ಮಂಡ್ಯ ನಗರ ಸ್ಟಾರ್ಟ್ ಸಿಟಿ ನಮ್ಮ ಗುರಿ
ದೇಶದ ಅಭಿವೃದ್ಧಿಗಾಗಿ ಉತ್ತಮ ಬಜೆಟ್ ಮಂಡನೆ ! ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ನಾರಾಯಣಗೌಡ
Team Udayavani, Feb 14, 2021, 8:44 PM IST
ಮಂಡ್ಯ: ನಗರವನ್ನು ಸ್ಮಾರ್ಟ್ ಸಿಟಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಕೇಂದ್ರ ಬಜೆಟ್ನ ಅವಲೋಕನ ಕುರಿತು ನಡೆದ ಸಂವಾದದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಜನಪರ ಹಾಗೂ ದೇಶದ ಅಭಿವೃದ್ಧಿಗಾಗಿ ಉತ್ತಮ ಬಜೆಟ್ ಮಂಡಿಸಿದೆ. ಅದರಂತೆ ಮಂಡ್ಯ ನಗರವನ್ನು ಸ್ಮಾರ್ಟ್ ಸಿಟಿ ಮಾಡಲು ಮನವಿ ಮಾಡಲಾಗಿದೆ. ಈಗಾಗಲೇ ಕೇಂದ್ರ ಮಂಡ್ಯ ನಗರಕ್ಕೆ ಬೇಕಾದ ಮೂಲಸೌಲಭ್ಯಗಳ ಬಗ್ಗೆ ಪಟ್ಟಿ ಸಲ್ಲಿಸುವಂತೆ ಸೂಚಿಸಿದೆ. ಅದರಂತೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪಟ್ಟಿ ಸಿದ್ಧಪಡಿಸಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆಗೆ ವಿರೋಧ: ಮಂಡ್ಯ ನಗರ ವನ್ನು ಮಹಾನಗರ ಪಾಲಿಕೆ ಮಾಡಲು ಜನಸಂಖ್ಯೆಯ ಕೊರತೆ ಇದೆ. ಜನಸಂಖ್ಯೆ ಆಧಾರದ ಮೇಲೆ ಮಹಾನಗರ ಪಾಲಿಕೆ ಮಾಡಬೇಕಾಗಿದೆ. ಇದಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿಕೊಳ್ಳಬೇಕಾಗಿದೆ. ಗ್ರಾಮಗಳನ್ನು ತೆರಿಗೆ ಕಡಿಮೆ ಇದೆ. ನಗರಕ್ಕೆ ಸೇರಿಸಿಕೊಂಡರೆ ತೆರಿಗೆ ಹೆಚ್ಚುವುದರಿಂದ ಜನರು ಒಪ್ಪುವುದಿಲ್ಲ ಎಂದು ಹೇಳುವ ಮೂಲಕ ಮಹಾನಗರ ಪಾಲಿಕೆ ವಿಚಾರ ಪ್ರಸ್ತಾಪಕ್ಕೆ ತೆರೆ ಎಳೆದರು.
ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ: ಮಂಡ್ಯದಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಕನಿಷ್ಠ 25 ಎಕರೆ ಜಮೀನು ಅಗತ್ಯವಿದೆ. ಈಗಾಗಲೇ ಜಮೀನು ಪರಿಶೀಲನೆ ನಡೆಯುತ್ತಿದೆ ಎಂದರು.
ಮೈಷುಗರ್ ಕಾರ್ಖಾನೆ ಆರಂಭ: ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಮೊದಲನೆಯದಾಗಿ ಮೈಷುಗರ್ ಕಾರ್ಖಾನೆ ಆರಂಭಿಸುವ ಬಗ್ಗೆ ಘೋಷಣೆಯಾಗಲಿದೆ. ಖಾಸಗಿಯವರಿಗೆ ವಹಿಸುವ ಬಗ್ಗೆ ತೀರ್ಮಾನಿಸಲಾ ಗಿದೆ. ಒ ಅಂಡ್ ಎಂ ಅಥವಾ ಸರ್ಕಾರವೇ ನಡೆಸಿದರೆ, ಮುಂದೆ ಕಾರ್ಖಾನೆ ಮತ್ತೆ ಅದೋಗತಿಗೆ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಖಾಸಗಿಯವರಿಗೆ ವಹಿಸಿದರೆ ಉತ್ತಮವಾಗಿ ನಡೆಯಲಿದೆ ಎಂಬುದು ನಮ್ಮ ಅಭಿಪ್ರಾಯ. ಆದರೆ, ಕಾರ್ಖಾನೆಯನ್ನು ಸರ್ಕಾರ ಅಥವಾ ಸರ್ಕಾರಿ ಸ್ವಾಮ್ಯದಲ್ಲಾದರೂ ಆರಂಭಿಸಬೇಕು ಎಂದರು.
ಮೈಷುಗರ್ ಕಾರ್ಖಾನೆಗೆ ಸೇರಿದ ಸಾವಿರಾರು ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನೆಲ್ಲ ತೆರವುಗೊಳಿಸಿ ಮೈಷುಗರ್ ಆಸ್ತಿಯನ್ನು ರಕ್ಷಣೆ ಮಾಡುವ ಉದ್ದೇಶದಿಂದ ಅಧ್ಯಕ್ಷರನ್ನು ನೇಮಿಸ ಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಲೆ ಏರಿಕೆ ಆಗಲ್ಲ: ಎಲ್ಲ ಉತ್ಪನ್ನಗಳ ಮೇಲೆ ಕೃಷಿ ಸೆಸ್ ಹಾಕಿರುವುದರಿಂದ ಯಾವುದೇ ರೀತಿಯ ಬೆಲೆ ಏರಿಕೆ ಆಗಲ್ಲ. ಪೆಟ್ರೋಲ್, ಡಿಸೇಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ತೀರ್ಮಾನವಾಗುತ್ತದೆ. ಅದನ್ನು ತೈಲ ಮಾರುಕಟ್ಟೆ ನಿರ್ಧರಿಸುತ್ತದೆ ಎಂದರು.
ಸಂವಾದದಲ್ಲಿ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ನೀಡಿರುವ ಯೋಜನೆಗಳು ಹಾಗೂ ಅನುದಾನದ ಬಗ್ಗೆ ಪ್ರತಿ ಬಿಡುಗಡೆ ಮಾಡಿದರು. ಇದರ ಜತೆಗೆ ಮಂಡ್ಯ ನಗರದಲ್ಲಿ ಫೆ.19ರಿಂದ ಮೂರು ದಿನಗಳ ಕಾಲ ನಡೆಯುವ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ.ವಿಜಯಕುಮಾರ್, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಡಾ.ಸಿದ್ದರಾಮಯ್ಯ, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮೈಷುಗರ್ ಅಧ್ಯಕ್ಷ ಶಿವಲಿಂಗೇಗೌಡ, ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಮಾಜಿ ಅಧ್ಯಕ್ಷ ಕೆ.ನಾಗಣ್ಣ ಗೌಡ, ಬಿಜೆಪಿ ವಕ್ತಾರ ಕಾಳೇಗೌಡ ಹಾಜರಿದ್ದರು.