ಕರಾಳ ದಿನ ನೆನೆದು ಕಣ್ಣೀರು
Team Udayavani, Aug 30, 2019, 11:21 AM IST
ರೋಣ: ನೀರು ನುಗ್ಗಿದ ಪರಿಣಾಮ ಮನೆ ಸ್ವಚ್ಛ ಮಾಡುತ್ತಿರುವ ಗಾಡಗೋಳಿ ಗ್ರಾಮಸ್ಥ.
ರೋಣ: ಮಲಪ್ರಭೆ ಹಾಗೂ ಬೆಣ್ಣೆಹಳ್ಳದಿಂದ ನೆರೆ ಪೀಡಿತ ಗ್ರಾಮಗಳಲ್ಲಿ ದಿನದಿಂದ ದಿನಕ್ಕೆ ಗ್ರಾಮಸ್ಥರ ಜೀವನ ಚಿಂತಾಜನಕವಾಗುತ್ತಿದೆ. ನೆರೆ ಸಂದರ್ಭದಲ್ಲಿ ಸರಕಾರದ ಆರಂಭಿಸಿದ್ದ ಸಂತ್ರಸ್ತರ ಪರಿಹಾರ ಕೇಂದ್ರಗಳು ಬಾಗಿಲು ಮುಚ್ಚಿವೆ. ದಾನಿಗಳು ನೀಡಿದ್ದ ಪರಿಹಾರವೂ ಖಾಲಿಯಾಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಎದುರಾಗಬಹುದಾದ ಕರಾಳ ದಿನಗಳನ್ನು ನೆನೆದು ಸಂತ್ರಸ್ತರು ಕಣ್ಣೀರಿಡುವಂತಾಗಿದೆ.
ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಗೆ ಇಡೀ ರಾಜ್ಯವೇ ಮಮ್ಮಲ ಮರುಗಿತ್ತು. ಬೆಂಗಳೂರು, ದಾವಣಗೆರೆ, ಹಾಸನ, ಮೈಸೂರು, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕದಿಂದಲೂ ದಾನಿಗಳು ಈ ಭಾಗದ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ್ದರು. ದಾನಿಗಳು ನೀಡಿದ್ದ ಅಲ್ಪಸ್ವಲ್ಪ ಅಕ್ಕಿ, ಬೇಳೆ, ಅರಿಷಿಣ, ಖಾರದ ಪುಡಿ, ಎಣ್ಣೆ, ಸಕ್ಕರೆ ಆಹಾರ ಪದಾರ್ಥಗಳೊಂದಿಗೆ ಚಾಪೆ, ಹಾಸಿಗೆ, ಹೊದಿಕೆ, ರಗ್ಗು ಸೇರಿದಂತೆ ಬಟ್ಟೆಗಳನ್ನೂ ವಿತರಿಸುವ ಮೂಲಕ ಮಾನವೀಯತೆ ತೋರಿದರು. ಪ್ರವಾಹದ ಬಳಿಕ ದಾನಿಗಳ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಿದೆ. ಆದರೆ, ಹೊಳೆಆಲೂರು, ಹೊಳೆಹಡಗಲಿ, ಬಸರಕೋಡ ಗ್ರಾಮಗಳಲ್ಲಿ ಇಂದಿಗೂ ಅಲ್ಲೊಬ್ಬರು, ಇಲ್ಲೊಬ್ಬರು ಎಂಬಂತೆ ಬರುವ ದಾನಿಗಳು ಗ್ರಾಮಸ್ಥರಿಗೆ ಆಹಾರ ಸಾಮಗ್ರಿ ಒದಗಿಸುತ್ತಿದ್ದಾರೆ.
