಿಗಳ ಚರಿತ್ರೆ ರಚಿಸಿದ ಸುರಕೋಡದ ಶಿವರುದ್ರ ಶಾಸ್ತ್ರಿಗಳು, 1874ರಲ್ಲಿ ಆಂಗ್ಲ ಗ್ರಂಥ ಕನ್ನಡಕ್ಕೆ ಅನುವಾದಿಸಿ 10 ಪುಸ್ತಕ ಹೊರತಂದ ಶಿರೋಳದ ಸಂಗಣ್ಣ ಕುಪ್ಪಸ್ತ ಮತ್ತು ಸಾಹಿತಿ ರುದ್ರನಾಥ ಕಲ್ಯಾಣಶೆಟ್ಟಿ, ಪ್ರೊ| ಎಸ್.ಬಿ. ಕುಷ್ಟಗಿ, ಶಿರೋಳದ ಎಂ.ಕೆ. ದಿಬ್ಬದ, ಮಾರುತಿ ಭೋಸಲೆ, ಡಾ| ಬಿ.ಎಂ. ಜಾಬಣ್ಣವರ ಹಲವಾರು ಪುಸ್ತಕಗಳನ್ನು ಹೊರತಂದಿದ್ದರೆ, ಹಲವಾರು ಕವಿಗಳ ಕವನ ಸಂಕಲನಗಳಿಗೆ ಈ ನಾಡು ಜೀವ ತುಂಬಿದೆ.
ಅಮೆರಿಕ ಶ್ವೇತ ಭವನದಲ್ಲಿ ಮುಕ್ತ ಪ್ರವೇಶ ಹೊಂದಿ, 180 ರಾಷ್ಟ್ರಗಳಲ್ಲಿ ಸಂಗೀತ ಕಚೇರಿ ನಡೆಸಿ ಸಂಗೀತ ಕ್ಷೇತ್ರದಲ್ಲಿ ವಿಶ್ವದುದ್ದಕ್ಕೂ ನರಗುಂದ ಕೀರ್ತಿ ಬೆಳಗಿದ ನಾದ ಬ್ರಹ್ಮಾನಂದ ಸ್ವಾಮಿಗಳು, ಕವಿ ನಾಗಭಟ್ಟರು, ಜನಸಂಘ ಸ್ಥಾಪಕರಲ್ಲಿ ಓರ್ವರಾದ ಕರ್ಣಾಟಕ ಕೇಸರಿ ದಿ| ಜಗನ್ನಾಥರಾವ್ ಜೋಶಿ ಅಂತಹ ಅಪ್ರತಿಮ ವಾಘ್ಮಯಿಗಳಿಗೆ ನರಗುಂದ ನೆಲ ಜನ್ಮ ನೀಡಿದೆ. ಎಲ್ಲ ರಂಗದಲ್ಲಿ ತನ್ನದೇ ಛಾಪು ಮೂಡಿಸಿದೆ.
ಐದನೇ ಸಮ್ಮೇಳನ: 2004ರಲ್ಲಿ ಪಟ್ಟಣದಲ್ಲಿ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, 2014ರಲ್ಲಿ ಚಿಕ್ಕನರಗುಂದ, 2015ರಲ್ಲಿ ಭೈರನಹಟ್ಟಿ, 2017ರಲ್ಲಿ ಕಣಕಿಕೊಪ್ಪ ಸೇರಿ ನಾಲ್ಕು ಸಮ್ಮೇಳನ ಜರುಗಿದ್ದು, ಸುದೀರ್ಘ 14 ವರ್ಷಗಳ ಬಳಿಕ 2018ರ ಜು. 28ರಂದು ಐದನೇ ಸಮ್ಮೇಳನಕ್ಕೆ ನರಗುಂದ ಸಾಕ್ಷಿಯಾಗಲಿದೆ. ಸಾಹಿತಿ ರುದ್ರನಾಥ ಕಲ್ಯಾಣಶೆಟ್ಟಿ, ಎಂ.ಕೆ. ದಿಬ್ಬದ, ಬಿ.ಎಸ್. ಹಣಜಿ, ಪ್ರೊ| ಎಸ್.ಬಿ. ಕುಷ್ಟಗಿ ಬಳಿಕ ಡಾ| ಬಿ.ಎಂ. ಜಾಬಣ್ಣವರ ಐದನೇ ಸಮ್ಮೇಳನಾಧ್ಯಕ್ಷರಾಗಿ ಕಂಗೊಳಿಸಲಿದ್ದಾರೆ. ಇಂತಹ ಸುದೀರ್ಘ ಇತಿಹಾಸವನ್ನೊಳಗೊಂಡ ನರಗುಂದದಲ್ಲಿ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸಿದ್ಧಲಿಂಗಯ್ಯ ಮಣ್ಣೂರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ
Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ
ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ
2025 ರಿಂದ ಕಲ್ಲಿದ್ದಲು ಆಮದು ಸಂಪೂರ್ಣವಾಗಿ ಬಂದ್: ಪ್ರಹ್ಲಾದ್ ಜೋಶಿ
Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