ಕೋವಿಡ್; ಶೂನ್ಯದತ್ತ ಗದಗ ಜಿಲ್ಲೆ ದಾಪುಗಾಲು
ಜೂನ್ ಮೊದಲ ವಾರದಿಂದ ಗುಣಮುಖರೇ ಹೆಚ್ಚುಪಾಸಿಟಿವ್ ದರ ಕಡಿಮೆಯಾದ್ರೂ ಮಕ್ಕಳ ಸೋಂಕಿನ ಪ್ರಮಾಣ ಆತಂಕ
Team Udayavani, Jun 14, 2021, 8:09 PM IST
ವಿಶೇಷ ವರದಿ
ಗದಗ: ಜಿಲ್ಲೆಯಲ್ಲಿ ಒಂದೂವರೆ ತಿಂಗಳ ಕಾಲ ಅಬ್ಬರಿಸಿದ್ದ ಕೋವಿಡ್-19 ಸೋಂಕು ದಿನ ಕಳೆದಂತೆ ಶಾಂತವಾಗುತ್ತಿದೆ. ಸೋಂಕಿಗೆ ಒಳಗಾಗಿದ್ದವರು ಗುಣಮಖರಾಗುತ್ತಿರುವ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಪಾಸಿಟಿವ್ ದರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಮೂಲಕ ಗದಗ ಜಿಲ್ಲೆಯ ಮಹಾಮಾರಿ ಕೋವಿಡ್ನಿಂದ ಮುಕ್ತವಾಗುವತ್ತ ದಾಪುಗಾಲು ಹಾಕುತ್ತಿದೆ.
ಕಳೆದ ಏಪ್ರಿಲ್ ತಿಂಗಳಿಂದ ಏರುಮುಖವಾಗಿದ್ದ ಕೋವಿಡ್ -19 ಸೋಂಕಿನ ಪ್ರಮಾಣ ಮೇ ತಿಂಗಳ ಎರಡು ಮತ್ತು ಮೂರನೇ ವಾರದಲ್ಲಿ ಸರಾಸರಿ ದಿನಕ್ಕೆ 460ಕ್ಕಿಂತ ಹೆಚ್ಚಿನ ಜನರಿಗೆ ಸೋಂಕು ಕಂಡು ಬಂದಿದ್ದರೆ, ಅದರಲ್ಲಿ ಭಾಗಶಃ ಜನರು ಗುಣಮುಖರಾಗುತ್ತಿದ್ದರು. ಆದರೆ, ಜೂನ್ ತಿಂಗಳ ಮೊದಲ ವಾರದಿಂದ ಗುಣಮುಖರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಿದೆ. ಇದಕ್ಕೂ ಮುನ್ನ ಮೂರಂಕಿಯಷ್ಟಿದ್ದ ಸೋಂಕಿತರ ಸಂಖ್ಯೆ ಜೂ.9ರಿಂದ ಈಚೆಗೆ ಸೋಂಕಿನ ಸಂಖ್ಯೆ ಎರಡಂಕಿಗೆ ಇಳಿದಿದೆ. ಜೂ.11ರಂದು ಪ್ರಕಟವಾದ ಕೋವಿಡ್ ಬುಲೆಟಿನ್ನಲ್ಲಿ ಪಾಸಿಟಿವ್ ದರ ಶೇ.2.8ರಷ್ಟು ದಾಖಲಾಗಿದೆ. ಅದರಲ್ಲೂ ನರಗುಂದ ತಾಲೂಕಿನಲ್ಲಿ ಒಂದೇ ಒಂದು ಪ್ರಕರಣ ಕಂಡು ಬಂದಿಲ್ಲ.
ಇನ್ನುಳಿದಂತೆ ಗದಗಿನಲ್ಲಿ 6.22, ಮುಂಡರಗಿ 2.78 ಹಾಗೂ ರೋಣ ಮತ್ತು ಶಿರಹಟ್ಟಿಯಲ್ಲಿ ಕ್ರಮವಾಗಿ 1.39, 1.59ರಷ್ಟು ಪಾಸಿಟಿವ್ ದರ ಕಂಡು ಬಂದಿದೆ. ಆದರೆ, ಮಕ್ಕಳ ಸೋಂಕಿನ ಪ್ರಮಾಣ ಒಂದಷ್ಟು ಆತಂಕ ಮುಂದುವರಿದಿದೆ. ಆಸ್ಪತ್ರೆಗಳಲ್ಲಿ ಬೆಡ್ಗಳು ಖಾಲಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಿಮ್ಸ್ನಲ್ಲಿ ಇದೀಗ ಬೆಡ್ಗಳು ಖಾಲಿಯಾಗುತ್ತಿವೆ. ಕೋವಿಡ್ ಸಕ್ರಿಯ ಪ್ರಕರಣಗಳಿದ್ದಾಗ ಒಂದೇ ಒಂದು ಬೆಡ್ ಸಿಗದ ಪರಿಸ್ಥಿತಿ ಉಂಟಾಗಿತ್ತು. ದಿನೇ ದಿನೆ ಗುಣಮುಖರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಪರಿಣಾಮ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಹೊರತಾಗಿ ಆಕ್ಸಿಜನ್ ಹಾಗೂ ಸಾಮಾನ್ಯ ಬೆಡ್ಗಳು ಲಭ್ಯತೆ ಹೆಚ್ಚುತ್ತಿದೆ.
ಜಿಲ್ಲೆಯಲ್ಲಿ ಜೂ.13ರವರೆಗೆ 4,13,468 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, 25,397 ಜನರಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ 24,381 ಜನರು ಗುಣಮುಖರಾಗಿದ್ದು, ಸದ್ಯ 728 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ. ಅದರಲ್ಲೂ ಹೋಂ ಐಸೋಲೇಷನ್ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಹೆಚ್ಚಿನ ಜನರಿದ್ದಾರೆ.
ಫಲಿಸಿದ ಪ್ರಯತ್ನ: ಕೋವಿಡ್ 2ನೇ ಅಲೆ ಆರಂಭಿಕ ಹಂತದಲ್ಲಿ ಹಲವು ವೈದ್ಯಕೀಯ ಮೂಲ ಸೌಭ್ಯಗಳ ಕೊರತೆಗಳ ಮಧ್ಯೆಯೂ ಜಿಲ್ಲಾಡಳಿತ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿದೆ. ಸರ್ಕಾರದ ಸೂಚನೆಗಳ ಹೊರತಾಗಿಯೂ ಕೈಗೊಂಡ ಕೆಲವು ಕಠಿಣ ನಿರ್ಧಾರಗಳಿಂದ ಸೋಂಕಿನ ಸರಪಳಿ ತುಂಡರಿಸಲು ಸಾಧ್ಯವಾಗಿದೆ.