ಕ್ರಿಯಾಶೀಲತೆ, ಚಲನಶೀಲತೆಗೆ ಯೋಗ ಸಹಕಾರಿ: ಅಪ್ಪಚ್ಚುರಂಜನ್
ಅಂತಾರಾಷ್ಟ್ರೀಯ ಯೋಗ ದಿನಾಚರಣೆ
Team Udayavani, Jun 23, 2019, 5:06 AM IST
ಮಡಿಕೇರಿ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ ವತಿಯಿಂದ “ಹೃದಯಕ್ಕಾಗಿ ಯೋಗ’ ಎಂಬ ಘೋಷ ವಾಕ್ಯದೊಂದಿಗೆ ಶುಕ್ರವಾರ ನಗರದ ಮೈತ್ರಿ ಸಭಾಂಗಣದಲ್ಲಿ ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.
ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಎಂ.ಪಿ.ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ., ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಭೂದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ, ಡಿವೈಎಸ್ಪಿ ಸುಂದರರಾಜ್, ಜಿಲ್ಲಾ ಆಯುಷ್ ಅಧಿಕಾರಿ ಡಾ| ಬಿ.ಎಚ್.ರಾಮಚಂದ್ರ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ| ಕಾರ್ಯಪ್ಪ, ಯೋಗ ಶಿಕ್ಷಕರಾದ ಮಹೇಶ್ ಕುಮಾರ್ ಯೋಗ ದಿನಾಚರಣೆಯ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್ ಅವರು ಸದಾ ಕ್ರಿಯಾಶೀಲತೆ ಮತ್ತು ಚಲನಶೀಲತೆಯಿಂದ ಇರಲು ಯೋಗ ಸಹಕಾರಿ ಎಂದರು.
ಪ್ರತಿನಿತ್ಯ ಯೋಗ ಮಾಡಿದ್ದಲ್ಲಿ ಹಲವು ರೋಗಗಳಿಂದ ದೂರವಿರಬಹುದು. ಹಾಗೆಯೇ ಮನಸ್ಸಿನ ಏಕಾಗ್ರತೆಗೆ ಮತ್ತು ಒತ್ತಡದ ಬದುಕಿನಿಂದ ದೂರವಿರಲು ಯೋಗ ಅತ್ಯಗತ್ಯ ಎಂದು ಅವರು ಪ್ರತಿಪಾಧಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಅವರು ಮಾತನಾಡಿ ಆಧುನಿಕ ಜಗತ್ತಿನಲ್ಲಿ ಮೊಬೈಲ್, ವಾಟ್ಸ್ ಆಫ್, ಪೇಸ್ಬುಕ್, ಟ್ವಿಟರ್ ಮತ್ತಿತರ ಜಂಜಾಟದಲ್ಲಿ ಮುಳುಗಿರುತ್ತೇವೆ. ಇಂತಹ ಒತ್ತಡಗಳಿಂದ ದೂರವಿರಲು, ಪ್ರತಿನಿತ್ಯ ಯೋಗಕ್ಕೆ ಸಮಯ ನಿಗಧಿ ಮಾಡುವುದು ಅಗತ್ಯ ಎಂದು ಅವರು ಹೇಳಿದರು.
ಜಗತ್ತಿನ 177 ರಾಷ್ಟ್ರಗಳಲ್ಲಿ ಜೂನ್, 21 ರಂದು ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯೋಗದ ಮಹತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಗ್ರಾಮ ಗ್ರಾಮಗಳಲ್ಲೂ ಸಹ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಡಾ| ಬಿ.ಎಚ್.ರಾಮಚಂದ್ರ ಸ್ವಾಗತಿ ಸಿದರು. ಡಾ| ಅಮೂಲ್ಯ ನಿರೂಪಿಸಿ, ವಂದಿಸಿದರು.
ಸದೃಢರಾಗಿರಲು
ಆಯುಷ್ ವೈದ್ಯರಾದ ಡಾ| ಎಂ.ಬಿ.ಶ್ರೀನಿವಾಸ್ ಅವರು ಮಾತನಾಡಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರಲು ಯೋಗ ಸಹಕಾರಿ. ಮನಸ್ಸನ್ನು ನಿಯಂತ್ರಣದಲ್ಲಿಡಲು ಹಾಗೂ ಸಮಸ್ಥಿತಿ ಕಾಪಾಡಲು ಯೋಗ ಒಳ್ಳೆಯದು. ಯೋಗದಿಂದ ಹೃದಯ ಸಂರಕ್ಷಣೆ ಶರೀರ ದೃಢತೆ, ಮಾನಸಿಕ ಸ್ವಾಸ್ಥ್ಯ, ಶರೀರದ ಬೆಳವಣಿಗೆ, ದೃಢತೆ ಹಾಗೂ ರೋಗ ಬಾರದಂತೆ ಶರೀರದಲ್ಲಿ ಪ್ರಕ್ರಿಯೆ ಉಂಟಾಗುತ್ತದೆ ಎಂದು ಅವರು ಹೇಳಿದರು.