“30 ದಿನದಲ್ಲಿ ನೀರು’ ಬಿಜೆಪಿ ನಾಯಕರಬೌದ್ದಿಕ ದಿವಾಳಿತನದ ಸಂಕೇತ
Team Udayavani, Dec 10, 2017, 7:10 AM IST
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಶ್ಯಕತೆ ಇಲ್ಲದೆ 30 ದಿನಗಳಲ್ಲಿ ಮಹದಾಯಿ ನೀರು ತರುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ಬಿಜೆಪಿಯ ಬೌದ್ಧಿಕ ದಿವಾಳಿತನದ ಸಂಕೇತವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಜ್ಞಾನೋದಯವಾದವರಂತೆ ಬಿಜೆಪಿ ನಾಯಕರು ಮಹದಾಯಿ ಬಗ್ಗೆ ಮಮಕಾರ ತೋರತೊಡಗಿದ್ದಾರೆ. ಮುಖ್ಯಮಂತ್ರಿ, ರಾಜ್ಯ ಸರಕಾರದ ಅಗತ್ಯವಿಲ್ಲದೆ ಮಹದಾಯಿ ನೀರು ತರುತ್ತೇವೆ ಎಂದು ಹೇಳುವ ಮೂಲಕ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಯತ್ನ ಮಾಡತೊಡಗಿದ್ದಾರೆ. ಕಳಸಾ-ಬಂಡೂರಿ ಭೌತಿಕ ಕೆಲಸ ಏನಾಗಿದೆ, ಏನಾಗಬೇಕು ಎಂಬ ಕನಿಷ್ಠ ತಿಳಿವಳಿಕೆ ಇಲ್ಲದೆಯೇ ಹೇಳಿಕೆ ನೀಡುತ್ತಿದ್ದಾರೆ. ಎಲ್ಲರೂ ಒಪ್ಪಿದರು ಎಂದು ತಿಳಿದರೂ ನೀರು ಹರಿಸುವುದು ಅದು ನಮ್ಮ ಪಾಲಿಗೆ ತಲುಪುವುದು ಸಾಧ್ಯವೇ ಎಂಬ ವಾಸ್ತವಿಕ ನೆಲೆಗಟ್ಟಿನಲ್ಲಿ ವಿಚಾರಿಸದ ಬಿಜೆಪಿ ನಾಯಕರಿಗೆ ರಾಜ್ಯದ ಹಿತಕ್ಕಿಂತ ಸ್ವಾರ್ಥ ರಾಜಕಾರಣ ಮುಖ್ಯವಾಗಿದೆ ಎಂದರು.