ಮಾರ್ಚ್ಗೆ ಎತ್ತಿನಹೊಳೆಯಿಂದ ನೀರು
ಎತ್ತಿನಹೊಳೆ ಕಾಮಗಾರಿ ವೀಕ್ಷಿಸಿದ ಸಚಿವ ರಮೇಶ್ ಜಾರಕಿಹೊಳಿ ಭರವಸೆ
Team Udayavani, May 8, 2020, 5:25 PM IST
ಸಕಲೇಶಪುರ: ಮುಂದಿನ ಮಾರ್ಚ್ ಒಳಗೆ 37 ಕಿ.ಮೀ. ನೀರು ಹರಿಸಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದರು. ತಾಲೂಕಿನಲ್ಲಿ ನಡೆಯುತ್ತಿರುವ ಎತ್ತಿನ ಹೊಳೆ ಕಾಮಗಾರಿಯ ವೀಕ್ಷಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಣದ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು ಆದರೆ ಮುಂದಿನ ದಿನಗಳಲ್ಲಿ ಎಲ್ಲವನ್ನು ಬಗೆಹರಿಸಲಾಗುವುದು ಎಂದರು.
ಎತ್ತಿನ ಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ನೀವೇ ಈಗ ಆ ಯೋಜನೆಯನ್ನು ಕಾರ್ಯಗತ ಮಾಡಲು ಹೊರಟಿದ್ದೀರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.
ನೀರಿನ ಸಮಸ್ಯೆಯಾಗದಂತೆ ಕ್ರಮ: ಕಳೆದ ಫೆಬ್ರವರಿಯಲ್ಲಿ ನಾನು ಜಲಸಂಪನ್ಮೂಲ ಸಚಿವ ನಾಗಿ ಅಧಿಕಾರ ಸ್ವೀಕರಿಸಿದ್ದು, ಅಂದಿನಿಂದ ಪ್ರತಿ ಜಲಾಶಯಕ್ಕೆ ಭೇಟಿ ನೀಡಿ ಅಲ್ಲಿನ
ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗದಂತೆ ಗಮನಹರಿಸಲು ಸೂಚನೆ ನೀಡಿದ್ದೇನೆ ಎಂದರು.
ಎತ್ತಿನ ಹೊಳೆಯನ್ನು ಉತ್ತರ ಭಾಗಕ್ಕೆ ಕೊಂಡೊಯ್ಯುವ ವಿಚಾರವಾಗಿ ಮಾತ ನಾಡಿದ ಅವರು ಕೇವಲ ಉತ್ತರ ಕರ್ನಾಟಕ ಭಾಗವಷ್ಟೇಯಲ್ಲ. ರಾಜ್ಯದ ಎಲ್ಲ ರೈತರು ನಮ್ಮವರೇ ಹಾಗಾಗಿ ಅವರ ಹಿತ ಕಾಪಾಡ ಬೇಕಾಗುತ್ತದೆ. ಜೊತೆಗೆ ನಮ್ಮ ಜವಾಬ್ದಾರಿ ಕೂಡಾ ಹಾಗಾಗಿ ರಾಜ್ಯದಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಲಾಗುವುದು ಎಂದರು.
ಯೋಜನೆ ಅನುಷ್ಠಾನಕ್ಕೆ ಆದ್ಯತೆ: ರಾಜ್ಯದ ಮುಖ್ಯಮಂತ್ರಿಗೆ ನೀರಾವರಿ ಬಗ್ಗೆ ಹೆಚ್ಚಿನ ಕಾಳಜಿ ಇರುವುದರಿಂದ ಯಾವುದೇ ರೀತಿಯ ಸಮಸ್ಯೆ ಆಗದು. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು ಆದಷ್ಟು ಬೇಗ ಅವರಿಗೆ ಪರಿಹಾರ ನೀಡುವ ಮೂಲಕ ನೀರಾವರಿಗೆ ಬೇಕಾಗುವಂತಹ ಎಲ್ಲಾ ರೀತಿಯ ಹಣದ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ. ಜೊತೆಗೆ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಮತ್ತು ಮುಖ್ಯಮಂತ್ರಿಗಳೊಂದಿಗೆ ವಿಶೇಷ ಸಭೆ ನಡೆಸಿದ್ದು ಯೋಜನೆ ಅನುಷ್ಠಾನಕ್ಕೆ ಮತ್ತಷ್ಟು ಹೆಚ್ಚಿನ ಒತ್ತು ನೀಡುತ್ತೇವೆ ಎಂದರು.
ಕೆಲವು ತಜ್ಞರ ಪ್ರಕಾರ ಇಲ್ಲಿ 8 ಟಿಎಂಸಿ ನೀರು ಮಾತ್ರ ಲಭ್ಯವಿದೆ ಎಂದು ವರದಿ ಇದೆಯಲ್ಲ ಎಂಬ ಮಾತಿಗೆ ನಾವು ಕೂಡ ಸರ್ವೆ ಮಾಡಿಸಿದ್ದೇವೆ ಇಲ್ಲಿ 24.1 ಟಿಎಂಸಿ
ನೀರು ಬರುವ ಎಲ್ಲಾ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಚೆಕ್ ಡ್ಯಾಮ್ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಚ್. ಕೆ.ಕುಮಾರಸ್ವಾಮಿ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಬೇಲೂರು ಶಾಸಕ ಲಿಂಗೇಶ್, ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ವಿಶ್ವೇಶ್ವರಯ್ಯ ನೀರಾವರಿ
ನಿಗಮದ ಅಧಿಕಾರಿಗಳು ಹಾಜರಿದ್ದರು.