ಅಪಾಯಕಾರಿ ಮನೆಗಳನ್ನು ಕೆಡವಿ: ಸೋಮಣ್ಣ
ಹೊಸ ಮನೆ ಲಭಿಸಿದರೂ ಅಪಾಯಕಾರಿ ಹಳೆ ಮನೆಗಳನ್ನು ಬಿಡದ ಫಲಾನುಭವಿಗಳು!
Team Udayavani, Sep 15, 2020, 12:03 AM IST
ಮಡಿಕೇರಿ: ಮಳೆಹಾನಿ ಸಂತ್ರಸ್ತರಿಗೆ ಸರಕಾರದಿಂದ ನೂತನ ಮನೆ ನೀಡಿದ ಬಳಿಕವೂ ಕೆಲವರು ತಮ್ಮ ಹಿಂದಿನ ಅಪಾಯಕಾರಿ ಮನೆಗಳಲ್ಲಿ ವಾಸಿಸು ತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ. ಸೋಮಣ್ಣ ಅವರು, ಅಂತಹ ಅಪಾಯಕಾರಿ ಮನೆಗಳನ್ನು ಕೆಡವಿ ಹಾಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೆçಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು. ಮಳೆ ಹಾನಿ ಸಂತ್ರಸ್ತರಿಗೆ ಈಗಾಗಲೇ ಜಂಬೂರು, ಕೆ ನಿಡುಗಣೆ, ಮದೆನಾಡು ಸೇರಿದಂತೆ ವಿವಿಧೆಡೆ ಸರಕಾರದಿಂದ ಮನೆಗ ಳನ್ನು ನಿರ್ಮಿಸಿ ಕೊಡಲಾಗಿದೆ. ಆದರೂ ಅನೇಕರು ತಮ್ಮ ಹಳೆಯ ಮನೆಗಳನ್ನು ತೆರವು ಮಾಡದೆ ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಶಾಸಕರಾದ ಕೆ.ಜಿ. ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರು ಸಭೆಯಲ್ಲಿ ಗಮನಸೆಳೆದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಸರಕಾರದಿಂದ ನೂತನ ಮನೆ ನೀಡಿದ ಬಳಿಕವೂ ಅಪಾಯಕಾರಿ ಸ್ಥಿತಿಯಲ್ಲಿರುವ ಹಳೆಯ ಮನೆಗಳಲ್ಲಿ ವಾಸಿಸುತ್ತಿರುವುದು ಸರಿಯಲ್ಲ. ಕೂಡಲೇ ಸೂಕ್ಷ್ಮ ಪ್ರದೇಶಗಳಲ್ಲಿ ಇರುವ ಮನೆಗಳನ್ನು ಕೆಡವಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಿದರು.
ಬದಲಿ ಜಾಗಕ್ಕೆ ಕ್ರಮ
ವೀರಾಜಪೇಟೆಯ ಅಪಾಯಕಾರಿ ಅಯ್ಯಪ್ಪಬೆಟ್ಟದಲ್ಲಿ ವಾಸಿಸುತ್ತಿರುವವರಿಗೆ ಬದಲಿ ಜಾಗ ನೀಡಲು ಕ್ರಮ ಕೈಗೊಳ್ಳುವಂತೆಯೂ ಸಚಿವರು ಇದೇ ಸಂದರ್ಭ ಸೂಚಿಸಿದರು.
ವೈದ್ಯರ ಕೊರತೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಕೆ. ಮೋಹನ್ ಅವರಿಂದ ಸಚಿವರು ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಕಾರ್ಯಪ್ಪ ಅವರು ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದ್ದು, ಭರ್ತಿ ಮಾಡಬೇಕಿದೆ ಎಂದು ಗಮನ ಸೆಳೆದರು.