ದೆಹಲಿಗೆ ದಿಢೀರ್ ಭೇಟಿ: ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದ ಸಚಿವ ಮುರುಗೇಶ್ ನಿರಾಣಿ
Team Udayavani, Jul 7, 2021, 12:20 PM IST
ಕಲಬುರಗಿ: ನನ್ನ ದೆಹಲಿ ಭೇಟಿ ದಿಢೀರ್ ನಿರ್ಧಾರವಾಗಿಲ್ಲ. ಇಲಾಖೆ ಮತ್ತು ವೈಯಕ್ತಿಕ ಕಾರಣದಿಂದ ಭೇಟಿ ಮಾಡುತ್ತಿದ್ದೇನೆ. ಇದಕ್ಕೆ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ನನ್ನನ್ನು ಹೈಕಮಾಂಡ್ ದೆಹಲಿಗೆ ಕರೆದಿಲ್ಲ, ಅದು ಮಾಧ್ಯಮದಲ್ಲಿ ಮಾತ್ರ ಬಂದಿರುವುದು. ನಾನು ನಾಳೆಯೂ ದೆಹಲಿಗೆ ಭೇಟಿ ಕೊಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಗಣಿಗಾರಿಕೆಯಿಂದ ಕೆಆರ್ ಎಸ್ ಡ್ಯಾಂಗೆ ಹಾನಿ ವಿಚಾರವಾಗಿ ಮಾತನಾಡಿದ ಅವರು, ಈ ಹಿಂದೆ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ನಿಜ. ಆದರೆ, ಕಳೆದ ನಾಲ್ಕು ತಿಂಗಳಿಂದ ಕಲ್ಲು ಗಣಿಗಾರಿಕೆ ನಡೆದಿಲ್ಲ. ಇದೀಗ ಅಲ್ಲಿ ಮಾಲೀಕರು ಮತ್ತು ಗಣಿ ಇಲಾಖೆಯಿಂದ ಜಂಟಿ ಸರ್ವೇ ಮಾಡಲಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಕಲ್ಲು ಗಣಿಗಾರಿಕೆ ಅವಶ್ಯಕ. ಆದರೆ ಅಕ್ರಮ ಗಣಿಗಾರಿಕೆಗೆ ಅವಕಾಶವಿಲ್ಲ ಎಂದರು.
ಸುಮಲತಾ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ರಾಜಕೀಯದಲ್ಲಿರೋ ಯಾರೇ ಆಗಲಿ ಆ ರೀತಿ ಮಾತನಾಡಬಾರದು. ಜನರು ನಮ್ಮನ್ನು ಆರಿಸಿ ಕಳಿಸುತ್ತಾರೆ. ಯಾವುದೇ ಪಕ್ಷದ ನಾಯಕರು ಈ ರೀತಿಯ ಹೇಳಿಕೆ ಕೊಡಬಾರದು ಎಂದು ಹೇಳಿದರು.