ನ್ಯಾಯಾಲಯ ಸಮುಚ್ಚಯ ನಿರ್ಮಿಸಲು 12 ಕೋ. ರೂ.ಪ್ರಸ್ತಾವನೆ
ಕುಶಾಲನಗರಕ್ಕೆ ಆಡಳಿತಾತ್ಮಕ ನ್ಯಾಯಮೂರ್ತಿ ಭೇಟಿ
Team Udayavani, Oct 14, 2019, 5:18 AM IST
ಮಡಿಕೇರಿ :ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರು ಶನಿವಾರ ಕುಶಾಲನಗರಕ್ಕೆ ಭೇಟಿ ನೀಡಿ, ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ನಿರ್ಮಿಸಲುದ್ದೇಶಿಸಿರುವ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಸಮುಚ್ಚಯ ಮತ್ತು ನ್ಯಾಯಮೂರ್ತಿಗಳ ವಸತಿ ಗೃಹದ ಸ್ಥಳ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಕುಶಾಲನಗರದಲ್ಲಿ ಈಗಾಗಲೇ ನ್ಯಾಯಾಲಯ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ಪ್ರಸಕ್ತ ಕುಶಾಲನಗರದಲ್ಲಿ ನ್ಯಾಯಾಲಯ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸರಕಾರ ಮತ್ತು ಉತ್ಛ ನ್ಯಾಯಾಲಯದ ತೀರ್ಮಾನದಂತೆ ನೂತನ ಸಮುತ್ಛಯ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ನೂತನ ನ್ಯಾಯಾಲಯ ಸಮುತ್ಛಯ ನಿರ್ಮಾಣ ಸಂಬಂಧ 12 ಕೋಟಿ ರೂ.ಗಳ ಪ್ರಸ್ತಾವನೆ ಹಣಕಾಸು ಸಚಿವಾಲಯದ ಮುಂದಿದ್ದು, ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯದ ಅಗತ್ಯವಿದೆಯೇ ಎಂಬುದರ ಬಗ್ಗೆ ನ್ಯಾಯಮೂರ್ತಿ ಸಂದೇಶ್ ಮಾಹಿತಿ ಕಲೆಹಾಕಿದರು.
ಈ ಸಂದರ್ಭ ಮಡಿಕೇರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಮನು, ಜಿಲ್ಲಾ ಸತ್ರ ನ್ಯಾಯಾಧೀಶ ವಿ.ಮಲ್ಲಾಪುರೆ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಕವನ್, ಉಪವಿಭಾಗಾಧಿಕಾರಿ ಜವರೇಗೌಡ, ತಹಶೀಲ್ದಾರ್ ಗೋವಿಂದರಾಜು, ಕುಶಾಲನಗರ ವಕೀಲರ ಸಂಘದ ಪದಾಧಿಕಾರಿಗಳಾದ ವೆಂಕಟರಮಣ ರಾವ್, ಮೋಹನ್, ಶರತ್, ಸಂತೋಷ್ ಕುಮಾರ್, ನಂದ, ನವೀನ್, ಲೋಕೋಪಯೋಗಿ ಸಹಾಯಕ ಅಭಿಯಂತರ ಸೈಜನ್ ಪೀಟರ್, ಕಂದಾಯ ಇಲಾಖೆಯ ಮಧುಸೂದನ್, ಗೌತಮ್ ಮತ್ತಿತರರು ಹಾಜರಿದ್ದರು.
ಮನವರಿಕೆ
ಈ ಸಂದರ್ಭ ಸ್ಥಳದಲ್ಲಿದ್ದ ಕುಶಾಲನಗರ ಬಾರ್ ಅಸೋಸಿಯೇಷನ್ ಪ್ರಮುಖರು, ಕುಶಾಲನಗರ ಈಗಾಗಲೆ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಾರಣ ಶಾಶ್ವತ ನ್ಯಾಯಾಲಯ ಕಟ್ಟಡದ ಅವಶ್ಯಕತೆ ಅಧಿಕವಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ ಸೀನಿಯರ್ ಸಿವಿಲ್ ನ್ಯಾಯಮೂರ್ತಿಗಳ ಸೇವೆ ಅವಶ್ಯವಿರುವ ಬಗ್ಗೆ ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರಬಾಬು ನ್ಯಾಯಮೂರ್ತಿಗಳಿಗೆ ಬೇಡಿಕೆಯಿಟ್ಟರು. ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಲಯದ ಬಾಡಿಗೆ ಕಟ್ಟಡಕ್ಕೆ ಭೇಟಿ ನೀಡಿದ ಸಂದೇಶ್ ಕುಮಾರ್ ನ್ಯಾಯಾಲಯ ಕಲಾಪ ಕಾರ್ಯಗಳ ಮಾಹಿತಿ ಪಡೆದುಕೊಂಡರು.