ಹುಣಸೂರು: ವಿದ್ಯುತ್ ಸ್ಪರ್ಶ; ಎರಡು ಜಾನುವಾರು ಸಾವು
ಇಂಜಿನಿಯರ್ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆರೋಪ
Team Udayavani, Jan 8, 2023, 10:33 AM IST
ಹುಣಸೂರು: ಮೇಯಲು ಬಿಟ್ಟಿದ್ದ ಹಸುಗಳಿಗೆ ತುಂಡಾಗಿ ಬಿದ್ದಿದ್ದ ತಂತಿಯಿಂದ ವಿದ್ಯುತ್ ಪ್ರವಹಿಸಿ ಎರಡು ಜಾನುವಾರುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಾವಡಗೆರೆಯಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಗಾವಡಗೆರೆ ಗ್ರಾಮದ ಮರಹಾಲನಾಯಕ ಎಂಬವರಿಗೆ ಸೇರಿದ ಎರಡು ಜಾನುವಾರುಗಳನ್ನು ಮೇಯಲು ಬಿಟ್ಟಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ಜಾನುವಾರುಗಳು ಸ್ಥಳದಲ್ಲಿಯೇ ಮೃತಟ್ಟಿದ್ದು, ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಶಾಸಕ ಎಚ್.ಪಿ.ಮಂಜುನಾಥ್, ಎಇಇ ಸಿದ್ದಪ್ಪರೊಂದಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.
ತಿಂಗಳಾದರೂ ದುರಸ್ತಿ ಮಾಡಲ್ಲ:
ವಿದ್ಯುತ್ ತಂತಿ ನೇತಾಡುತ್ತಿರುವ ಬಗ್ಗೆ ಇಂಜಿನಿಯರ್ ಗಮನಕ್ಕೆ ತಂದರೂ ದುರಸ್ತಿಗೆ ಮುಂದಾಗಿಲ್ಲ, ಇಂಜಿನಿಯರ್ ನಿರ್ಲಕ್ಷ್ಯದಿಂದ ಜಾನುವಾರುಗಳು ಸಾವನ್ನಪ್ಪಿವೆ ಎಂಬ ಸ್ಥಳೀಯ ದೂರಿಗೆ, ಹೀಗಾದರೆ ಹೇಗೆಂದು ಇಂಜಿನಿಯರ್ರನ್ನು ತರಾಟೆಗೊಳಪಡಿಸಿ ತಪ್ಪಿತಸ್ಥ ಅಧಿಕಾರಿಗಳಿಂದಲೇ ಪರಿಹಾರ ಭರಿಸಬೇಕು. ಈ ಬಗ್ಗೆ ಕ್ರಮ ವಹಿಸುವಂತೆ ಎಇಇ ಸಿದ್ದಪ್ಪರಿಗೆ ಶಾಸಕರು ಸೂಚಿಸಿದರು.
ವೈಯಕ್ತಿಕ ಪರಿಹಾರ:
ಜಾನುವಾರುಗಳನ್ನು ಕಳೆದುಕೊಂಡ ಮರ ಹಾಲನಾಯಕರಿಗೆ ಶಾಸಕರು ವೈಯಕ್ತಿಕವಾಗಿ 20 ಸಾವಿರ ರೂ. ನೆರವು ನೀಡಿದರು. ಸಂಕಷ್ಟಕ್ಕೊಳಗಾಗಿರುವ ಜಾನುವಾರು ಮಾಲಿಕರಿಗೆ ಸೂಕ್ತ ಪರಿಹಾರ ವಿತರಿಸಲು ಕ್ರಮವಹಿಸುವಂತೆ ಎಇಇಗೆ ಸೂಚಿಸಿದರು. ಈ ವೇಳೆ ಗಾವಡಗೆರೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದೇವರಾಜ್, ತಾಪಂ ಮಾಜಿ ಸದಸ್ಯ ಗಣಪತಿ ಇಂಡೋಲ್ಕರ್, ಕುಮಾರ್, ನಾರಾಯಣ್ ಮತ್ತಿತರ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಈ ಪ್ರಕರಣದ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.