ಪ್ರವಾಹ ಪರಿಸ್ಥಿತಿ ಈಗಾಗಲೇ ಇಳಿದಿದ್ದರಿಂದ ಸರಕಾರದ ಪರಿಹಾರ ಕೇಂದ್ರಗಳ ಬಾಗಿಲು ಮುಚ್ಚಿವೆ. ಬಹುತೇಕರು ಆಯಾ ಗ್ರಾಮಗಳ ನವ ಗ್ರಾಮಗಳಿಗೆ ಸ್ಥಳಾಂತರಗೊಂಡಿದ್ದಾರೆ. ಕೈಯಲ್ಲಿ ದುಡಿಮೆ ಇಲ್ಲದೇ, ದಾನಿಗಳು ನೀಡುವ ದವಸ- ಧಾನ್ಯಗಳನ್ನೇ ಅವಲಂಬಿಸಿ, ಜೀವನ ಸಾಗಿಸುತ್ತಿದ್ದಾರೆ. ದಿನಕಳೆದಂತೆ ದಾನಿಗಳು ನೀಡಿರುವ ಆಹಾರ ಸಾಮಗ್ರಿಗಳು ಕರಗುತ್ತಿವೆ. ಕೆಲವರು ಮುಂದಿನ 2-3 ತಿಂಗಳಿಗೆ ಸಾಕಾಗುವಷ್ಟು ದಾಸ್ತಾನು ಮಾಡಿಕೊಂಡಿದ್ದರೆ, ಬಹುತೇಕರ ಮನೆಗಳಲ್ಲಿರುವ ಆಹಾರ ಸಾಮಗ್ರಿ ಒಂದು ತಿಂಗಳಿಗೂ ಸಾಕಾಗುವುದಿಲ್ಲ ಎಂಬುದು ಗಮನಾರ್ಹ.
ಪುಟ್ಟ ಪುಟ್ಟ ಮಕ್ಕಳು ಹಾಗೂ ವೃದ್ಧರೊಂದಿಗೆ ಜೀವನ ಸಾಗಿಸುತ್ತಿರುವ ಒಂಟಿ ಮಹಿಳೆಯರ ಸ್ಥಿತಿ ದೇವರಿಗೇ ಪ್ರೀತಿ. ಇತರರ ಮನೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹೀಗಾಗಿ ಮುಂದಿನ ದಿನಗಳ ಗಂಭೀರ ಸ್ಥಿತಿಯನ್ನು ಊಹಿಸಿಕೊಂಡು ನೆರೆ ಸಂತ್ರಸ್ತ ಮಹಿಳೆಯರು ನಿತ್ಯ ಕಣ್ಣೀರಲ್ಲೇ ಕೈತೊಳೆಯುವಂತಾಗಿದೆ.
ಸತತ ಐದಾರು ವರ್ಷಗಳಿಂದ ಬರಗಾಲ ಕಾಡಿತ್ತು. ಸಕಾಲಕ್ಕೆ ಮಳೆ- ಬೆಳೆ ಇಲ್ಲದೇ ಸಾಲ ಮಾಡಿ ಜೀವನ ಸಾಗಿಸಿರುವ ಜನರಿಗೆ ಇದೀಗ ನೆರೆ ಎಂಬುದು ಹೊರೆಯಾಗಿದೆ. ಕೃಷಿಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ನಮಗೆ ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಹೊಳೆ ಭಾಗದಲ್ಲಿ ನೂರಾರು ಚೀಲ ಹೆಸರು, ಗೋವಿನಜೋಳ ಬೆಳೆಯುತ್ತಿದ್ದೇವು. ರಾಶಿ ಸಂದರ್ಭದಲ್ಲಿ ಮತ್ತೂಬ್ಬರಿಗೆ ಬೊಗಸೆಗಟ್ಟಲೆ ಕಾಳು, ಕಡಿ ದಾನ ನಿಡುತ್ತಿದ್ದೆವು. ನಮ್ಮಂತವರೂ ಈಗ ಮುಷ್ಠಿ ಅಕ್ಕಿ, ಬೆಳೆಗೂ ಸರಕಾರ ಮತ್ತು ದಾನಿಗಳ ಎದುರು ಕೈಯೊಡ್ಡುವಂತಾಗಿರುವುದು ನಮ್ಮ ಹಣೆಬರಹ ಎಂಬುದು ರೈತ ಮಹಿಳೆ ವಿಜಯಲಕ್ಷ್ಮೀ ಹೊಸಮನಿ ಅವರ ನೋವಿನ ನುಡಿಗಳು.
•ಯಚ್ಚರಗೌಡ ಗೋವಿಂದಗೌಡ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?