“ಯುವಪೀಳಿಗೆಯ ಆಸಕ್ತಿಯಲ್ಲಿ ಸಾಹಿತ್ಯ ಭವಿಷ್ಯ’
10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ
Team Udayavani, Aug 3, 2019, 5:30 AM IST
ಮಡಿಕೇರಿ: ಕೊಡಗಿನ ಪವಿತ್ರ ಮಣ್ಣಿನಲ್ಲಿ ಸಮೃದ್ದ ಸಾಹಿತ್ಯ ಕೃಷಿಯಲ್ಲಿ ಸಾಕಷ್ಟು ಮಂದಿ ತೊಡಗಿಸಿಕೊಂಡಿದ್ದು. ಮಹಿಳೆಯರಿಗೆ ಸಾಹಿತ್ಯ ರಂಗದಲ್ಲಿ ಆಸಕ್ತಿ ಹೆಚ್ಚಿರುವುದು ಗಮನಾರ್ಹವಾಗಿದೆ.
ಸಾಹಿತ್ಯ,ಸಾಂಸ್ಕೃತಿಕ ಜೀವನದಲ್ಲಿ ಜಿಲ್ಲೆಯ ಯುವಪೀಳಿಗೆಯೂ ಹೆಚ್ಚು ಆಸಕ್ತಿ ವಹಿಸುತ್ತಿರುವ ಬೆಳವಣಿಗೆ ಕೊಡಗಿನ ಭವಿಷ್ಯ ಈ ವಿಚಾರದಲ್ಲಿ ಉಜ್ವಲವಾಗಿದೆ ಎಂದು ಸಾಹಿತಿ ಪತ್ರಕರ್ತ ಚಿ.ನಾ.ಸೋಮೇಶ್ ಹೇಳಿದರು.
ಚೇರಂಬಾಣೆ ಕೊಡವ ಸಮಾಜದಲ್ಲಿ ಆಯೋಜಿತ ಮಡಿಕೇರಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು.
ಸಮ್ಮೇಳನಾಧ್ಯಕ್ಷ ಕಿಗ್ಗಾಲು ಗಿರೀಶ್ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಚೇರಂಬಾಣೆಯಂಥ ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿ ನಡೆದಿದ್ದು ಸಂತೋಷ ತಂದಿದೆ. ಎಂದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ.ಜಯರಾಮ್ ಮಾತನಾಡಿ, ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ಸಂಬಂಧಿತ ಕಾರ್ಯಕ್ರಮಗಳು ಹೆಚ್ಚುತ್ತಲೇ ಇರಬೇಕು. ಎಂದು ಕರೆ ನೀಡಿದರು.
ತಲಕಾವೇರಿ – ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಕೊಡಗಿನಲ್ಲಿ ತಾನು ಗಮನಿಸಿದಂತೆ ಮಹಿಳೆಯರಿಗೆ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿಯಿದೆ. ಹೀಗಾಗಿಯೇ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಕಾಣಿಸುತ್ತಾರೆ ಎಂದದರು.
ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ , ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಗೌರವ ಕಾರ್ಯದರ್ಶಿ ಕೆ.ಎಸ್.ರಮೇಶ್, ಚೇರಂಬಾಣೆ ಗ್ರಾ.ಪಂ. ಅಧ್ಯಕ್ಷ ಅಶೋಕ್, ಚೇರಂಬಾಣೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮುಕ್ಕಾಟಿ ಎನ್.ಮಾದಪ್ಪ ಉಪಸ್ಥಿತರಿದ್ದರು.ಕಸಾಪ ಜಿಲ್ಲಾ ನಿರ್ದೇಶಕ ಜೋಯಪ್ಪ ಸ್ವಾಗತಿಸಿದರು. ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ
ಕನ್ನಡ ನಾಡು, ನುಡಿ, ಸಾಹಿತ್ಯ, ನೆಲ, ಜಲ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರುಗಳನ್ನು ಸಮ್ಮಾನಿಸಲಾಯಿತು. ಕ್ರೀಡಾಕ್ಷೇತ್ರದಿಂದ ಚೇರಂಬಾಣೆಯ ಮೇಲಾಟಂಡ ಅರುಣ್ ಉತ್ತಪ್ಪ, ಸಮಾಜ ಸೇವೆಗಾಗಿ ಮಹದೇವಪೇಟೆಯ ಮಹಿಳಾ ಸಹಕಾರ ಸಂಘ, ಮಾಧ್ಯಮ ಕ್ಷೇತ್ರದಿಂದ ಅನಿಲ್ ಎಚ್.ಟಿ. ಶಿಕ್ಷಣ ಕ್ಷೇತ್ರದಿಂದ ಚೆಟ್ಟಿಮಾನಿಯ ಕೇಕಡ ಇಂದುಮತಿ, ಸಾಹಿತ್ಯ ಕ್ಷೇತ್ರದಿಂದ ಚೆಂಬು ಗ್ರಾಮದ ಹೊಸೂರು ಸಂಗೀತ ರವಿರಾಜ್, ಉನ್ನತ ಹುದ್ದೆಗಾಗಿ ಮಡಿಕೇರಿಯ ಪಿ.ಎಂ. ಸಚಿನ್ ಅವರನ್ನು ಸಮ್ಮಾನಿಸಲಾಯಿತು. ಕೃಷಿ ಕ್ಷೇತ್ರದಿಂದ ಚೇರಂಬಾಣೆಯ ಜಿ.ಈ. ಪಳಂಗಪ್ಪ, ನೃತ್ಯ ಕ್ಷೇತ್ರದಿಂದ ಮೂರ್ನಾಡಿನ ಕಾವ್ಯಶ್ರೀ ಸಿನಿಮಾ ಕ್ಷೇತ್ರದಿಂದ ಚೇರಂಬಾಣೆಯ ಕೊಟ್ಟುಕತ್ತಿರ ಪ್ರಕಾಶ್, ವೈದ್ಯಕೀಯ ಕ್ಷೇತ್ರದಿಂದ ಡಾ| ಎಚ್ ಎಸ್. ಉರಾಳ, ಸಂಗೀತ ಕ್ಷೇತ್ರದಿಂದ ಮಡಿಕೇರಿಯ ಕೋದಂಡ ಗೌರು ಗಣಪತಿ, ರಂಗಭೂಮಿಯಿಂದ ಅರ್ವತ್ತೂಕ್ಲಿನ ತೆನ್ನೀರ ರಮೇಶ್ ಪೊನ್ನಪ್ಪ ಅವರನ್ನು ಕಸಾಪದಿಂದ ಅಭಿನಂದಿಸಲಾಯಿತು. ಹೈನುಗಾರಿಕೆ ಕ್ಷೇತ್ರದಿಂದ ಮಡಿಕೇರಿಯ ಮುರಾದ್, ಯುವ ಪ್ರತಿಭೆ ಮರಗೋಡಿನ ಪಿ.ಆರ್. ಆರ್ಯ, ಯಕ್ಷಗಾನದಲ್ಲಿ ಸಂಪಾಜೆಯ ಬಿ.ಜೆ. ಯಶೋಧರ, ವಿಶೇಷ ಪ್ರತಿಭೆ ಕೊಳಗದಾಳಿನ ಚೀರಮಂಡ ವಾಣಿ ಚಂಗುವಮ್ಮಯ್ಯ, ವಿಜ್ಞಾನ ಕ್ಷೇತ್ರದಿಂದ ಚೇರಂಬಾಣೆಯ ಲೋಕೇಶ್, ಕಲೆ ಕ್ಷೇತ್ರದಿಂದ ಗೋಪಾಲ ಅವರನ್ನು ಸಮ್ಮಾನಿಸಲಾಯಿತು.