ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ
ಗುರುಕುಲ ಮಾದರಿಯನ್ನು ಅನುಸರಿಸುತ್ತಿರುವುದು ಇತರೆ ಶಾಲೆಗಳಿಗೆ ಮಾದರಿಯಾಗಿದೆ
Team Udayavani, Jun 18, 2022, 4:50 PM IST
ಹಾಸನ: ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂಬಂತೆ ಶಾಲೆಯಲ್ಲಿನ ಶಿಕ್ಷಣದ ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕಾರವನ್ನು ಕಲಿಸ ಬೇಕು ಎಂದು ನಗರದ ತಣ್ಣೀರುಹಳ್ಳ ಮಠದ ಪೀಠಾಧ್ಯಕ್ಷ ಶ್ರೀ ವಿಜಯ ಕುಮಾರ ಸ್ವಾಮೀಜಿಯವರು ಹೇಳಿದರು.
ನಗರದ ಹೊಳೆನರಸೀಪುರ ರಸ್ತೆ, ಚನ್ನಪಟ್ಟಣ ವೃತ್ತದ ಬಳಿ ಇರುವ ಅರುಣೋದಯ ಮಾನಸ ಪ್ರೌಢಶಾಲೆ ಹಾಗೂ ಶಾಂಭ ವಿ ಕಾನ್ವೆಂಟ್ನಲ್ಲಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾ ಡಿದ ಅವರು 5 ವರ್ಷ ತುಂಬಿದ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುತ್ತಿರುವುದು ಪ್ರಶಂಸಾರ್ಹ ಕ್ರಮವಾಗಿದೆ ಎಂದರು.
ಬಸವಣ್ಣನವರು ಸಾರಿರುವ ಸಪ್ತ ಸೂತ್ರಗಳನ್ನು ಪ್ರತಿಯೊಬ್ಬರೂ ಕೂಡ ಅಳವಡಿಸಿಕೊಂಡರೇ ಉತ್ತಮ ವ್ಯಕ್ತಿತ್ವ ರೂಪು ಗೊಂಡು ಉತ್ತಮ ಸಮಾಜವೂ ರೂಪುಗೊಳ್ಳುತ್ತದೆ. ದೇಶವನು ಕಟ್ಟುವ ಯುವ ಪೀಳಿಗೆ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಕೆಎಸ್ಆರ್ಟಿಸಿ ಉಪಾಧ್ಯಕ್ಷ ಸೀಗೆ ಈಶ್ವರಪ್ಪ ಅವರು ಮಾತನಾಡಿ, ಇಂದಿನ ವಿದ್ಯಾಸಂಸ್ಥೆಗಳು ಹಣ ಗಳಿಕೆಗೆ ಹೆಚ್ಚಿನ ಮಹತ್ವ ನೀಡುತ್ತಿವೆ. ಆದರೆ ಶಾಂಭವಿ ಕಾನ್ವೆಂಟ್ ಆಡಳಿತ ಮಂಡಳಿ ಗುರುಕುಲ ಮಾದರಿಯನ್ನು ಅನುಸರಿಸುತ್ತಿರುವುದು ಇತರೆ ಶಾಲೆಗಳಿಗೆ ಮಾದರಿಯಾಗಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ ಮಾತನಾಡಿ, ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಬೇರುಗಳಿದ್ದಂತೆ. ಅವು ಗಟ್ಟಿಯಾಗಿರುವಷ್ಟು ಕಾಲ ನಮ್ಮ ವರ್ತಮಾನ, ಭವಿಷ್ಯಗಳು ದೃಢವಾಗಿ ಉಳಿಯುತ್ತವೆ. ಈ ನಿಟ್ಟಿನಲ್ಲಿ ಅಕ್ಷರಭ್ಯಾಸದ ಮೂಲಕ ಮಕ್ಕಳ ಕಲಿಕೆ ಆರಂಭಿಸುವ ಸತ್ಸಂಪ್ರದಾಯ ಮುಂದುವರಿಯುತ್ತಿರುವುದು ಸ್ವಾಗತಾರ್ಹ.
ನಮ್ಮ ಧಾರ್ಮಿಕ ಆಚರಣೆ ಹಾಗೂ ಮೌಡ್ಯದ ನಡುವೆ ತೆಳುವಾದ ಗೆರೆಯಿದ್ದು, ಅದನ್ನು ಪೋಷಕರು ಮಕ್ಕಳಿಗೆ ಅರ್ಥ ಮಾಡಿಸಬೇಕು. ಅವರ ಪರಿಶ್ರಮದಿಂದ ಮಾತ್ರವೇ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎನ್ನುವ ಮನೋಭಾವ ಅವರಲ್ಲಿ ಬೆಳೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾರದೆ ಭಾವಚಿತ್ರ ಇರುವ ಪೋಟೊಗೆ ಪೂಜೆ ಸಲ್ಲಿಸಿದ ನಂತರ ಪ್ರಥಮ ವರ್ಷದ ವಿದ್ಯಾಭ್ಯಾಸ ಮಾಡಲು ಬಂದಿರುವ ಚಿಣ್ಣರ ಅಕ್ಷರಭ್ಯಾಸವನ್ನು ತಣ್ಣೀರುಹಳ್ಳ ಮಠದ ಮಠಾಧ್ಯಕ್ಷ ಶ್ರೀ ವಿಜಯಕುಮಾರ ಸ್ವಾಮೀಜಿ ನಡೆಸಿಕೊಟ್ಟರು.
ಹಾಸನ ನಗರಸಭೆ ಸದಸ್ಯ ಸಿ.ಕೆ. ಪುಟ್ಟಸ್ವಾಮಿಗೌಡ, ಅರುಣೋದಯ ಮಾನಸ ಪ್ರೌಢಶಾಲೆ ಹಾಗೂ ಶಾಂಭವಿ ಕಾನ್ವೆಂಟ್ ಅಧ್ಯಕ್ಷೆ ಡಾ.ವಿಜಯಲಕ್ಷ್ಮಿ ಕೆ. ಬಳ್ಳೂಳ್ಳಿ ಶೆಟ್ಟರ್, ಕಾರ್ಯದರ್ಶಿ ಎಚ್.ಡಿ. ಕಿರಣ್ ಗೌಡ, ಮಂಜೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು ಮತ್ತಿತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.