ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ
Team Udayavani, Jul 9, 2020, 6:29 AM IST
ಹಾಸನ: ದೇಶದ ಗಡಿಭಾಗ ಅರುಣಾಚಲ ಪ್ರದೇಶದ ಬಳಿ ಕರ್ತವ್ಯ ನಿರತರಾಗಿದ್ದ ವೇಳೆ ಗುಡ್ಡಕುಸಿದು ಮೃತಪಟ್ಟಿದ್ದ ಭಾರತೀಯ ಸೇನೆಯ ಯೋಧ ಮಲ್ಲೇಶ್ ಅವರ ಅಂತ್ಯಕ್ರಿಯೆ ಸ್ವಗ್ರಾಮ ಅರಕಲಗೂಡು ತಾಲೂಕು ಅತ್ನಿ ಬಳಿಯ ಸಿದ್ದಾಪುರ ಗ್ರಾಮದಲ್ಲಿ ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಬೆಂಗಳೂರಿನಿಂದ ಬೆಳಗ್ಗೆ 6 ಗಂಟೆಗೆ ಅರಕಲಗೂಡು ತಾಲೂಕಿನ ಗಡಿಭಾಗ ವಡ್ಡರಹಳ್ಳಿ ಎಚ್ಆರ್ಪಿ ಕಾಲೋನಿ ಬಳಿ ಯೋಧನ ಪಾರ್ಥೀವ ಶರೀರವನ್ನು ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಅವರು ತಾಲೂಕು ಆಡಳಿತದ ಪರವಾಗಿ ಪುಷ್ಪ ಗುತ್ಛ ಇರಿಸಿ ಗೌರವ ಸಲ್ಲಿಸಿದರು. ಆನಂತರ ಸ್ವಗ್ರಾಮ ಸಿದ್ದಾಪುರಕ್ಕೆ ತಲಪಿದ ಪಾರ್ಥೀವ ಶರೀರವನ್ನು ಮೃತ ಯೋಧನ ಮನೆಯ ಸಮೀಪ ಬೆಳಗ್ಗೆ 9 ಗಂಟೆಯವರೆಗೆ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಈ ವೇಳೆ ಶಾಸಕ ಎ.ಟಿ. ರಾಮಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನಮ್ಮ, ಎಎಸ್ಪಿ , ಡಿವೈಎಸ್ಪಿ ಲಕ್ಷ್ಮೇಗೌಡ, ಸಕಲೇಶಪುರ ಉಪವಿಭಾಗಾಧಿಕಾರಿ ಗಿರೀಶ್ ನಂದನ್, ಸಿಪಿಐ ದೀಪಕ್, ಪಿಎಸ್ಐ ವಿಜಯ ಕೃಷ್ಣ, ಸಾಗರ್, ಸೇರಿದಂತೆ ಜನಪ್ರತಿನಿಧಿಗಳು ಗೌರವ ಸಲ್ಲಿಸಿದರು. ನಂತರ ಮೃತ ದೇಹದ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಸೈನಿಕರು ಮತ್ತು ಪೊಲೀಸರು ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದರು.
ಮೃತ ಯೋಧನ ಪತ್ನಿ ಪೂರ್ಣಿಮಾ, ಪುತ್ರರಾದ ಶ್ರೇಯಸ್,ಋತ್ವಿಕ್, ತಾಯಿ ಪುಟ್ಟಮ್ಮ ಸಹೋದರರು, ಸೇನೆಯ ಅಧಿಕಾರಿಗಳಾದ ಶರತ್ ಕುಮಾರ್, ಆದಿತ್ಯ ಸಿಂಗ್ ಫರ್ಮಾತ್ , ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಡಿ.ಎ.ನಾಗಣ್ಣ, ಕರ್ನಲ್ ದೊರೆರಾಜ್, ಪ್ರದೀಪ್ ಸಾಗರ್, ಸೈನಿಕರ ಕಲ್ಯಾಣ ಪುನರ್ವಸತಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.